
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ: ಇಲ್ಲಿನ ಗೋರೆಗಾಂವ್ ಪೂರ್ವದ ಸಹಕಾರ್ ವಾಡಿಯ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಜುಲೈ 28 ಮತ್ತು 29 ರಂದು ಎರಡು ದಿನಗಳ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡವು.
ಜುಲೈ 28ರ ಮಂಗಳವಾರ ರಾತ್ರಿ “ಏಕಾಹ ಭಜನೆ” ಉದ್ಘಾಟನೆಗೊಂಡು, ಬಳಿಕ “ಓಂ ನಮೋ ಭಗವತೇ ನಿತ್ಯಾನಂದಾಯ” ನಾಮಸ್ಮರಣೆ ಆರಂಭಗೊಂಡಿತು. ಜುಲೈ 29ರ ಬುಧವಾರ ಬೆಳಗಿನವರೆಗೆ ಏಕಾಹ ಭಜನೆಯ ಮಂಗಲೋತ್ಸವ ನಡೆಯಿತು.
ಬೆಳಿಗ್ಗೆ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ, ಆನಂತರ ತೀರ್ಥ ಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಭಜನಾ ಸಮಿತಿಯ ಸದಸ್ಯರಿಂದ ಭಜನ ಸಂಕೀರ್ತನೆ ಹಾಗೂ ಮಧ್ಯಾಹ್ನ ಮಹಾಪೂಜೆ ನೆರವೇರಿತು.

ಮಹಾಮಂಗಳಾರತಿಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು. ತೀರ್ಥಹಳ್ಳಿಯ ರತ್ನಮ್ಮ ದೇವಪ್ಪ ಗೌಡ ಅವರ ಮಕ್ಕಳಿಂದ ಹಾಗೂ ದಿವಂಗತ ವೀರಮ್ಮ ಮೂಲ್ಯ ಅವರ ನೆನಪಿಗಾಗಿ ಅವರ ಮಕ್ಕಳಿಂದ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಯುವ ಘಟಕದ ಸದಸ್ಯರಿಂದ “Lads of Sadguru” ಎಂಬ ವೈವಿಧ್ಯಮಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಾಘು ಮೂಲ್ಯ, ಮುಖ್ಯ ಸಂಚಾಲಕ ಡಾ. ಶೈಲೇಶ್ ಜಿ., ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ. ಕೋಟ್ಯಾನ್, ಮಹಿಳಾ ವಿಭಾಗದ ಶಾಂಭವಿ ಕೆ. ಪೂಜಾರಿ, ಪೂರ್ಣಿಮಾ ಶೆಟ್ಟಿ, ಸುಮತಿ ಪೂಜಾರಿ, ರೇವತಿ ಸಾಲಿಯಾನ್ ಹಾಗೂ ಪೂಜಾ ಸಮಿತಿಯ ವಿಶ್ವನಾಥ್ ಎಸ್. ಪೂಜಾರಿ, ರವಿ ಶೆಟ್ಟಿ, ಪ್ರೇಮಲತಾ ಆರ್. ಮೂಲ್ಯ, ಸುಧಾಕರ ಅಮೀನ್, ಯುವ ಘಟಕದ ಸದಸ್ಯರು ಮತ್ತು ವ್ಯವಸ್ಥಾಪಕ ಸಮಿತಿಯವರು ಪ್ರಸಾದ ವಿತರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಶಾಸಕರು, ನಗರಸೇವಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಿತ್ಯಾನಂದ ಗುರುಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಪಾಲ್ಗೊಂಡು ಗುರುದೇವರ ಮಹಾಪ್ರಸಾದ ಸ್ವೀಕರಿಸಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಉಪ ಕಾರ್ಯಾಧ್ಯಕ್ಷರಾದ ಅಡ್ವೋಕೇಟ್ ಸೋಮನಾಥ್ ಅಮೀನ್, ನಿರ್ದೇಶಕರುಗಳಾದ ಗಂಗಾಧರ್ ಜೆ. ಪೂಜಾರಿ, ಗಣೇಶ್ ಡಿ. ಪೂಜಾರಿ, ಹೋಟೆಲ್ ಉದ್ಯಮಿ ರವೀಂದ್ರ ಎಂ. ಸಾಲ್ಯಾನ್, ಜಯ ಸಿ. ಸುವರ್ಣ ಮಹಿಳಾ ಅಭಿಮಾನಿ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಬಬಿತಾ ಜೆ. ಕೋಟ್ಯಾನ್, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಸಾಂತಾಕ್ರೂಜ್ ಘಟಕದ ಜೊತೆ ಕಾರ್ಯದರ್ಶಿ ಬಬಿತಾ ಡಿ. ಪೂಜಾರಿ, ಸಮಾಜ ಸೇವಕರಾದ ಶಕುಂತಲಾ ಕರ್ಕೇರ, ಚಂದ್ರಹಾಸ ಅಮೀನ್, ಶ್ರೀಧರ್ ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.




