ದಹಿಸರ್ (ಮುಂಬೈ): ದಹಿಸರ್ ಪೂರ್ವದ ರಾಧಾಕೃಷ್ಣ ನಗರ, ಎಸ್. ಎನ್. ದುಬೆ ಮಾರ್ಗ, ರಾವಲ್ಪಾಡದಲ್ಲಿ ಸುಮಾರು 26 ವರ್ಷಗಳ ಹಿಂದೆ ಚೆನ್ನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ, ಪ್ರತಿವರ್ಷದಂತೆ ಈ ಬಾರಿಯೂ ಶ್ರಾವಣ ಮಾಸದ ಪ್ರಯುಕ್ತ 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆಯು ಇದೇ ಶನಿವಾರ, ಆಗಸ್ಟ್ 22ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಕಾರ್ಯಕ್ರಮಗಳ ವಿವರ:
- ಬೆಳಿಗ್ಗೆ 7:00 ರಿಂದ: ಶ್ರೀ ಗಣಪತಿ, ಶ್ರೀ ಶನೀಶ್ವರ ದೇವರು, ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ಚಾಮುಂಡಿ-ಗುಳಿಗ ದೈವಗಳಿಗೆ ಪಂಚಾಮೃತ ಅಭಿಷೇಕ.
- ಮಧ್ಯಾಹ್ನ 2:00 ರಿಂದ ಸಂಜೆ 6:00 ರವರೆಗೆ: ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ.
- ರಾತ್ರಿ 7:30 ರಿಂದ: ಚಾಮುಂಡಿ-ಗುಳಿಗ ದೈವಗಳ ಆರಾಧನೆ, ಆವೇಶ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
ಕ್ಷೇತ್ರದ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನಗಳಿಂದ ಸಹಕರಿಸಿ, ಗಂಧ-ಪ್ರಸಾದ ಸ್ವೀಕರಿಸಿ ಶ್ರೀ ದೈವ-ದೇವರುಗಳ ಕೃಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ ಕೋರಿದೆ.




