ಮಂಗಳೂರು, ಆ. 21: ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಶುಕ್ರವಾರ ಕೊಟ್ಟಾರ ಚೌಕಿಯ ಪ್ರೀತಿರಾಜ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪೂರಕ ಶಕ್ತಿಯಾಗಿದ್ದು, ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘವು ಪಾರದರ್ಶಕ ಆಡಳಿತ, ಸದಸ್ಯಕೇಂದ್ರಿತ ಸೇವೆ ಹಾಗೂ ಜನಸ್ನೇಹಿ ಕಾರ್ಯಚಟುವಟಿಕೆಗಳ ಮೂಲಕ ಉತ್ತಮ ಹೆಸರು ಗಳಿಸಿದೆ. ನೂತನ ಕಚೇರಿಯ ಮೂಲಕ ಸಂಘವು ಮತ್ತಷ್ಟು ವಿಸ್ತಾರಗೊಂಡು ಸಮಾಜಸೇವೆಯಲ್ಲಿ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸದಸ್ಯರ ವಿಶ್ವಾಸ ಮತ್ತು ಸೇವಾ ಮನೋಭಾವವೇ ಸಂಘದ ಯಶಸ್ಸಿನ ಬುನಾದಿಯಾಗಿದ್ದು, ನೂತನ ಕಚೇರಿಯ ಮೂಲಕ ಇನ್ನಷ್ಟು ಪರಿಣಾಮಕಾರಿ ಹಾಗೂ ಗುಣಮಟ್ಟದ ಸೇವೆಗಳನ್ನು ಸದಸ್ಯರಿಗೆ ಒದಗಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಅಕ್ಷತಾ ಕಡ್ರಿ ವಹಿಸಿದ್ದರು.
ಗೌರವ ಉಪಸ್ಥಿತರಾಗಿ ಎನ್.ಡಿ. ಸನ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ. ಡಿ. ಪೂಜಾರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಶ್ರೀ ನಂದನ್ ಬಿ. ಎನ್., ಸಮಾಜಸೇವಕರಾದ ಶ್ರೀ ರವಿ ಚಿಲಿಂಬಿ, ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಸದಸ್ಯರು, ಠೇವಣಿದಾರರು ಹಾಗೂ ಗಣ್ಯರು ಭಾಗವಹಿಸಿ ನೂತನ ಕಚೇರಿಯ ಶುಭಾರಂಭಕ್ಕೆ ಸಾಕ್ಷಿಯಾದರು.




