ಮುಂಬೈನ ಭುಲೇಶ್ವರ ಪ್ರದೇಶದಲ್ಲಿ ಗಣೇಶೋತ್ಸವದ ಆಗಮನದ ಸಂಭ್ರಮದ ವೇಳೆಯಲ್ಲೇ ಘೋರ ದುರಂತವೊಂದು ಸಂಭವಿಸಿದ್ದು, ಗಣೇಶ ಭಕ್ತರಲ್ಲಿ ತೀವ್ರ ಶೋಕ ಆವರಿಸಿದೆ. ಭೈಕಲಾದಿಂದ ಭುಲೇಶ್ವರಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಗುತ್ತಿದ್ದ ‘ಭುಲೇಶ್ವರಚಾ ರಾಜ’ ಎಂದೇ ಪ್ರಸಿದ್ಧವಾದ 22 ಅಡಿ ಎತ್ತರದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನ ಮೂರ್ತಿ ದಿಢೀರನೆ ಒಂದು ಬದಿಗೆ ವಾಲಿ ಬಿದ್ದಿದೆ. ಬಾಲಾರಾಮ್ ಮರ್ಚೆಂಟ್ ರಸ್ತೆಯ ಕಬುತರಖಾನಾ ಬಳಿ ಮಂಟಪದಿಂದ ಕೇವಲ 50 ರಿಂದ 60 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಮೂರ್ತಿ ವಾಲಿ ಬಿದ್ದ ರಭಸಕ್ಕೆ ಇಬ್ಬರು ಭಕ್ತರು ಜೀವ ಕಳೆದುಕೊಂಡಿದ್ದಾರೆ. ಮೃತರನ್ನು 33 ವರ್ಷದ ಸಂಕೇತ್ ನೇವಶೆ ಮತ್ತು 30 ವರ್ಷದ ಬ್ರಿಜೇಶ್ ಹೇಮಂತ್ ಜೋಶಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ 5 ವರ್ಷದ ಮಗು ಸೇರಿದಂತೆ ಒಟ್ಟು ಐದು ಜನರು ಗಾಯಗೊಂಡಿದ್ದು, ಅವರನ್ನು ಸಮೀಪದ ಜೆಜೆ ಹಾಗೂ ಜಿಟಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆಯಲ್ಲಿ ಯಾವುದೇ ತಾಣದ ಗುಂಡಿಗಳಿರಲಿಲ್ಲ, ಆದರೆ ಏಕಾಏಕಿ ನಿಯಂತ್ರಣ ತಪ್ಪಿ ಮೂರ್ತಿ ವಾಲಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೋಲಿಸರು ಹಾಗೂ ಬಿಎಂಸಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಬೃಹತ್ ಮೂರ್ತಿಗಳ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಈಗ ತೀವ್ರ ಕಳವಳ ವ್ಯಕ್ತವಾಗಿದೆ.




