
ದಹಿಸರ್: ದಹಿಸರ್ ಪೂರ್ವದ ರಾವಲ್ಪಾಡದ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 05ರಂದು ಸಮಿತಿಯ ಅಧ್ಯಕ್ಷರಾದ ಸಂತೋಷ್ ಪೂಜಾರಿಯವರ ಮುಂದಾಳತ್ವದಲ್ಲಿ ಸಂಜೆ ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು, ನಂತರ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.
ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾದ ‘ಮುದ್ದುಕೃಷ್ಣ’ ಛದ್ಮವೇಷ ಸ್ಪರ್ಧೆಯಲ್ಲಿ ಸುಮಾರು 25 ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳ ಲವಲವಿಕೆ, ಮುದ್ದುಕೃಷ್ಣ, ಬಾಲಕೃಷ್ಣ, ಗೋಪಾಲಕೃಷ್ಣ, ರಾಧಾಕೃಷ್ಣ ಮುಂತಾದ ವಿವಿಧ ವೇಷಭೂಷಣಗಳು, ಕಂದಮ್ಮಗಳ ಸಭಾಕಂಪನವಿಲ್ಲದ ನಗೆಯಾಟ ಹಾಗೂ ತುಂಟಾಟದ ನೃತ್ಯಾಭಿನಯ ನೆರೆದಿದ್ದ ಭಕ್ತಾಭಿಮಾನಿಗಳ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, “ತುಳು-ಕನ್ನಡಿಗರಿಂದ ಸ್ಥಾಪನೆಗೊಂಡ ಈ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಸ್ಥಳೀಯ ತುಳು-ಕನ್ನಡಿಗರಷ್ಟೇ ಅಲ್ಲದೆ, ಅನ್ಯ ಸಮಾಜದ ಮಕ್ಕಳಿಗೂ ಛದ್ಮವೇಷದಲ್ಲಿ ಭಾಗವಹಿಸಿ ಬಾಲಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಇದು ‘ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ’ ಎಂಬ ಸಂದೇಶವನ್ನು ಸಾರುತ್ತದೆ. ಇಂತಹ ಪುಣ್ಯಕ್ಷೇತ್ರದಲ್ಲಿ ದೇವರು ಭಕ್ತರನ್ನು ಶೀಘ್ರವಾಗಿ ಅನುಗ್ರಹಿಸುತ್ತಾನೆ,” ಎಂದು ತಿಳಿಸಿ ಸಂಘಟಕರಿಗೆ ಪ್ರೋತ್ಸಾಹ ನೀಡಿದರು.
3 ರಿಂದ 7 ವರ್ಷ ಹಾಗೂ 8 ರಿಂದ 12 ವರ್ಷದ ವಯೋಮಿತಿಯ ಪುಟಾಣಿಗಳಿಗೆ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು. ಜತೆಗೆ ಪ್ರತಿಯೊಬ್ಬ ಪುಟಾಣಿಗೂ ತುಳಸಿ ಗಿಡ, ಉಡುಗೊರೆ ಹಾಗೂ ಸಿಹಿತಿಂಡಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ರಾತ್ರಿ 10.00 ಗಂಟೆಯಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮಗಳು ಜರುಗಿದವು. ಪ್ರಧಾನ ಅರ್ಚಕರಾದ ಶ್ರೀಯುತ ವಿಜಯ್ ಉಪಾಧ್ಯಾಯ ಹಾಗೂ ತೇಜಸ್ ಭಟ್ ಅವರ ಸಹಕಾರದೊಂದಿಗೆ ಶ್ರೀ ಕೃಷ್ಣ ದೇವರಿಗೆ ರಾತ್ರಿ 12:11ಕ್ಕೆ ಮಂಗಳಾರತಿ, ನೈವೇದ್ಯ ಸಮರ್ಪಣೆ ನಡೆದು, ನಂತರ ನೆರೆದಿದ್ದ ಭಕ್ತಾಭಿಮಾನಿಗಳಿಂದ ಅರ್ಘ್ಯ ಪ್ರದಾನ ಕಾರ್ಯಕ್ರಮ ನೆರವೇರಿತು.
ಮರುದಿನ ಬೆಳಿಗ್ಗೆ ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ತುಳುನಾಡ ಶೈಲಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೊಸರುಕುಡಿಕೆ ಒಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಒಂದು ಬಹುಮಾನವನ್ನು ಸಮಿತಿಯ ಸದಸ್ಯರು ಪಡೆದುಕೊಂಡರೆ, ಇನ್ನೊಂದನ್ನು ಸ್ಥಳೀಯ 11 ವರ್ಷದ ಬಾಲಕಿ ಮಡಕೆ ಒಡೆದು ತನ್ನದಾಗಿಸಿಕೊಂಡಳು.
ಈ ಕಾರ್ಯಕ್ರಮಗಳಲ್ಲಿ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಕೋಶಾಧಿಕಾರಿ ದೀಪಕ್ ಕೆ. ಪೂಜಾರಿ, ಆಡಳಿತ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯದರ್ಶಿ ಜಯರಾಮ್ ಎನ್. ಮೆಂಡನ್ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಪುಟಾಣಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ಭಕ್ತಾಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿ, ವಂದಿಸಿದರು.




