
ಮುಂಬಯಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಕ್ರೀಯಾಶೀಲವಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ (ರಿ.) ಪ್ರತೀ ವರ್ಷ ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸುತ್ತಿದ್ದು ಈ ಸಲದ ಪ್ರಶಸ್ತಿಗೆ ಕರ್ನಾಟಕ ಸರಕಾರದ ಮಾಜಿ ಲೋಕಾಯುಕ್ತರೂ, ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರೂ ಆದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಆಯ್ಕೆಯಾಗಿದ್ದು ಪ್ರಶಸ್ತಿ ಪ್ರಧಾನ ಸಮಾರಂಭವು ಜೂ. 8 ರಂದು ಭಾನುವಾರ, ಬೆಳಿಗ್ಗೆ 10 ಗಂಟೆಯಿಂದ ಹೋಟೆಲ್ ಓಷಿಯನ್ ಪರ್ಲ್, ಟೈಮ್ಸ್ ಸ್ಕ್ವೇರ್ ಕಟ್ಟಡ, ಕಲ್ಸಂಕ, ಉಡುಪಿ ಇಲ್ಲಿ ನಡೆಯಲಿದೆ. ಈ ಬಗ್ಗೆ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜೂ. 4 ರಂದು ಸಂಜೆ ಸಾಕೀನಾಕದ ಪೆನೆನ್ಸುಲಾ ಗ್ರಾಂಡ್ ಹೋಟೇಲಿನಲ್ಲಿ ಪೂರ್ವಭಾವೀ ಸಭೆ ಜರಗಿತು.

ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಎಲ್ಲರನ್ನೂ ಸ್ವಾಗತಿಸಿ ಸಭೆಯ ಉದ್ದೇಶವನ್ನು ತಿಳಿಸಿದರು. ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಸಮಿತಿಯ ವತಿಯಿಂದ ಜೂನ್ 8 ರಂದು ನಡೆಯುವ ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ ಆ ನಂತರದ ಮತ್ತು ಮರುದಿನ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಇವರು ಕಾರ್ಯಕ್ರಮಗಳ ವಿವರವನ್ನು ನೀಡುತ್ತಾ ಜೂನ್ 8 ರಂದು ಪ್ರಶಸ್ತಿ ಪ್ರದಾನ ಸಮಾರಂಭವು ಬೆಳೆಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಿ ಸಮಯಕ್ಕೆ ಸರಿಯಾಗಿ ಕೊನೆಗೊಳ್ಳಲಿದೆ. ಅಂದು ಅಪರಾಹ್ನ 4.30 ಕ್ಕೆ ಕೇಂದ್ರ ಸಮಿತಿಯ ಹಾಗೂ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ತಂಡವು ಒಟ್ಟಾಗಿ ತೋನ್ಸೆ – ಹೂಡೆ ಮತ್ತು ಬೆಂಗ್ರೆ ಸಮುದ್ರ ತೀರಕ್ಕೆ ಬೇಟಿ. ನಂತರ ಸಂಜೆ 7 ರಿಂದ 8 ರ ತನಕ ಬೆಳ್ಳಿ ಹಬ್ಬ ಸಮಾರಂಭದಲ್ಲಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮುಂದಿನ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಮರುದಿನ ಜೂ. 9 ರಂದು ಬೈಂದೂರು, ತ್ರಾಸಿ ಮತ್ತು ಮರವಂತೆ ಸಮುದ್ರ ತೀರಕ್ಕೆ ಬೇಟಿಯಾಗಿ ಕಡಲ್ಕೊರೆತ ಹಾಗೂ ಸಮುದ್ರತೀರದ ಸ್ವಚ್ಚತೆ ಬಗ್ಗೆ ಸಮೀಕ್ಷೆ ನಡೆಸಲಾಗುವುದು.
ವೇದಿಕೆಯಲ್ಲಿ ಸಮಿತಿಯ ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ ಸಲಹೆಗಾರರಾದ ಬಿ. ರಮಾನಂದ ರಾವ್ ಮತ್ತು ಲಕ್ಷ್ಮಣ್ ಪೂಜಾರಿ ಉಪಸ್ಥಿತರಿದ್ದರು. ನೂತನ ಸಲಹೆಗಾರರಾದ ಬಿ. ರಮಾನಂದ ರಾವ್ ಮತ್ತು ಲಕ್ಷ್ಮಣ್ ಪೂಜಾರಿ ಯವರನ್ನು ಸಮಿತಿಯ ಸಂಸ್ಥಾಪಕರು ಮತ್ತು ಅಧ್ಯಕ್ಷರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ಸಮಿತಿಯ ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಚಂದ್ರಶೇಖರ್ ಆರ್. ಬೆಲ್ಚಡ, ನ್ಯಾ. ಆರ್. ಎಂ. ಭಂಡಾರಿ, ನ್ಯಾ. ಶಶಿಧರ್ ಯು. ಕಾಪು, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ಗೌರವ ಕಾರ್ಯದರ್ಶಿಗಳಾದ ದೇವದಾಸ್ ಕುಲಾಲ್, ಸಿಎಸ್ ಗಣೇಶ್ ಶೆಟ್ಟಿ, ಗೌರವ ಜೊತೆ ಕಾರ್ಯದರ್ಶಿಗಳಾದ ಮಹೇಶ್ ಕಾರ್ಕಳ, ರಾಕೇಶ್ ಭಂಡಾರಿ, ಮಾಜಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ವಕ್ತಾರ ದಯಾಸಾಗರ ಚೌಟ, ಸದಸ್ಯರುಗಳಾದ ರವಿ ದೇವಾಡಿಗ, ವಾಸು ದೇವಾಡಿಗ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, ಕರುಣಾಕರ ಹೆಜ್ಮಾಡಿ, ಚಿತ್ರಾಪು ಕೆ.ಎಂ. ಕೋಟ್ಯಾನ್, ರಾಮಣ್ಣ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.