
ಸಮಾಜದ ಭ್ರಷ್ಟಾಚಾರ ನಿರ್ಮೂಲನೆ ಪತ್ರಿಕಾ ರಂಗದಿಂದ ಸಾಧ್ಯ: ವೈ.ಎನ್. ಶೆಟ್ಟಿ
“ಇಂದಿನ ದಿನಗಳಲ್ಲಿ ಸಮಾಜ ಅತ್ಯಂತ ಭ್ರಷ್ಟಾಚಾರದಿಂದ ನಲುಗಿ ಹೋಗುತ್ತಿದೆ, ನಮ್ಮ ಶಾಸಕಾಂಗದಲ್ಲಿ ಕೊರತೆ ಇದೆ, ಕಾರ್ಯಂಗದಲ್ಲೂ ಕೊರತೆ ಎದ್ದು ಕಾಣುತ್ತಿದೆ, ಇದನ್ನೆಲ್ಲಾ ನಿಯಂತ್ರಣ ಮಾಡ ಬೇಕಾಗಿದ್ದರೆ ಪತ್ರಿಕಾರಂಗದಿಂದ ಮಾತ್ರ ಸಾಧ್ಯ, ಮಾದ್ಯಮಗಳಿಂದ ಅಭಿಪ್ರಾಯ ಹೊರ ಬಂದಾಗ ತಪ್ಪಿತಸ್ಥರಿಗೆ ಕಂಪನ ಆರಂಭವಾಗುತ್ತೆ, ಮಾದ್ಯಮಗಳ ಜವಾಬ್ದಾರಿ ದೊಡ್ಡದು ವಸ್ತುನಿಷ್ಠ, ದಕ್ಷ ಪ್ರಾಮಾಣಿಕ ವರದಿಗಳು ಸಮಾಜವನ್ನು ನಿಯಂತ್ರಿಸಿ ಸದೃಢಗೊಳಿಸಲು ಸಾಧ್ಯ” ಎಂಬುದಾಗಿ ಜನಪದ ಚಿಂತಕ ಡಾ.ವೈ.ಎನ್. ಶೆಟ್ಟಿ ಹೇಳಿದ್ದಾರೆ.
ಅವರು ಹೆಜಮಾಡಿ ಸರಕಾರಿ ಜೂನಿಯರ್ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಕಾಪು ಪತ್ರಕರ್ತರ ಸಂಘ ಆಯೋಜಿಸಿದ ಪತ್ರಿಕಾ ದಿನಚರಣೆ ಹಾಗೂ ಅಗಲಿದ ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಇವರ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತಿದ್ದರು.

ಮುಂದುವರೆದು ಮಾತನಾಡಿದ ಅವರು “ಸರಕಾರಿ ಶಾಲೆಗಳ ಉಳಿವಿಗೆ ದೇವಳಗಳ ಬ್ರಹ್ಮಕಲಶಾಭಿಷೇಕದಂತೆ ಸರಕಾರಿ ಶಾಲೆಗಳಿಗೂ ಬ್ರಹ್ಮಕಲಶೋತ್ಸವದ ಅವಶ್ಯಕತೆ ಇದೆ. ಈ ಬಗ್ಗೆ ಆಸಕ್ತರ ಜೊತೆಗೂಡಿ ಸರಕಾರಿ ಶಾಲೆಗಳ ಬ್ರಹ್ಮಕಲಶವೆಂಬ ವಿನೂತನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಪತ್ರಕರ್ತನಾಗಿ ಪ್ರಖರ ಬರವಣಿಗೆಯೊಂದಿಗೆ ಮನೆ ಮಾತಾಗಿದ್ದ ಜಯಂತ್ ಪಡುಬಿದ್ರಿ ಅವರಂತಹ ವಿದ್ಯಾರ್ಥಿಗಳು ಮತ್ತಷ್ಟು ಸಮಾಜಕ್ಕೆ ಸಿಗಬೇಕಿದೆ, ಜಯಂತ್ ನಿಷ್ಟುರವಾದಿಯಾಗಿ ವಸ್ತುನಿಷ್ಠ ವರದಿ ಮಾಡುತ್ತಿದ್ದರು ಇದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು” ಎಂದವರು ಹೇಳಿದರು.
ಇದೇ ಸಂದರ್ಭ ಪತ್ರಿಕಾ ದಿನಚರಣೆಯ ಬಗ್ಗೆ ಉಪನ್ಯಾಸವನ್ನು ಪತ್ರಕರ್ತ ರಾಕೇಶ್ ಕುಂಜೂರು ಸಂದರ್ಭೋಚಿತವಾಗಿ ನಡೆಸಿದರು. ಅಗಲಿದ ಪತ್ರಕರ್ತ ಜಯಂತ್ ಪಡುಬಿದ್ರಿಯವರ ಬಾವಚಿತ್ರಕ್ಕೆ ಅಥಿತಿಗಳು ಪುಷ್ಪ ನಮನ ಸಲ್ಲಿಸಿದರು, ಇದೇ ಸಂದರ್ಭ ಪತ್ರಕರ್ತ ಸಂಘದ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಒಂದಿಷ್ಟು ಪುಸ್ತಕಗಳನ್ನು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯವರಿಗೆ ಪತ್ರಕರ್ತ ಸಂಘದ ಅಧ್ಯಕ್ಷರು ಹಸ್ತಾಂತರಿಸಿದರು. ಆ ಬಳಿಕ ವಿವಿಧ ದಿನ ಪತ್ರಿಕೆಗಳು ಹಾಗೂ ಸಿಹಿತಿಂಡಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಜಿಲ್ಲಾ ಪತ್ರಕರ್ತ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಪ್ರ.ಕಾರ್ಯದರ್ಶಿ ನಜ್ಹೀರ್ ಪೊಲ್ಯ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಂಪಾವತಿ, ಕಾಪು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ್, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಜಯಂತ್ ಪಡುಬಿದ್ರಿ ಅವರ ಆಪ್ತ ಜಯಕರ ಹೆಜ್ಮಾಡಿ ಉಪಸ್ಥಿತರಿದ್ದರು.
ಪತ್ರಕರ್ತ ವಿಜಯ ಆಚಾರ್ಯ ಉಚ್ಚಿಲ ಕಾರ್ಯಕ್ರಮ ನಿರ್ವಾಹಿಸಿದರು.




