ಮುಂಬೈ, ಸೆಪ್ಟೆಂಬರ್ 3:
ಮುಂಬೈ ನಗರದಲ್ಲಿ ೮೪ ವರ್ಷದ ಇತಿಹಾಸ ಹೊಂದಿರುವ ಪ್ರಖ್ಯಾತ ಸಾಫಲ್ಯ ಸೇವಾ ಸಂಘವು, ತನ್ನ ಸಮುದಾಯದ ಏಳಿಗೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹಾದಿ ತುಳಿಯುತ್ತಿದೆ. ಮುಂದಿನ ಸೆಪ್ಟೆಂಬರ್ 7, 2025, ಭಾನುವಾರ ಬೆಳಿಗ್ಗೆ 10.30ಕ್ಕೆ, ಬಂಟರ ಭವನ, ಕುರ್ಲಾ ಪೂರ್ವದಲ್ಲಿ ಸಂಘದ ವಾರ್ಷಿಕ ಮಹಾಸಭೆಯು ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಜತೆ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ದಿನಪೂರ್ತಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ಭಜನಾ ಸ್ಪರ್ಧೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆತು, ನಂತರ ಸತ್ಯನಾರಾಯಣ ಮಹಾಪೂಜೆ ಜರಗಲಿದೆ. ಸಂಘದ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ಸಾಫಲ್ಯ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.
ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆಗೊಂಡಿದ್ದು, ಜೊತೆಗೆ ನಾದಸ್ವರ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ಸಹಾಯ ನೀಡಲಾಗುತ್ತದೆ. ಅದೇ ರೀತಿ, ಸ್ಕಾಲರ್ಶಿಪ್ ವಿತರಣೆ ಹಾಗೂ ಸಾಫಲ್ಯ ಶಿಕ್ಷಣ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾಧಾನ ಯೋಜನೆಯಡಿ ಹೈಯರ್ ಎಜುಕೇಶನ್ಗಾಗಿ ಆರ್ಥಿಕ ನೆರವು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಯಲಿದೆ.
ಮಹಿಳಾ ಶಕ್ತೀಕರಣದ ನಿಟ್ಟಿನಲ್ಲಿ, ಸ್ವಾವಲಂಬನೆಗಾಗಿ ಉಚಿತ ಅಟ್ಟ ತಯಾರಿಸುವ ಯಂತ್ರ (ಘರ್ಘಂಟಿ) ವಿತರಣೆ ಕಾರ್ಯಕ್ರಮವೂ ಜರುಗಲಿದೆ. ಇದರೊಂದಿಗೆ ವಧು-ವರ ವೇದಿಕೆ, ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಹಲವು ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ತಮ್ಮ ಹೆಸರುಗಳನ್ನು ಮುಂಗಡವಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ತಿಳಿಸಿ ನೋಂದಾಯಿಸಿಕೊಳ್ಳಬೇಕು ಎಂದು ಕಾರ್ಯದರ್ಶಿ ಶ್ರೀಯುತ ಭಾಸ್ಕರ್ ಸಪಳಿಗ ಮನವಿ ಮಾಡಿದ್ದಾರೆ.
ಈ ಸಮಗ್ರ ಸಮಾಜಮುಖಿ ಚಟುವಟಿಕೆಗಳಲ್ಲಿ ಸಮುದಾಯದ ಪ್ರತಿಯೊಬ್ಬರೂ ತಾವು ಸಹಕರಿಸಿ, ಸಂಘದ ಕಾರ್ಯಗಳನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗಗಳು ಹೃತ್ಪೂರ್ವಕವಾಗಿ ವಿನಂತಿಸಿವೆ.




