September 6, 2026
Mumbai News Kannada
ಪ್ರಕಟಣೆಸುದ್ದಿ

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ





ಮುಂಬಯಿ, ಅಕ್ಟೋಬರ್ 23: ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ), ಕೊಪ್ಪಳ ವತಿಯಿಂದ ಅಕ್ಟೋಬರ್ 26ರಂದು ‘ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ’ ನಡೆಯಲಿದೆ. ಕೊಪ್ಪಳದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಪೂರ್ವಾಹ್ನ 10.15ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ ಹಾಗೂ ಚಿಂತಕರು, ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ ಅವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

​ಈ ಕಾರ್ಯಕ್ರಮದಲ್ಲಿ ಮುಂಬಯಿಯ ಕವಯಿತ್ರಿ ಅನಿತಾ ಪಿ. ತಾಕೊಡೆಯವರಿಗೆ 2025ನೆಯ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ಪ್ರಶಸ್ತಿ ಪಡೆದ ಅವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಅಂದು ದಿನವಿಡೀ ನಡೆಯಲಿರುವ ಈ ಸಮಾರಂಭದಲ್ಲಿ ಗೀತ ಗಾಯನ, ಕೃತಿಗಳ ಲೋಕಾರ್ಪಣೆ, 2025ನೆಯ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವ ಹಾಗೂ ಸಾಹಿತ್ಯಕ ಚರ್ಚೆಗಳು ನಡೆಯಲಿವೆ. ಈ ಸಮಾರಂಭದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಚಾಲಕರಾದ ಮಹೇಶ್ ಬಳ್ಳಾರಿಯವರು ವಿನಂತಿಸಿಕೊಂಡಿದ್ದಾರೆ.

ಅನಿತಾ ಪಿ. ತಾಕೊಡೆ: ಸಾಹಿತ್ಯ ಸಾಧನೆ

​ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಅನಿತಾ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಪಡೆದು, ಎಂ.ಬಿ. ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರ ಪಡೆದಿದ್ದಾರೆ. ಈಗಾಗಲೇ ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ.

​ಪಿಎಚ್.ಡಿ. ಕೋರ್ಸ್ ವರ್ಕ್‌ನ ಸಲುವಾಗಿ ಖ್ಯಾತ ಸಮಾಜ ಸೇವಕ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಸಂಶೋಧಕಿ ಡಾ. ಲೀಲಾ ಬಿ. ಅವರು ಕೊಡಮಾಡುವ ‘ಶೋಧಸಿರಿ’ ಪುರಸ್ಕಾರ, ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ವತಿಯಿಂದ ವಿಕಾಸ ಪುಸ್ತಕ ಬಹುಮಾನ ಲಭಿಸಿದೆ. ಇವರ ‘ನಿವಾಳಿಸಿಬಿಟ್ಟ ಕೋಳಿ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ 2022ನೆಯ ಸಾಲಿನ ಕೆ. ವಾಸುದೇವಾಚಾರ್ಯ ದತ್ತಿ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ, ಹಾಸನದಿಂದ ‘ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ’ ಲಭಿಸಿದೆ. ಇವರ ‘ಮೋಹನ ತರಂಗ’ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತವಾಗಿದೆ.

​”ಅಂತರಂಗದ ಮೃದಂಗ”ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ, ಮುಂಬಯಿ ವತಿಯಿಂದ “ಶ್ರೀಮತಿ ಸುಶೀಲಾ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ” ಹಾಗೂ “ಜನಸ್ಪಂದನ ಟ್ರಸ್ಟ್ (ರಿ), ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ” ಲಭಿಸಿದೆ. 2025ರಲ್ಲಿ ಚೆಂಬೂರು ಕರ್ನಾಟಕ ಸಂಘದ ವತಿಯಿಂದ ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿಯೂ ಲಭಿಸಿದೆ. ಇವರ ಸಾಹಿತ್ಯ ಸಾಧನೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಸಂಶೋಧನೆಯಲ್ಲಿ ನಿರತರಾಗಿದ್ದಾರೆ.



Related posts

2023_24 ನೇ  12  ನೇ ತರಗತಿ ಪರೀಕ್ಷಾ ಫಲಿತಾಂಶ ಡೊಂಬಿವಲಿ (ಪೂ)  ಧೃತಿ ಶ್ರೀಧರ್ ಮೂಲ್ಯ ಶೇ 81.17 ಅಂಕ 

Mumbai News Desk

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Mumbai News Desk

ಪಾಲ್ಘರ್ ರಘು ಶೆಟ್ಟಿ ನಿಧನ.

Mumbai News Desk

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಸಾಂತಾಕ್ರೂಸ್: ಡಿ  26 ರಂದು  ವಾರ್ಷಿಕ  ಮಹಾಪೂಜೆ.

Mumbai News Desk

ಮುಂಬೈ : ಥಾಣೆಯಲ್ಲಿ ಪೈಪ್‌ಲೈನ್ ಸೋರಿಕೆ: ಏಪ್ರಿಲ್ 11 ರಿಂದ 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತ

Mumbai News Desk