32 C
Mumbai
March 7, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ ಡೊಂಬಿವಲಿ: ನಾಡಹಬ್ಬದ ನಿಮಿತ್ತ ‘ಕವಿಗೋಷ್ಠಿ’ಯ ವೈಭವ





ಪ್ರತಿಭೆಗಳಿಗೆ ಅವಕಾಶ: ಕವಿಗೋಷ್ಠಿಗಳ ಮಹತ್ವ ಸಾರಿದ ಡಾ. ಪೂರ್ಣಿಮಾ ಎಸ್. ಶೆಟ್ಟಿ

ಚಿತ್ರ: ಸತೀಶ್ ಶೆಟ್ಟಿ ಡಾಲಿ

ಡೊಂಬಿವಲಿ: ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುವ ಕಾಯಕದಲ್ಲಿ ನಿರತವಾಗಿರುವ ಕರ್ನಾಟಕ ಸಂಘ ಡೊಂಬಿವಲಿಯು, ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ‘ಯುವ ಮಹಿಳಾ ಕವಿಗೋಷ್ಠಿ’ಯ ಮೂಲಕ ಅದ್ದೂರಿಯಾಗಿ ಆಚರಿಸಿತು. ನವೆಂಬರ್ 9, ಭಾನುವಾರ ಸಂಜೆ ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ. ಪರಿಸರದಲ್ಲಿರುವ ಹೋಟೆಲ್ ಶಿವಂ ಸಭಾಗೃಹದಲ್ಲಿ ನಡೆದ ಈ ಕವಿಗೋಷ್ಠಿಯು ಮಿನಿ ಕರ್ನಾಟಕವನ್ನೇ ಸೃಷ್ಟಿಸಿತ್ತು.

​ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಜಾತಿ-ಮತ ಭೇದವನ್ನು ಮರೆತು ಕಿಕ್ಕಿರಿದು ತುಂಬಿದ ಸಭಾಗೃಹವನ್ನು ಕಂಡು ಸಂತಸ ವ್ಯಕ್ತಪಡಿಸಿದರು. “ಇಲ್ಲಿನ ವಾತಾವರಣ ಕರ್ನಾಟಕದ ಯಾವುದೋ ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅನುಭವ ನೀಡುತ್ತಿದೆ. ಕನ್ನಡ ಭಾಷೆಯ ಮೇಲಿರುವ ನಿಮ್ಮ ಅಭಿಮಾನ ಶ್ಲಾಘನೀಯ. 15 ತಂಡಗಳ ಸಮೂಹ ದೇಶಭಕ್ತಿ ಗೀತೆಗಳ ಪ್ರಸ್ತುತಿ ಮನಸ್ಸಿಗೆ ಮುದ ನೀಡಿದೆ,” ಎಂದರು.

​ಕಾವ್ಯದ ಕುರಿತು ಮಾತನಾಡಿದ ಅವರು, “ಮೂಡಿಬಂದಂತಹ ಪದಗಳನ್ನು ಒಂದು ಮಾಲೆಯನ್ನಾಗಿಸುವುದೇ ಕವಿತೆ. ಕವಿಗಳು ಕವಿತೆ ರಚನೆ ಮತ್ತು ವಾಚನ ಮಾಡುವಾಗ ಶಬ್ದಗಳ ಜೋಡಣೆಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಇಂದಿನ ಕವಿತೆಗಳು ಅತ್ಯುತ್ತಮವಾಗಿದ್ದವು. ಇಂತಹ ಗೋಷ್ಠಿಗಳು ಪದೇ ಪದೇ ನಡೆದಾಗ, ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಲಭಿಸಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

​ಮುಂಬೈ ಕನ್ನಡತಿಯರ ಪಾತ್ರವನ್ನು ಕೊಂಡಾಡಿದ ಡಾ. ಪೂರ್ಣಿಮಾ ಅವರು, “ಮುಂಬೈ ಮಹಿಳೆಯರು ಭಾಗ್ಯವಂತರು. ಇಲ್ಲಿ ಮಹಿಳೆಯರಿಗೆ ಸಿಗುವಷ್ಟು ಪ್ರೋತ್ಸಾಹ ಮತ್ತು ವೇದಿಕೆ ಬೇರೆಲ್ಲೂ ಸಿಗುವುದಿಲ್ಲ. ಬ್ರಿಟಿಷರ ಒಡೆದು ಆಳುವ ನೀತಿಯಿಂದ ವಿಭಜನೆಯಾಗಿದ್ದ ನಮ್ಮ ದೇಶ, ರಾಜ್ಯವನ್ನು ಒಗ್ಗೂಡಿಸಿ ಸುಭದ್ರ ಕರ್ನಾಟಕವನ್ನು ರಚಿಸಿದ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ. ನಮಗೆ ದಾಸ ಸಾಹಿತ್ಯ, ವಚನ ಸಾಹಿತ್ಯ ಮತ್ತು ಉತ್ತಮ ಸಂಗೀತ ಲಭಿಸಿದೆ. ನಾವು ಸುಭದ್ರ ದೇಶದ ಚಿಂತನೆ ಮಾಡೋಣ,” ಎಂದು ಕರೆ ನೀಡಿದರು.

ಕರ್ನಾಟಕ ಸಂಘ ಡೊಂಬಿವಲಿ ನಮ್ಮ ಭಾಷೆ, ಸಂಸ್ಕೃತಿ, ಮತ್ತು ಸಂಸ್ಕಾರವನ್ನು ಉಳಿಸುವ ಕೆಲಸ ಮಾಡುತ್ತಿರುವುದಕ್ಕೆ ಅವರು ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಮಹಿಳಾ ಕವಿಗಳು ತಮ್ಮ ಹಾಸ್ಯ ಮತ್ತು ಗಂಭೀರ ಕವನಗಳ ಮೂಲಕ ಸಭಿಕರನ್ನು ರಂಜಿಸಿದರು. ಡಾ. ಪೂರ್ಣಿಮಾ ಅವರು ಕವಿಗೋಷ್ಠಿಯ ವೈಶಿಷ್ಟ್ಯಗಳನ್ನು ಹೀಗೆ ವಿವರಿಸಿದರು:

  • ಅಂಜಲಿ ತೊರವಿ – ಕೂಡು ಕುಟುಂಬದ ವಿಶೇಷತೆಗಳ ಕುರಿತು.
  • ಸವಿತಾ ಸಾಲ್ಮಾನ್ – ‘ಚಹಾ ಮಾಡುವ ಪ್ರಕರಣ’ವನ್ನು ಹಾಸ್ಯಮಯವಾಗಿ.
  • ಹೇಮಾವತಿ ಹೆಗಡೆ – ತರತರಹದ ತರಕಾರಿಗಳು ಮತ್ತು ಅವು ಮನುಷ್ಯನ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದರ ಕುರಿತು.
  • ವೇದಾವತಿ ಭಟ್ – ಭಾನುವಾರದಂದು ಬೆಳಗಿನ ಉಪಾಹಾರ ತಯಾರಿಸುವಾಗ ಮಹಿಳೆಯರು ಎದುರಿಸುವ ಭವಣೆಗಳ ಕುರಿತು.
  • ಗಾಯತ್ರಿ ನಾಗೇಶ್ – ಗಂಭೀರವಾದ ಕವನ ವಾಚನ.
  • ದೀಪಾ ಹರೀಶ್ ಶೆಟ್ಟಿ – ನಮ್ಮ ಹಣೆಬರಹದ ಕುರಿತು ಸುಂದರ ವಿವರಣೆ.
  • ಜಯಲಕ್ಷ್ಮಿ ಪರ್ವತಿಕರ್ – ಧಾರವಾಡದ ಮಣ್ಣಿನ ಸೊಬಗನ್ನು ಹಾಸ್ಯದ ಮೂಲಕ ಸವಿಸ್ತಾರವಾಗಿ.
  • ಪಡುಕುಡೂರು ಪ್ರಫುಲ್ಲ ದೀನೇಶ್ ಶೆಟ್ಟಿ – ಮನೆ ಸ್ವಚ್ಛ ಮಾಡುವ ಬಗ್ಗೆ ಸೊಗಸಾದ ನಿರೂಪಣೆ.

​ಈ ಕವಿಗೋಷ್ಠಿಯ ಮೂಲಕ ಕರ್ನಾಟಕ ಸಂಘವು ಮಹಿಳಾ ಪ್ರತಿಭೆಗಳಿಗೆ ಉತ್ತಮವಾದ ವೇದಿಕೆಯನ್ನು ನೀಡಿದೆ ಎಂದು ಡಾ. ಪೂರ್ಣಿಮಾ ಶ್ಲಾಘಿಸಿದರು.

​ಕರ್ನಾಟಕ ಸಂಘದ ಅಧ್ಯಕ್ಷರಾದ ಸುಕುಮಾರ ಶೆಟ್ಟಿಯವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. “ಕರ್ನಾಟಕ ಸಂಘ ಡೊಂಬಿವಲಿ ವಿವಿಧತೆಯಿಂದ ಏಕತೆಯನ್ನು ಕಂಡಿದೆ. ಆದುದರಿಂದ ಪ್ರತಿವರ್ಷ ನಾಡಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಈ ವರ್ಷ ಡೊಂಬಿವಲಿ ಪರಿಸರದ ಯುವ ಮಹಿಳಾ ಕವಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಕವಿಗೋಷ್ಠಿಯನ್ನು ಆಯೋಜಿಸಲಾಯಿತು. ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಯೋಜನೆ ನಮ್ಮದಾಗಿದ್ದು, ಸದ್ಯದಲ್ಲಿಯೇ ಡೊಂಬಿವಲಿ ಪರಿಸರದ ಯುವ ಪ್ರತಿಭೆಗಳನ್ನು ಒಗ್ಗೂಡಿಸುವ ಕಾರ್ಯವನ್ನು ಸಂಘದ ಮೂಲಕ ಮಾಡಲಾಗುವುದು. ಈ ಕಾರ್ಯಕ್ಕೆ ಸಮಸ್ತ ಡೊಂಬಿವಲಿ ಕನ್ನಡಿಗರ ಸಹಕಾರದ ಅಗತ್ಯವಿದೆ,” ಎಂದು ತಿಳಿಸಿದರು.

​ವೇದಿಕೆಯ ಮೇಲೆ ಡಾ. ದಿವಾಕರ ಟಿ. ಶೆಟ್ಟಿ, ಸುಷ್ಮಾ ಡಿ. ಶೆಟ್ಟಿ, ಹಾಗೂ ಆಶಾ ಎಲ್. ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಈ ಯಶಸ್ವಿ ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಶಿಲ್ಪಾ ಎಸ್. ಶೆಟ್ಟಿ ಅವರು ಸುಂದರವಾಗಿ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.



Related posts

ಭವನ್ಸ್ ಕಾಲೇಜು ಕ್ಯಾಂಪಸ್‌ನಲ್ಲಿ ಅಯ್ಯಪ್ಪ ಸ್ವಾಮಿಯ 28ನೇ ವಾರ್ಷಿಕ ಮಹಾಪೂಜೆ

Mumbai News Desk

ಪತಾರ್ಲಿ ದುರ್ಗಾ ಪರಮೇಶ್ವರಿ ದೇವಿಯ ನವರಾತ್ರಿ ಪೂಜೆ.

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ) ಪುನರ್ ನಿರ್ಮಾಣ ಮನವಿಪತ್ರ ಬಿಡುಗಡೆ.

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು : ಡಾ.ಮುಕೇಶ್ ಕುಮಾರ್

Mumbai News Desk

ಚಿಣ್ಣರ ಬಿಂಬದ 21ನೆಯ ವಾರ್ಷಿಕ ಮಕ್ಕಳ ಉತ್ಸವ, ವಿಶ್ವಸ್ಥರ ಪದಗ್ರಹಣ.ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ.

Mumbai News Desk