July 23, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಸಿಯೇಶನ್‌ನಿಂದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ’ಗೆ ಚಾಲನೆ







ನಾಟಕೋತ್ಸವ ಯಶಸ್ವಿಯಾಗಲು ಕಲಾ ಪೋಷಕರ ಸಹಕಾರ ಅಗತ್ಯ: ಹರೀಶ್ ಜಿ. ಅಮಿನ್

ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಮುಂಬಯಿ: “ಬಿಲ್ಲವರ ಎಸೋಸಿಯೇಶನ್ ಮುಂಬಯಿ ಸಂಸ್ಥೆಯು ಸಾಮಾಜಿಕ ಸೇವೆಯ ಜೊತೆಗೆ ಶೈಕ್ಷಣಿಕ ಮತ್ತು ಕಲಾ ಕ್ಷೇತ್ರಕ್ಕೆ ಸದಾ ಆದ್ಯತೆ ನೀಡುತ್ತಾ ಬಂದಿದೆ. ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಮೂರು ದಿನಗಳ ನಾಟಕೋತ್ಸವ ಯಶಸ್ವಿಯಾಗಲು ಕಲಾ ಪೋಷಕರ ಸಹಕಾರ ಅಗತ್ಯ” ಎಂದು ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮಿನ್ ತಿಳಿಸಿದರು.

​ಅವರು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಶನಿವಾರ ಜರಗಿದ ಸಾಂಸ್ಕೃತಿಕ ಉಪ ಸಮಿತಿ ಆಶ್ರಯದ **’ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ’**ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 5 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಸಮಾಜ ಬಾಂಧವರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗಿರುವುದು ತೃಪ್ತಿ ನೀಡಿದೆ ಎಂದರು. ಅಲ್ಲದೆ, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನ ಅವರ ಸಂಘಟನಾ ಚಾತುರ್ಯ ಮತ್ತು ಕಠಿಣ ಪರಿಶ್ರಮವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಬಿಲ್ಲವರ ಅಸೋಸಿಯೇಷನ್‌ನಿಂದ ಕಲಾವಿದರಿಗೆ ಉತ್ತಮ ವೇದಿಕೆ – ಶಿವಪ್ರಸಾದ್ ಪೂಜಾರಿ ಪುತ್ತೂರು

ಥಾಣೆ ಪಶ್ಚಿಮ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶಿವಪ್ರಸಾದ್ ಪೂಜಾರಿ ಪುತ್ತೂರು ಅವರು ಆಶೀರ್ವಚನ ನೀಡಿ ಮಾತನಾಡಿ, ‘ಬಿಲ್ಲವರ ಅಸೋಸಿಯೇಷನ್ ಸಮಾಜ ಬಾಂಧವರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿರುವ ಸಂಸ್ಥೆಯಾಗಿದೆ. ಮುಂಬೈನಲ್ಲಿ ಅಸಂಖ್ಯಾತ ಕಲಾವಿದರಿದ್ದು, ಅವರಿಗೆ ಈ ಸಂಸ್ಥೆಯ ಮೂಲಕ ಉತ್ತಮ ವೇದಿಕೆ ಲಭಿಸುತ್ತಿದೆ; ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’. ಸ್ಪರ್ಧೆಯಲ್ಲಿರುವ ಎಲ್ಲಾ 15 ತಂಡಗಳಿಗೂ ಶುಭ ಹಾರೈಸಿದ ಅವರು, ಮುಂಬೈನಲ್ಲಿಯೂ ಒಂದು ವೃತ್ತಿಪರ (Professional) ನಾಟಕ ತಂಡ ಉದಯವಾಗಲಿ ಎಂಬುದು ನನ್ನ ಆಶಯವಾಗಿದೆ. ಊರಿಗೆ ಕಳುಹಿಸಿಕೊಟ್ಟು ನಾಟಕ ಪ್ರದರ್ಶನ ನೀಡುವಂತಹ ಶ್ರೇಷ್ಠ ಮಟ್ಟದ ತಂಡವನ್ನು ಇಲ್ಲಿ ರೂಪಿಸಬೇಕು ಎಂದು ಆಶಿಸಿದರು.”

​ಮುಂಬಯಿ ಪ್ರತಿಭೆಗಳಿಗೆ ವೇದಿಕೆ ಅಗತ್ಯ: ಎಲ್.ವಿ. ಅಮಿನ್

​ಗೌರವ ಅಧ್ಯಕ್ಷ ಎಲ್. ವಿ. ಅಮಿನ್ ಮಾತನಾಡಿ, “ಸಂಸ್ಥಾಪನಾ ದಿನಾಚರಣೆಯ ಸಂಭ್ರಮದಂದೇ ನಾಟಕೋತ್ಸವಕ್ಕೆ ಚಾಲನೆ ಸಿಕ್ಕಿರುವುದು ಸಂತಸದ ವಿಷಯ. ಮುಂಬಯಿ ಮಹಾನಗರದ ರಂಗಭೂಮಿಯಲ್ಲಿ ಅಪ್ರತಿಮ ಕಲಾವಿದರು ಬೆಳೆಯುತ್ತಿದ್ದಾರೆ. ಯುವ ಪ್ರತಿಭೆಗಳು ಬೆಳಕಿಗೆ ಬರಲು ಇಂತಹ ವೇದಿಕೆಗಳು ಅನಿವಾರ್ಯ” ಎಂದು ಶುಭ ಹಾರೈಸಿದರು.

​ಊರಿನಲ್ಲಿ ಮುಂಬಯಿ ಕಲಾವಿದರ ಕಡೆಗಣನೆ: ಸುರೇಂದ್ರ ಕುಮಾರ್ ಹೆಗ್ಡೆ ಬೇಸರ

​ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅವರು ರಂಗಭೂಮಿಯ ಇಂದಿನ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾ, “ಮುಂಬಯಿಯಲ್ಲಿ ಊರಿಗಿಂತಲೂ ಶ್ರೇಷ್ಠ ಮಟ್ಟದ ನಿರ್ದೇಶಕರು ಮತ್ತು ಕಲಾವಿದರಿದ್ದಾರೆ. ನಾವು ಊರಿನ ನಾಟಕ ತಂಡಗಳಿಗೆ ಇಲ್ಲಿ ಅದ್ದೂರಿ ಸ್ವಾಗತ ನೀಡಿ ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮೂರಿನಲ್ಲಿ ಮುಂಬಯಿ ತಂಡಗಳಿಗೆ ಸಿಗಬೇಕಾದ ಗೌರವ ಮತ್ತು ಪ್ರೋತ್ಸಾಹ ವಿರಳವಾಗಿರುವುದು ಬೇಸರದ ಸಂಗತಿ. ಈ ಮನೋಭಾವ ಬದಲಾಗಬೇಕು” ಎಂದರು.

​ಇದು ಸ್ಪರ್ಧೆಯಲ್ಲ, ಗುರು ಸೇವೆ: ರಾಜಾ ವಿ. ಸಾಲ್ಯಾನ್

​ಮಾಜಿ ಉಪಾಧ್ಯಕ್ಷ ರಾಜಾ ವಿ. ಸಾಲ್ಯಾನ್ ಮಾತನಾಡಿ, “15 ಸ್ಥಳೀಯ ಕಚೇರಿಗಳು ಭಾಗವಹಿಸುತ್ತಿರುವ ಈ ನಾಟಕೋತ್ಸವವನ್ನು ಕೇವಲ ಸ್ಪರ್ಧೆ ಎಂದು ಭಾವಿಸದೆ, ಇದನ್ನು ಗುರುವಿಗೆ ಸಲ್ಲಿಸುವ ಸೇವೆಯೆಂದು ಪರಿಗಣಿಸಿ ಕಲೆ ಪ್ರದರ್ಶಿಸಿ. ಹರೀಶ್ ಅಮಿನ್ ಅವರ ನಾಯಕತ್ವವು ಶತಮಾನೋತ್ಸವದವರೆಗೂ ಸಮಾಜಕ್ಕೆ ಮಾರ್ಗದರ್ಶಕವಾಗಿರಲಿ” ಎಂದು ಹಾರೈಸಿದರು.

  • ಉತ್ತಮ್ ಶೆಟ್ಟಿಗಾರ್: ಪದ್ಮಶಾಲಿ ಸೇವಾ ಸಂಘದ ಮಾಜಿ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್ ಅವರು ನಾಟಕೋತ್ಸವವು ಸರ್ವರ ಸಹಕಾರದೊಂದಿಗೆ ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.
  • ಸತೀಶ್ ಜೆ. ಪೂಜಾರಿ ನಾರಾವಿ: ಭಾಯಂದರ್‌ನ ಸತೀಶ್ ಜೆ. ಪೂಜಾರಿ ಅವರು ಮಾತನಾಡಿ, ಸಮಾಜ ಸೇವೆಯಲ್ಲಿ ಜಾತಿ-ಭೇದವಿರಬಾರದು ಎಂದು ಆಶಿಸುತ್ತಾ ಎಲ್ಲಾ ಕಲಾತಂಡಗಳಿಗೆ ಶುಭ ಕೋರಿದರು.
  • ಗಣೇಶ್ ರಾವ್: ರಂಗ ಕಲಾವಿದ ಗಣೇಶ್ ರಾವ್ ಅವರು ಸಂಸ್ಥಾಪನಾ ದಿನದ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

94ನೇ ಸಂಸ್ಥಾಪನಾ ದಿನದ ಸಂಭ್ರಮಕ್ಕಾಗಿ ಹಿರಿಯರಾದ ಶಂಕರ್ ಡಿ. ಪೂಜಾರಿ ಅವರು ಕೇಕ್ ಕತ್ತರಿಸಿದರು. ಇದೇ ವೇಳೆ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹರೀಶ್ ಜಿ. ಅಮೀನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಚಿತ್ರನಟರಾದ ಮನೋಹರ ಶೆಟ್ಟಿ ನಂದಳಿಕೆ, ನಾರಾಯಣ ಶೆಟ್ಟಿ ನಂದಳಿಕೆ, ಸಾಹಿತಿ ಸಾ. ದಯಾ ಹಾಗೂ ಕರಾಟೆ ಪಟು ಖುಷಿ ಪ್ರಸಾದ್ ಪೂಜಾರಿ ಅವರನ್ನು ಗೌರವಿಸಲಾಯಿತು.

​ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪುರುಷೋತ್ತಮ ಎಸ್. ಕೋಟ್ಯಾನ್, ಜಯಂತಿ ವರದ ಉಳ್ಳಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ​ಎನ್. ನಿತ್ಯಾನಂದ ಓನಿಡಾ (ಹಿರಿಯ ಸಮಾಜ ಸೇವಕ) ಹೆರ್ಗ ಬಾಬು ಪೂಜಾರಿ (ಜೋಗೇಶ್ವರಿ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ) ಡಾ| ಸರಸ್ವತಿ ಶೆಟ್ಟಿ (ಸಮಾಜ ಸೇವಕಿ), ಶಿವಪ್ರಸಾದ್ ಪೂಜಾರಿ ಪುತ್ತೂರು (ಥಾಣೆ ಪಶ್ಚಿಮ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ), ರಂಗಪ್ಪ ಪೂಜಾರಿ (ಸೆನ್ಸಾರ್ ಬೋರ್ಡ್ ಸದಸ್ಯ) ಉಪಸ್ಥಿತರಿದ್ದರು.

​ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನ ಅತಿಥಿಗಳನ್ನು ಆದರದಿಂದ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್ ಸಮಾರಂಭವನ್ನು ಸೊಗಸಾಗಿ ನಿರೂಪಿಸಿದರೆ, ಕೋಶಾಧಿಕಾರಿ ರವಿ ಸನಿಲ್ ಧನ್ಯವಾದಗಳನ್ನು ಸಮರ್ಪಿಸಿದರು..



Related posts

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಮುಂಬೈನಲ್ಲಿ ರಣಬಿಸಿಲಿನ ಆರ್ಭಟ: ಮಾರ್ಚ್ ಆರಂಭದಲ್ಲೇ 40 ಡಿಗ್ರಿಗೆ ಏರಿದ ತಾಪಮಾನ, ಐಎಂಡಿಯಿಂದ ‘ಕಿತ್ತಳೆ ಎಚ್ಚರಿಕೆ’ (Orange Alert) ಜಾರಿ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಸಯನ್ ಗೋಕುಲ ಶ್ರೀ ಕೃಷ್ಣ ಮಂದಿರಕ್ಕೆ ನಾಡೋಜ ಜಿ ಶಂಕರ್ ಭೇಟಿ.

Mumbai News Desk

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk