
ಮುಂಬೈ: ಯಾಂತ್ರಿಕ ಬದುಕಿನ ನಡುವೆಯೂ ಕರಾವಳಿಯ ಗಂಡುಕಲೆ ‘ಯಕ್ಷಗಾನ’ದ ಹಿರಿಮೆಯನ್ನು ಮುಂಬೈ ಮಹಾನಗರದ ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ಪಸರಿಸುವ ಕಾಯಕವನ್ನು ‘ಯಕ್ಷಪ್ರಿಯ ಬಳಗ ಮೀರಾ ಭಯಂದರ್’ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ಅವರ ಮಾರ್ಗದರ್ಶನದಲ್ಲಿ ಈ ಬಳಗವು ಮುನ್ನೂರಕ್ಕೂ ಅಧಿಕ ಮಕ್ಕಳಿಗೆ ಯಕ್ಷ ತರಬೇತಿ ನೀಡಿ, ಕಲಾ ಲೋಕಕ್ಕೆ ಅರ್ಪಿಸಿದೆ.
ಫೆಬ್ರವರಿ 14ರಂದು ಸಂಭ್ರಮದ ‘ಯಕ್ಷನವಮಿ’
ಬಳಗದ ವತಿಯಿಂದ ಫೆಬ್ರವರಿ 14ರಂದು ‘ಯಕ್ಷನವಮಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಲಿದ್ದು, ಬಳಿಕ ಬಳಗದ ಪುಟ್ಟ ಮಕ್ಕಳಿಂದ ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಲಿದೆ. ನಂತರ ವಿವಿಧ ತಂಡಗಳಿಂದ ಕುಣಿತ ಭಜನೆ, ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಮಹಿಳಾ ತಂಡದಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕನ್ನಡದ ಪಾಠ
ಮುಂಬೈನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಕನ್ನಡ-ತುಳು ಭಾಷೆಗಳಲ್ಲಿ ಯಕ್ಷಗಾನದ ಅರ್ಥಗಾರಿಕೆ ಮತ್ತು ನಾಟ್ಯವನ್ನು ಕಲಿಸುವುದು ಸವಾಲಿನ ಕೆಲಸ. ಆದರೆ, ಗುರು ನಾಗೇಶ್ ಪೊಳಲಿ ಮತ್ತು ಅವರ ತಂಡವು ಮಕ್ಕಳಲ್ಲಿ ತಾಳ್ಮೆಯಿಂದ ಕಲೆಯನ್ನು ತುಂಬುತ್ತಿದ್ದಾರೆ. ಕಳೆದ 9 ವರ್ಷಗಳಿಂದ ‘ಯಕ್ಷಪ್ರಿಯ ಬಳಗ ವಿದ್ಯಾಮಂದಿರ’ವು ವಾರ್ಷಿಕ ಕನಿಷ್ಠ 10 ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಕಟೀಲು ಸೇರಿದಂತೆ ವಿವಿಧ ಉಪನಗರಗಳಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದೆ.

ಪ್ರತಿಭಾನ್ವಿತ ಕಲಾವಿದರ ದಂಡು
ತಂಡದಲ್ಲಿ ಕೀರ್ತಿಶ್ರೀ ಬಿ. ಮೂಲ್ಯ, ಕೃಷ ಪೂಜಾರಿ, ಮನ್ವಿತಾ ಎಂ. ಪೂಜಾರಿ, ಮೀತಲಿ ಎಂ. ಪೂಜಾರಿ, ಆಶಾ ಮೂಲ್ಯ, ದೀಕ್ಷಾ ಪಿ. ದೇವಾಡಿಗ, ತನ್ವಿ ವಿ. ಶೆಟ್ಟಿ, ರಚನಾ ಪಿ. ಶೆಟ್ಟಿ, ತ್ರಿಷಾ ಯು. ಶೆಟ್ಟಿ, ಆರ್ಯ ಎಸ್. ಶೆಟ್ಟಿ, ಐಶಾನಿ ಎಸ್. ಶೆಟ್ಟಿ, ಸಾನ್ವಿ ಎನ್. ಶೆಟ್ಟಿ, ಆರಾಧ್ಯ ಸಿ. ಕೋಟ್ಯಾನ್, ಗೀತ್ ಆರ್. ಶೆಟ್ಟಿ, ದೃಷ್ಟಿ ಎಸ್. ಶೆಟ್ಟಿ, ಅನನ್ಯ ವೈ. ಬಂಗೇರ, ತ್ರಿಷಾ ಡಿ. ಶೆಟ್ಟಿ, ಭಾನ್ವಿ ವಿ. ಭಂಡಾರಿ, ನಿಸರ್ಗ ವಿ. ಶೆಟ್ಟಿ, ವೈಭವಿ ಆರ್. ಶೆಟ್ಟಿ, ಮಿತುಷ ಹೆಚ್. ಪೂಜಾರಿ, ಸಿರಿ ಡಿ. ಶೆಟ್ಟಿ, ಸಿಂಚನ ಯು. ಸುವರ್ಣ, ಲಾಸ್ಯ ಯು. ಸುವರ್ಣ, ಅದ್ವಿತಿ ಎಸ್. ಶೆಟ್ಟಿ, ಪ್ರತ್ಯುಷ ಎ. ವಲದೂರು, ಶ್ರೀನಿಕಾ ಆರ್. ಶೆಟ್ಟಿ, ಆರ್ವಿ ಜೆ. ಪೂಜಾರಿ, ದಕ್ಷ ಎಸ್. ಶೆಟ್ಟಿ, ಪ್ರೀತಮ್ ಪಿ. ಹೆಗ್ಡೆ, ವಿಹಾನ್ ಎಸ್. ಶೆಟ್ಟಿ, ಶ್ರೀಹಾನ್ ಎಸ್. ಶೆಟ್ಟಿ, ಜಷಿತ್ ಎಸ್. ಪೂಜಾರಿ, ತೀರ್ಥ ಪಿ. ಶೆಟ್ಟಿ, ಅಥರ್ವ ಪಿ. ಶೆಟ್ಟಿ, ಶಾಶ್ವತ ಎಲ್. ಶೆಟ್ಟಿ, ಆರ್ಯನ್ ಆರ್. ಶೆಟ್ಟಿ, ಪ್ರಗ್ಯಾನ್ ಎಲ್. ಶೆಟ್ಟಿ, ದೇವಾಂಶ್ ವಿ. ಪೂಜಾರಿ, ಪ್ರಣೀತ ವಿ. ಪೂಜಾರಿ, ಚಿರಾಗ್ ಮೆಂಡನ್, ಶ್ರೀನಿಧಿ ಬಿಲ್ಲವ ಅವರು ಸಕ್ರಿಯರಾಗಿದ್ದಾರೆ.
ಹಿರಿಯ ಕಲಾವಿದರಾದ ಸುಂದರಿ ಆರ್. ಕೋಟ್ಯಾನ್, ವಸಂತಿ ಎಸ್. ಶೆಟ್ಟಿ, ಶುಭಲತ ವಿ. ಶೆಟ್ಟಿ, ಅಮೃತ ಪಿ. ಸಾಲ್ಯಾನ್, ರೇಷ್ಮೆ ಎಸ್. ಶೆಟ್ಟಿ, ಶೈಲಜಾ ಎಸ್. ಶೆಟ್ಟಿ, ವೀಣಾಕ್ಷಿ ಎಸ್. ಶೆಟ್ಟಿ, ಲೀಲಾವತಿ ಶೆಟ್ಟಿ, ಶಾಲಿನಿ ಆರ್. ಶೆಟ್ಟಿ, ರಶ್ಮಿ ಎಸ್. ಶೆಟ್ಟಿ, ಉಷಾ ಡಿ. ಶೆಟ್ಟಿ, ಸ್ವಾತಿ ಎಸ್. ಕೋಟ್ಯಾನ್, ವಿಶಾಲಾಕ್ಷಿ ಎ. ಮುಲ್ಕಿ, ಸೀತಾ ಶೆಟ್ಟಿ, ಅನಿತಾ ಯು. ಹೆಗ್ಡೆ, ಮಮತಾ ಯು. ಭಂಡಾರಿ, ಸುಕನ್ಯಾ ವಿ. ಶೆಟ್ಟಿ, ಗೀತಾ ಜಿ. ನೈಕ್, ಸೌಮ್ಯ ಎಸ್. ಶೆಟ್ಟಿ, ಆಶಾ ಪಿ. ಶೆಟ್ಟಿ ಮತ್ತು ಆಶಾ ಪಿ. ಹೆಗ್ಡೆ ಅವರು ತಂಡದ ಶಕ್ತಿಯಾಗಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಸಾಯಿನಾಥ್ ಎ. ಶೆಟ್ಟಿ ಮುಂಡ್ಕೂರು, ಚೆಂಡೆ-ಮದ್ದಲೆಯಲ್ಲಿ ಐ. ಲೋಕೇಶ್, ಅಶೋಕ್ ಆಚಾರ್ಯ ಉಲೆಪಾಡಿ ಹಾಗೂ ಪ್ರೀತೇಶ್ ಬಿ. ಮೂಲ್ಯ ಸಹಕರಿಸುತ್ತಿದ್ದಾರೆ.

ಗುರು ನಾಗೇಶ್ ಪೊಳಲಿ: ಸಾರ್ಥಕ ಕಲಾ ಪಯಣ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯವರಾದ ನಾಗೇಶ್ ಪೊಳಲಿ ಅವರು ಸದಾಶಿವ ಕುಂದರ್ ಮತ್ತು ಗಾಯತ್ರಿ ಸಾಲ್ಯಾನ್ ದಂಪತಿಯ ಸುಪುತ್ರ. ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದ ಇವರು, ಯಾವುದೇ ಗುರುಗಳಿಲ್ಲದೆ ಮನೆಯ ಅಂಗಳದಲ್ಲಿ ಕುಣಿಯುತ್ತಾ ಕಲೆ ಒಲಿಸಿಕೊಂಡವರು. ಹಿರಿಯ ಕಲಾವಿದ ರತ್ನಾಕರ ಅವರ ಪ್ರೋತ್ಸಾಹದಿಂದ 7ನೇ ತರಗತಿಯಲ್ಲೇ ಪೊಳಲಿ ಕ್ಷೇತ್ರದಲ್ಲಿ ‘ಅಮರ ಶಿಲ್ಪಿ ವೀರ ಶಂಭು ಕಲ್ಕುಡ’ ಪ್ರಸಂಗದ ಮೂಲಕ ರಂಗಪ್ರವೇಶ ಮಾಡಿದರು.
ನಂತರ ಭೋಜರಾಜ್ ವಾಮಂಜೂರು ಅವರ ಮೂಲಕ ತಳಕಳ ಮೇಳ ಸೇರಿದರು. ರತ್ನಾಕರ ಹೆಗ್ಡೆ ಪುತ್ತೂರು ಅವರಲ್ಲಿ ನಾಟ್ಯಾಭ್ಯಾಸ ಮಾಡಿ, ಸುಂಕದಕಟ್ಟೆ ಮೇಳದಲ್ಲೂ ಅನುಭವ ಪಡೆದರು. ಮುಂಬೈಗೆ ಬಂದ ಮೇಲೆ ಟಿ.ಆರ್. ಶೆಟ್ಟಿಯವರ ಮೂಲಕ ಶ್ರೀ ನಾರಾಯಣ ಗುರು ಮಂಡಳಿಯಲ್ಲಿ ಅವಕಾಶ ಪಡೆದರು. ಇವರು ನಿರ್ವಹಿಸಿದ ಚಂಡ-ಮುಂಡ, ಭಾರ್ಗವ, ಬಬ್ರುವಾಹನ, ಅಭಿಮನ್ಯು, ಶಿಶುಪಾಲ ಹಾಗೂ ಕೌರವನ ಪಾತ್ರಗಳು ಕಲಾಭಿಮಾನಿಗಳ ಮನಗೆದ್ದಿವೆ.
ಪ್ರಸ್ತುತ ಇವರು ಇನ್ನಂಜೆ ಶಶಿಧರ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯ ಶ್ರೀದೇವಿ ಯಕ್ಷ ಕಲಾ ನಿಲಯ (ನಾಲಾಸೋಪರ), ಯಕ್ಷ ಝೇಂಕಾರ (ಕಲ್ಯಾಣ್) ಹಾಗೂ ಮಾಲಾಡ್ನ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ‘ಯಕ್ಷಗುರು’ವಾಗಿ ಮನೆಮಾತಾಗಿದ್ದಾರೆ.




