30.5 C
Mumbai
June 8, 2026
Mumbai News Kannada
ಸುದ್ದಿ

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ





ಸನಾತನ ಧರ್ಮದ ಮೌಲ್ಯಗಳನ್ನು ಮಕ್ಕಳು ಅರಿತುಕೊಳ್ಳಬೇಕು: ಶ್ರೀಮತಿ ಉಷಾ ರಘುರಾಮ್ ರೈ

ಸುದ್ದಿ ಹಾಗೂ ಚಿತ್ರ: ಪಿ.ಆರ್. ರವಿಶಂಕರ್

ಬೊಯಿಸರ್ (ತಾ. 04.01.2026): ಪಶ್ಚಿಮ ಕರಾವಳಿಯ ಬೊಯಿಸರ್ ಪಶ್ಚಿಮದಲ್ಲಿರುವ ಪ್ರಸಿದ್ಧ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ, ಭಕ್ತಾದಿಗಳ ಸಮ್ಮುಖದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ಜನವರಿ 4ರಂದು ಯಶಸ್ವಿಯಾಗಿ ಸಂಪನ್ನಗೊಂಡವು.

​ಕಳೆದ ಜನವರಿ 22 ರಂದು ಆರಂಭಗೊಂಡಿದ್ದ 7ನೇ ವರ್ಷದ ಶ್ರೀ ದೇವೀ ಜಪಪಾರಾಯಣವು, ಜನವರಿ 4ರ ಬುಧವಾರದಂದು ದೇವೀ ಕಳಶ ವಿಸರ್ಜನಾ ವಿಧಿಯೊಂದಿಗೆ ಮುಕ್ತಾಯವಾಯಿತು. ಮಂದಿರದಲ್ಲಿ ಜನವರಿ 3ರಂದು ಅಪರಾಹ್ನ ದೀಪಾರಾಧನೆ, ಷೋಡಷ ಪೂಜೆ, ಶ್ರೀ ದುರ್ಗಾ ಅಷ್ಟೋತ್ತರ ನಾಮಾರ್ಚನೆ ಹಾಗೂ ದೇವೀ ಜಪ ಸಂಪನ್ನ ಮಹಾಪೂಜೆ ಜರುಗಿತು. ಜನವರಿ 4ರಂದು ಪಂಚದುರ್ಗಾ ಹವನ, ಪೂರ್ಣಾಹುತಿ ಮತ್ತು ಶ್ರೀ ದೇವೀ ಕಳಶ ವಿಸರ್ಜನೆ ನೆರವೇರಿತು. ಬಳಿಕ ಸಮೀಪದ ಶ್ರೀ ರಾಮೇಶ್ವರ ಮಹಾದೇವ ಮಂದಿರದಲ್ಲಿ ರುದ್ರಾಭಿಷೇಕವನ್ನು ನೆರವೇರಿಸಲಾಯಿತು.

ಮೌಲ್ಯಯುತ ಶಿಕ್ಷಣದ ಅಗತ್ಯ: ಉಷಾ ರಘುರಾಮ್ ರೈ

​ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಬೊಯಿಸರ್‌ನ ಉದ್ಯಮಿ ಹಾಗೂ ಸಮಾಜ ಸೇವಕಿ ಶ್ರೀಮತಿ ಉಷಾ ರಘುರಾಮ್ ರೈ, “ಇಂದಿನ ಕಾರ್ಯಕ್ರಮದಲ್ಲಿ ಶಾಲಾ ವಯಸ್ಸಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಬಹಳ ಸಂತಸದ ವಿಷಯ. ಶಾಲಾ ವಿದ್ಯಾಭ್ಯಾಸದಲ್ಲಿ ಮಗ್ನರಾಗಿರುವ ಮಕ್ಕಳಿಗೆ ಎಳೆಯ ಪ್ರಾಯದಿಂದಲೇ ನಮ್ಮ ಸನಾತನ ಧರ್ಮದ ಆಚಾರ-ವಿಚಾರಗಳು ಮತ್ತು ಧರ್ಮ ಸೂಕ್ಷ್ಮಗಳನ್ನು ತಿಳಿಸಿಕೊಡುವ ಪ್ರಯತ್ನವಾಗಬೇಕು,” ಎಂದು ಕರೆ ನೀಡಿದರು.

​ಮುಂದುವರಿದು ಮಾತನಾಡುತ್ತಾ, “ನಾವು ಕೇವಲ ಉನ್ನತ ವ್ಯಾಸಂಗದತ್ತ ಗಮನಹರಿಸದೆ, ನಮ್ಮ ಧರ್ಮದ ಮೂಲ ತತ್ವಗಳು, ಮೌಲ್ಯಗಳು ಹಾಗೂ ಭಗವದ್ಗೀತೆಯ ಸಾರವನ್ನು ಮಕ್ಕಳಿಗೆ ಬೋಧಿಸಬೇಕು. ಮಕ್ಕಳ ಜೀವನದ ಹಾದಿಯನ್ನು ಸುಗಮಗೊಳಿಸಿ, ಅವರು ಗುರಿ ತಲುಪುವಂತೆ ಮಾಡುವಲ್ಲಿ ಪೋಷಕರ ಜವಾಬ್ದಾರಿ ಮಹತ್ತರವಾದುದು,” ಎಂದು ಅಭಿಪ್ರಾಯಪಟ್ಟರು.

​ಈ ವರ್ಷದ ಪೂಜೆಯಲ್ಲಿ 30 ಮಹಿಳಾ ಜಪವೃತಧಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್, ಶ್ರೀಮತಿ ಪದ್ಮಾವತಿ ಮತ್ತು ಸತ್ಯಾ ಕೋಟ್ಯಾನ್ ದಂಪತಿ, ಶ್ರೀನಿವಾಸ್ ಕೋಟ್ಯಾನ್ ದಂಪತಿ ಹಾಗೂ ಶ್ರೀಮತಿ ಉಷಾ ರಘುರಾಮ್ ರೈ ದಂಪತಿ ಉಪಸ್ಥಿತರಿದ್ದರು.

​ಸದ್ಗುರು ಭಜನಾ ಮಂಡಳಿ, ಸ್ವಾಮಿ ನಿತ್ಯಾನಂದ ಭಕ್ತವೃಂದದ ಸದಸ್ಯರು, ಸ್ಥಳೀಯ ಉದ್ಯಮಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡಿದ್ದರು. ಪುರೋಹಿತ ರಾಜೇಶ್ ಶಾಂತಿ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸುದ್ದಿ ಹಾಗೂ ಚಿತ್ರ: ಪಿ.ಆರ್. ರವಿಶಂಕರ್ (8483980035)



Related posts

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

Mumbai News Desk

ರಂಗ ನಟ, ಕಲಾ ಪೋಷಕ, ಸಂಘಟಕ ಸದಾಶಿವ ಡಿ ತುಂಬೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ತಶಸ್ತಿ

Mumbai News Desk

ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ ನಿಧನ

Mumbai News Desk

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಬೆಳ್ಮಣ್: ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಉದ್ಘಾಟನೆಗೆ ಸಿದ್ಧತೆ ,

Mumbai News Desk

ಉಡುಪಿ ಜಿಲ್ಲೆಯಲ್ಲಿ ವರುಣನ ಸಿಂಚನ: ಬಿಸಿಲಿನ ಬೇಗೆಯಿಂದ ಜನರಿಗೆ ತಂಪು ನೀಡಿದ ಮಳೆ

Mumbai News Desk