
ಅನೇಕ ತುಳು ಹಾಗೂ ಕನ್ನಡ ಕೃತಿಗಳನ್ನು ರಚಿಸಿರುವ ಸೋಮನಾಥ ಎಸ್.ಕರ್ಕೇರರ ಹೊಸ ತುಳು ಕೃತಿ ‘ಪೆರ್ಗ’ವು ಇದೀಗ ಅಚ್ಚಿನ ಮನೆಯಿಂದ ಹೊರ ಬಂದಿದ್ದು ಇದರ ಮೊತ್ತ ಮೊದಲನೆಯ ಪ್ರತಿಯನ್ನು ಶುಕ್ರವಾರ ದಿನಾಂಕ 20-2-2026 ರಂದು ನವಿ ಮುಂಬಯಿಯ ಘನ್ಸೋಲಿಯ ಮೂಕಾಂಬಿಕಾ ದೇವಿಯ ಚರಣ ಕಮಲಗಳಿಗೆ ಅರ್ಪಿಸಲಾಯ್ತು.

ಈ ಸಂಧರ್ಭದಲ್ಲಿ ಮಂದಿರದ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿಯವರು ದೇವಸ್ಥಾನದ ಪರವಾಗಿ ‘ಪೆರ್ಗ”ದ ಪ್ರತಿಯನ್ನು ಸ್ವೀಕರಿಸಿದರು. ಈ ಪ್ರಯುಕ್ತ ಸರಳ ಪೂಜೆ ಹಾಗೂ ಮಂಗಳಾರತಿಯನ್ನು ಮಾಡಲಾಗಿ ಲೇಖಕರಿಗೆ ದೇವಿ ಮೂಕಾಂಬಿಕೆಯ ಪ್ರಸಾದ ನೀಡಿ ಅವರಿಂದ ಇನ್ನೂ ಹೆಚ್ಚು ಮೌಲಿಕ ಕೃತಿಗಳು ರಚಿಸಲ್ಪಟ್ಟು ಓದುಗರ ಕೈ ಸೇರಲಿ ಎಂದು ಅಣ್ಣಿ ಶೆಟ್ಟಿಯವರು ಆಶಿರ್ವದಿಸಿದರು. ಕೃತಿ ಅರ್ಪಣೆಯ ಈ ಸಂದರ್ಭದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖ್ಯ ಕಛೇರಿಯ ಸಮಿತಿ ಸದಸ್ಯ ಹಾಗೂ ಜೊತೆ ಕೋಶಾಧಿಕಾರಿ ಚಂದ್ರಕಾಂತ ಸಾಲ್ಯಾನ್, ದೇವಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯ ಕುಟ್ಟಿ ಕೆಂದರ್ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದ ಸದಸ್ಯೆ ಪ್ರತಿಭಾ ಸಾಲ್ಯಾನ್ ಉಪಸ್ಥಿತರಿದ್ದರು.

ತುಳು ಹನಿಗವನ, ಹನಿ ಕಥೆ, ಹಾಸ್ಯ ತುಣುಕುಗಳಿಂದ ಕೂಡಿದ ‘ಪೆರ್ಗ’ ವು ಸದ್ಯದಲ್ಲೇ ಮುಂಬಯಿ ಮತ್ತು ಉಡುಪಿ ಜಿಲ್ಲೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯಯನ್ನು ಮುಂಬಯಿಯ ಪ್ರತಿಯೊಬ್ಬ ತುಳುವರ ಮನೆ ಮನೆಗೆ ತಲುಪಿಸಲಾಗುವುದು ಎಂದು ಈ ಕೃತಿಯ ಪ್ರಕಾಶಕರಾದ ಮುಂಬಯಿಯ ಅಕ್ಷರಗಂಗಾ ಪ್ರಕಾಶನದವರು ತಿಳಿಸಿದ್ದಾರೆ.




