31.1 C
Mumbai
June 11, 2026
Mumbai News Kannada
ಮುಂಬಯಿ

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ





ಮುಂಬೈ: ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ಜಮ್ಮು-ಕಾಶ್ಮೀರದ ಪವಿತ್ರ ಮಾತಾ ವೈಷ್ಣೋದೇವಿ ಯಾತ್ರೆಯು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು.

​ಸಮಾಜದ ದಾನಿ ಸುನೀಲ್ ಸಾಲಿಯಾನ್ ಅವರ ಮುಂದಾಳತ್ವದಲ್ಲಿ ಆಯೋಜಿತವಾಗಿದ್ದ ಈ ಯಾತ್ರೆಯು ಫೆಬ್ರವರಿ 20ರಿಂದ 25ರವರೆಗೆ ನಡೆಯಿತು. ಕುಲಾಲ ಬಾಂಧವರಲ್ಲಿ ಭಕ್ತಿ, ಏಕತೆ ಮತ್ತು ಆತ್ಮಸಾಕ್ಷಾತ್ಕಾರದ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಪವಿತ್ರ ಪಯಣದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

​ತ್ರಿಕೂಟ ಪರ್ವತ ಶ್ರೇಣಿಯ ಕತ್ರಾ ಸಮೀಪವಿರುವ ಮಾತಾ ವೈಷ್ಣೋದೇವಿ ಮಂದಿರಕ್ಕೆ ತೆರಳಿದ ಭಕ್ತರು ಸುಮಾರು 14 ಕಿ.ಮೀ.ಗಳ ಕಠಿಣ ಹಾದಿಯನ್ನು ‘ಜೈ ಮಾತಾ ದೀ’ ಘೋಷಣೆಯೊಂದಿಗೆ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಯಾತ್ರೆಯ ಮೊದಲ ಹಂತವಾಗಿ ಅರ್ಧ ಕುವರಿ ಮಂದಿರದ ಗುಹಾ ದರ್ಶನ ಪಡೆದ ತಂಡವು, ನಂತರ ಮುಖ್ಯ ಮಂದಿರದಲ್ಲಿ ಶ್ರೀಮಾತೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿತು. ದೇವಿಯ ದರ್ಶನದ ಬಳಿಕ ಸಂಪ್ರದಾಯದಂತೆ ಭೈರವನಾಥ ಮಂದಿರಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.

​ಯಾತ್ರೆಯ ಮುಂದಿನ ಭಾಗವಾಗಿ ರಿಯಾಸಿ ಜಿಲ್ಲೆಯ ರನ್ಸೂ ಗ್ರಾಮದ ಸಮೀಪವಿರುವ ಪ್ರಸಿದ್ಧ ‘ಶಿವಖೋರಿ’ ಗುಹಾ ಮಂದಿರಕ್ಕೆ ಭಕ್ತರು ಭೇಟಿ ನೀಡಿದರು. ಸುಮಾರು 200 ಮೀಟರ್ ಉದ್ದದ ಈ ನೈಸರ್ಗಿಕ ಗುಹೆಯಲ್ಲಿನ ಸ್ವಯಂಭೂ ಶಿವಲಿಂಗದ ದರ್ಶನ ಪಡೆದರು. ಬಳಿಕ ಕತ್ರಾ ಸಮೀಪದ ರಿಯಾಸಿ ರಸ್ತೆಯಲ್ಲಿರುವ ನವದುರ್ಗಾ ಗುಹಾ ದೇವಾಲಯ ಹಾಗೂ ಶಿವ ಗುಫಾ ದರ್ಶನ ಪಡೆದು ಪುನೀತರಾದರು.

​ಆಧ್ಯಾತ್ಮಿಕ ಪಯಣದ ಜೊತೆಗೆ ಭಕ್ತರು ಉಧಂಪುರ ಜಿಲ್ಲೆಯ ಪ್ರಸಿದ್ಧ ಗಿರಿಧಾಮ ‘ಪಟ್ನಿಟಾಪ್’ಗೆ ಭೇಟಿ ನೀಡಿದರು. ಹಿಮಾಲಯದ ಶಿವಾಲಿಕ್ ಶ್ರೇಣಿಯ ಹಿಮಚ್ಛಾದಿತ ಪರ್ವತಗಳು ಹಾಗೂ ಚೆನಾಬ್ ನದಿಯ ಸುಂದರ ನೋಟವನ್ನು ಸವಿದ ಯಾತ್ರಾರ್ಥಿಗಳು, ಅಲ್ಲಿನ ಹಸಿರು ಹುಲ್ಲುಗಾವಲಿನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಆಟೋಟಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು.

​ಯಾತ್ರೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ ಸುನೀಲ್ ಸಾಲಿಯಾನ್ ಮತ್ತು ದೇವಕಿ ಸಾಲಿಯಾನ್ ದಂಪತಿಯನ್ನು ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಯಾತ್ರೆಯ ಯಶಸ್ಸಿನಲ್ಲಿ ಕುಲಾಲ ಸಂಘದ ಜೊತೆ ಕೋಶಾಧಿಕಾರಿ ರೇಣುಕಾ ಸಾಲಿಯಾನ್, ಉಮೇಶ್ ಬಂಗೇರ, ಸ್ಥಳೀಯ ಸಮಿತಿಯ ಜೊತೆ ಕಾರ್ಯಾಧ್ಯಕ್ಷ ಮೋಹನ್ ಬಂಜನ್, ಕಾರ್ಯದರ್ಶಿ ನ್ಯಾ. ಉಮಾನಾಥ ಮೂಲ್ಯ, ನಾರಾಯಣ ಎಸ್. ಬಂಜನ್, ಪ್ರಮೀಳಾ ಬಂಜನ್, ಜಯಂತಿ ಯು. ಬಂಗೇರ, ಸತೀಶ್ ಬಂಗೇರ, ಭಾಸ್ಕರ್ ಮೂಲ್ಯ, ಅರ್ಚಕ ಯಶೋಧರ ಬಂಗೇರ ಹಾಗೂ ಸೂರತ್‌ನ ವಿಶ್ವನಾಥ್ ಮೂಲ್ಯ ದಂಪತಿಗಳು ಪ್ರಮುಖ ಪಾತ್ರ ವಹಿಸಿದ್ದರು.

​ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರ ಶಿಸ್ತುಬದ್ಧ ಸಹಕಾರದೊಂದಿಗೆ ಯಾತ್ರೆಯು ಸಂಪನ್ನಗೊಂಡಿತು. ಫೆಬ್ರವರಿ 25ರಂದು ಭಕ್ತರು ಸ್ಮರಣೀಯ ಅನುಭವಗಳೊಂದಿಗೆ ರೈಲಿನ ಮೂಲಕ ಮುಂಬೈಗೆ ಮರಳಿದರು. ಈ ಯಾತ್ರೆಯು ಕುಲಾಲ ಬಾಂಧವರಲ್ಲಿ ಸಮಾನತೆ, ಸಂಘಟನೆಯ ಏಕತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಯಿತು.



Related posts

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

ಡಿಸೆಂಬರ್ 8, 9 ರಂದು ಮುಂಬೈನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಶೇ 15ರಷ್ಟು ನೀರಿನ ಕಡಿತ

Mumbai News Desk

ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವ

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk