
ಮುಂಬೈನ ಮಾಯಾನಗರಿಯಲ್ಲಿ ತುಳು-ಕನ್ನಡಿಗರ ಕಲಾ ಪ್ರತಿಭೆ ದೇಶ-ವಿದೇಶಗಳಲ್ಲಿ ಚರ್ಚೆಯಾಗುವ ಮಟ್ಟಕ್ಕೆ ಬೆಳೆಯುತ್ತಿದೆ. ಇಲ್ಲಿನ ಮಕ್ಕಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲದೆ; ನೃತ್ಯ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸಾಧನೆ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ.
ಭರತನಾಟ್ಯ ಕಲಿಯುವ ವಿದ್ಯಾರ್ಥಿಗಳ ಜೀವನದಲ್ಲಿ “ರಂಗಪ್ರವೇಶ” ಒಂದು ಮಹತ್ವದ ಹಂತ. ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸದ ಫಲವನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಅವರು ತಮ್ಮ ಗುರುಗಳಿಗೂ, ಪೋಷಕರಿಗೂ ಹೆಮ್ಮೆ ತರುತ್ತಾರೆ.
ಇದೇ ಹಿನ್ನೆಲೆಯಲ್ಲಿ, ಮುಂಬೈ ಮುಲುಂಡ್ನ ಮಹಾಕವಿ ಕಾಳಿದಾಸ ನಾಟ್ಯ ಮಂದಿರದಲ್ಲಿ ಇತ್ತೀಚೆಗೆ ಕು. ಪ್ರಿಷಾ ಜಿತೇಂದ್ರ ಕೋಟ್ಯಾನ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಭವ್ಯವಾಗಿ ನಡೆಯಿತು. ಪ್ರಿಷಾ ಅವರ ಈ ರಂಗಪ್ರವೇಶವು ಕೇವಲ ನೃತ್ಯ ಪ್ರದರ್ಶನವಲ್ಲ, ಅದು ಭಾವನೆ, ಅಭಿವ್ಯಕ್ತಿ ಮತ್ತು ಸಂವಹನದ ಸುಂದರ ಸಂಯೋಜನೆಯಾಗಿತ್ತು. ನೃತ್ಯದ ಮೂಲಕ ಕಥೆಗಳನ್ನು, ಸಂಸ್ಕೃತಿಯನ್ನು ಹಾಗೂ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ ಅವರು ಪ್ರೇಕ್ಷಕರ ಮನಸೆಳೆದರು. ಸಂಗೀತ, ಭಾವ ಮತ್ತು ದೇಹಭಾಷೆಯ ಸಮನ್ವಯದಿಂದ ಕಾರ್ಯಕ್ರಮವು ವಿಶೇಷ ಅನುಭವವನ್ನು ನೀಡಿತು.

ಕು. ಪ್ರಿಷಾ ಜಿತೇಂದ್ರ ಕೋಟ್ಯಾನ್ ಅವರು ಉಡುಪಿ ಪೆರ್ಡೂರಿನ ಮಮತಾ ಕೋಟ್ಯಾನ್ ಮತ್ತು ಸುರತ್ಕಲ್ ಜೋಕಟ್ಟೆಯ ಜಿತೇಂದ್ರ ಕೋಟ್ಯಾನ್ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಮುಲುಂಡ್ ಪಶ್ಚಿಮದಲ್ಲಿರುವ ‘ಫ್ರೆಂಡ್ಸ್ ಅಕಾಡೆಮಿ’ ಶಾಲೆಯಲ್ಲಿ ಐಸಿಎಸ್ಇ (ICSE) ಪಠ್ಯಕ್ರಮದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಾಲ್ಕನೇ ವಯಸ್ಸಿನಲ್ಲಿಯೇ ವಿದುಷಿ ಶ್ರೀಮತಿ ರಮ್ಯಾ ನಾಯರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲೆಯೊಂದಿಗೆ ತಮ್ಮ ಪಯಣ ಆರಂಭಿಸಿದ ಪ್ರಿಷಾ, ಬಾಲ್ಯದಿಂದಲೇ ನೃತ್ಯ, ಸಂಗೀತ, ಜನಪದ ಕಲೆ ಹಾಗೂ ಯಕ್ಷಗಾನದಲ್ಲಿ ಅಪಾರ ಆಸಕ್ತಿ ತೋರಿದ್ದಾರೆ. ಅವರ ಅಭಿನಯ ಶೈಲಿ ಮತ್ತು ಭಂಗಿಗಳ ವೈಶಿಷ್ಟ್ಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗೌರವಾನ್ವಿತ ಗುರು ಶ್ರೀಮತಿ ಗಿರಿಜಾ ನಾಯರ್ ಅವರ ಮಾರ್ಗದರ್ಶನದಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಮತ್ತಷ್ಟು ತೇಜಸ್ವಿಗೊಳಿಸಿಕೊಂಡಿರುವ ಇವರು, ನಂತರ ಆಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಂದ ಯಕ್ಷಗಾನ ತರಬೇತಿಯನ್ನು ಪಡೆದು ಹಲವಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ.

ಉಡುಪಿ ಮೂಲದ ಈ ಪ್ರತಿಭಾವಂತ ವಿದ್ಯಾರ್ಥಿನಿ, ಗೀತಾ ನೃತ್ಯ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಪ್ರಕಾಶ್ ಭಂಡಾರಿ ಅವರ “ಚಿಣ್ಣರ ಬಿಂಬ” ಮೂಲಕ ಸಂಗೀತ ಮತ್ತು ನಾಟಕ ಸಂಯೋಜಿತ ಯಕ್ಷಗಾನ ಕಲೆಯಲ್ಲಿ ಪರಿಣತಿ ಗಳಿಸಿದ್ದಾರೆ. ಮುಂಬೈ ಮತ್ತು ಉಡುಪಿಯ ವಿವಿಧ ವೇದಿಕೆಗಳಲ್ಲಿ ತಮ್ಮ ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನಗಳ ಮೂಲಕ ವಿಶಿಷ್ಟ ಗುರುತನ್ನು ಪಡೆದಿದ್ದಾರೆ.
ಬೌದ್ಧಿಕ ಕುತೂಹಲವನ್ನು ಕಲಾತ್ಮಕ ಉತ್ಸಾಹದೊಂದಿಗೆ ಬೆಸೆದುಕೊಂಡಿರುವ ಕು. ಪ್ರಿಷಾ ಅವರ ಭವಿಷ್ಯವು ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಉಜ್ವಲವಾಗಲಿ ಹಾಗೂ ಅವರ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.
: ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ




