ಮೊಗವೀರ ಬ್ಯಾಂಕಿನ ಅಭಿವೃದ್ಧಿಗೆ ಸಮಾಜ ಬಾಂಧವರು ಶ್ರಮಿಸಬೇಕು: ಜಯ ಕೋಟ್ಯಾನ್
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬೈ: ಮುಂಬೈಯ ಮೊಗವೀರ ಸಮಾಜ ಬಾಂಧವರು ಸ್ಥಾಪಿಸಿರುವ ಮೊಗವೀರ ಬ್ಯಾಂಕಿನ 80ನೇ ಸ್ಥಾಪನಾ ದಿನಾಚರಣೆಯು ಅಂಧೇರಿ ಪಶ್ಚಿಮದ ವೀರ ದೇಸಾಯಿ ರಸ್ತೆಯಲ್ಲಿರುವ ಮೊಗವೀರ ಭವನದ ಕೇಂದ್ರ ಕಚೇರಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್, ಉಪಾಧ್ಯಕ್ಷರಾದ ಮೋಹನ್ ಬೆಂಗ್ರೆ ಹಾಗೂ ಕಾರ್ಯದರ್ಶಿ ಶರಣ್ಕುಮಾರ್ ಅವರು ಪಾಲ್ಗೊಂಡು ಶುಭ ಹಾರೈಸಿದರು.
ಬ್ಯಾಂಕಿನ ಸೇವಾ ಕಾರ್ಯಗಳು ಮತ್ತು ಅಭಿವೃದ್ಧಿಯ ಬಗ್ಗೆ ಸಮಗ್ರ ಮಾಹಿತಿ ಪಡೆದ ಜಯ ಕೋಟ್ಯಾನ್ ಅವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲು ಮೊಗವೀರ ಸಮಾಜ ಬಾಂಧವರು ಶ್ರಮಿಸಬೇಕು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕಿನ ಶಾಖೆಗಳು ಆರಂಭವಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇದೇ ವೇಳೆ ಬ್ಯಾಂಕಿನ ವತಿಯಿಂದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಭಾಸ್ಕರ್ ಸಾಲಿಯನ್, ನಿರ್ದೇಶಕರುಗಳಾದ ಹರೀಶ್ ಶ್ರೀಯಾನ್, ರಮೇಶ್ ಸಾಲಿಯನ್, ಮುಖೇಶ್ ಬಂಗೇರ, ಹರೀಶ್ಚಂದ್ರ ಕಾಂಚನ್, ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ವೇದಪ್ರಕಾಶ್ ಶ್ರೀಯಾನ್ ಮತ್ತು ಮೊಗವೀರ ಮಂಡಳಿಯ ಮಾಜಿ ಅಧ್ಯಕ್ಷರಾದ ಅಜಿತ್ ಸುವರ್ಣ ಉಪಸ್ಥಿತರಿದ್ದರು.





