
ಮುಂಬಯಿಯ ಘಾಟ್ಕೋಪರ್ ಆನಂದ ನಗರದ ನಿವಾಸಿಗಳಾದ ಪುರುಷೋತ್ತಮ ಮತ್ತು ಸುನಿತಾ ಸಾಲ್ಯಾನ್ ದಂಪತಿಗಳ ಹರಕೆಯ ಸೇವೆಯಾಗಿ ಏಪ್ರಿಲ್ 1, 2026 ರಂದು ಬಜ್ಪೆಯ ಮುರ ಸೌಹಾರ್ದ ನಗರದ ಅಂಗನವಾಡಿ ಭಂಡಾರ ಮನೆ ಬಳಿ ‘ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವು ಅತ್ಯಂತ ಭಕ್ತಿ-ಸಂಭ್ರಮದಿಂದ ಜರುಗಿತು.

ಈ ಯಕ್ಷಗಾನದಲ್ಲಿ ತುಳುನಾಡ ಮಾಣಿಕ್ಯ, ಜನಜಾಗೃತಿ ನಟ ಅರವಿಂದ ಬೋಳಾರ್ ಅವರು ಅತಿಥಿ ಕಲಾವಿದರಾಗಿ ಆಗಮಿಸಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದ ಮಧ್ಯಂತರದಲ್ಲಿ ಕಲಾ ಸೇವೆಯನ್ನು ಗುರುತಿಸಿ ಅರವಿಂದ ಬೋಳಾರ್, ಪಾವಂಜೆ ಮೇಳದ ಪ್ರಸಿದ್ಧ ಕಲಾವಿದ ಮನ್ವಿತ್ ನಿಡ್ಡೋಡಿ ಹಾಗೂ ಯಕ್ಷಗಾನ ಸೇವಾಕರ್ತ ಯೋಗೀಶ್ ಕರ್ಕೇರ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸೇವಾಕರ್ತರಾದ ಸುನೀತಾ ಬೆಲ್ಚಡ, ಪುರುಷೋತ್ತಮ ಬೆಲ್ಚಡ, ಜಿಶಾಂತ್, ಸುಪ್ರಿತಾ, ಜಿತೇಶ್, ಜಿಯ ಹಾಗೂ ದಾಮೋದರ್ ಬೆಲ್ಚಡ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಕಮಲಾಕ್ಷ ಬೆಲ್ಚಡ ಅವರು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.
ಜಯ ಸಿ. ಪೂಜಾರಿ ಕೆಳಾರ್ಕಳ ಬೆಟ್ಟು





