July 22, 2026
Mumbai News Kannada
ಸುದ್ದಿ

ಕರಾವಳಿಯ ಬಹುಮುಖ ಪ್ರತಿಭೆಯ ಸಂಘಟಕ, ಹೋರಾಟಗಾರ, ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ನಿಧನ







ಸಾಮಾಜಿಕ ಹೊರಟಗಾರ, ಪರಿಸರ ಪ್ರೇಮಿ, ಕನ್ನಡ ತುಳು ಸಾಹಿತ್ಯದ ಸಾರಥಿ, ನಾಟಕ ರಂಗ ಕಲಾವಿದ ಮತ್ತು ಬಿಜೆಪಿ ಮುಖಂಡ ರಾಮಚಂದರ್ ಬೈಕಂಪಾಡಿಯವರು ಇಂದು (14/4) ದೈವಾಧೀನರಾಗಿದ್ದಾರೆ.

ಕರಾವಳಿ ಕರ್ನಾಟಕದ ಪ್ರಭಾವಿ ಮೊಗವೀರ ಮುಖಂಡ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಬಹುಮುಖ ಪ್ರತಿಭೆಯ ಧೀಮಂತ ವ್ಯಕ್ತಿತ್ವದ ರಾಮಚಂದ್ರ ಬೈಕಂಪಾಡಿ ಅವರು ಇಂದು (ಏಪ್ರಿಲ್ 14, 2026) ದೈವಾಧೀನರಾಗಿದ್ದು, ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ. ಸಾಮಾಜಿಕ ಹೋರಾಟಗಾರ, ಪರಿಸರ ಪ್ರೇಮಿ, ಕನ್ನಡ-ತುಳು ಸಾಹಿತ್ಯದ ಸಾರಥಿ ಹಾಗೂ ನಾಟಕ ರಂಗದ ಪ್ರತಿಭಾವಂತ ಕಲಾವಿದರಾಗಿದ್ದ ಇವರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ಮಾಜಿ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಸಮುದಾಯದ ಏಳಿಗೆಗಾಗಿ ನಿರಂತರ ಧ್ವನಿ ಎತ್ತುತ್ತಾ ಬಂದಿದ್ದ ಇವರ ಅಪೂರ್ವ ಸಮಾಜ ಸೇವೆಯನ್ನು ಪರಿಗಣಿಸಿ ಸರ್ಕಾರ ಇವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕರಾವಳಿ ಭಾಗದಲ್ಲಿ ಬಿಜೆಪಿಯ ಬಲವರ್ಧನೆಗೆ ಅಪಾರವಾಗಿ ಶ್ರಮಿಸಿದ ಇವರು, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿಯೂ ಗುರುತಿಸಿಕೊಂಡಿದ್ದರು. ವಿಶೇಷವಾಗಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೊಗವೀರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಮತ್ತು ಸಮುದಾಯದ ಬೇಡಿಕೆಗಳನ್ನು ನಿರ್ಲಕ್ಷಿಸಬಾರದು ಎಂದು ಪಕ್ಷದ ವೇದಿಕೆಯಲ್ಲಿ ಒತ್ತಾಯಿಸುವ ಮೂಲಕ ಮೀನುಗಾರರ ಹಿತರಕ್ಷಣೆಗಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರ್ಕಾರೇತರ ಸಂಸ್ಥೆಯಾದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ಇವರು ಸಲ್ಲಿಸಿದ ಸೇವೆ ಅಮೋಘವಾದುದು. ಇವರು ಸಮಿತಿಯು ಹಮ್ಮಿಕೊಂಡಿದ್ದ ಕುದುರೆಮುಖ ಯೋಜನೆಯ ಹೋರಾಟದಲ್ಲಿ ಸುಮಾರು 10 ಸಾವಿರ ಜನರನ್ನು ಒಗ್ಗೂಡಿಸಿ, ಹೋರಾಟವು ಯಶಸ್ವಿಯಾಗುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದರು. ಇವರ ಈ ಹೋರಾಟದ ಫಲವಾಗಿಯೇ ಕುದುರೆಮುಖ ಯೋಜನೆಗೆ 20 ವರ್ಷಗಳ ವಿಸ್ತರಣೆ ಲಭಿಸಿತ್ತು. ಅಲ್ಲದೆ, ನಾಗಾರ್ಜುನ ವಿದ್ಯುತ್ ಸ್ಥಾವರದ ಹೋರಾಟದ ಮುಂಚೂಣಿಯಲ್ಲೂ ಇದ್ದ ಇವರು ಸಮಿತಿಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ರಾಮಚಂದ್ರ ಬೈಕಂಪಾಡಿ ಅವರ ನಿಧನಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಗೌರವಾಧ್ಯಕ್ಷ ಡಾ. ಬಿ ಎಂ ಹೆಗ್ಡೆ, ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕುರು ಸುರೇಂದ್ರ ಸಾಲಿಯನ್, ಗೌರವ ಪ್ರಧಾನ ಕೋಶಾಧಿಕಾರಿ ಕಲ್ಯಾಣಪುರ ಸದಾನಂದ ಆಚಾರ್ಯ ಹಾಗೂ ಸಮಿತಿಯ ಉಪಾಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳು, ಸಲಹೆಗಾರರು, ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ರಾಜ್ಯ ಸಂಯೋಜಕ ಜಗಧೀಶ್ ಅಧಿಕಾರಿ, ಉಪ ಕಾರ್ಯಧ್ಯಕ್ಷರುಗಳು, ಜಿಲ್ಲಾ ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ, ಸುರೇಂದ್ರ ಮೆಂಡನ್, ಕೋಶಾಧಿಕಾರಿ ಪ್ರಭಾಕರ್ ಬಂಗೇರ ಕಾರ್ಕಳ, ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಅಭಿವೃದ್ಧಿ ಮತ್ತು ಸಮುದಾಯದ ಧ್ವನಿಯಾಗಿದ್ದ ಒಬ್ಬ ದಕ್ಷ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.



Related posts

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಚೀನಾದ ಎಮ್‌.ಡಿ.ಆರ್‌.ಟಿ. ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಡಾ. ಆರ್. ಕೆ. ಶೆಟ್ಟಿ ಭಾಷಣ

Mumbai News Desk

ವೆನೆಜುವೆಲಾ ಉಕ್ಕಿನ ಮಹಿಳೆ ಮಾರಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ; ಸ್ವಘೋಷಿತ ಶಾಂತಿದೂತ ಟ್ರಂಪ್‌ಗೆ ಮುಖಭಂಗ

Mumbai News Desk

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ಶೀಘ್ರ ವಿಲೀನ: ಕರಾವಳಿ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ

Mumbai News Desk

ನೆಲೆ ಫೌಂಡೇಶನ್ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ : ಮೂಲತ್ವ ಪೌಂಡೇಶನ್ ನ ಕಾರ್ಯ ಶ್ಲಾಘನೀಯ – ಆರ್ ಎಸ್ ಎಸ್ ಮುಖಂಡ ವಾಮನ್ ಶೆಣೈ ಅಭಿಮತ

Mumbai News Desk

ಡಹಾಣು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೆ ಆರಂಭ

Mumbai News Desk