ಐಕಳ ಹರೀಶ್ ಶೆಟ್ಟಿ ಅವರ ಮಹತ್ವದ ಯೋಜನೆ ಪೂರ್ಣಗೊಳಿಸುವುದರಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ: ತೋನ್ಸೆ ಆನಂದ್ ಶೆಟ್ಟಿ
ಮುಂಬೈ: ಜಾಗತಿಕ ಬಂಟರ ಸಂಘವು ಬಂಟ ಬಂಧುಗಳ ಆಸ್ತಿ. ಆದ್ದರಿಂದ ಸಮಾಜದ ಬಂಧುಗಳಿಗೆ ಆಶ್ರಯ ನೀಡುವ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಐಕಳ ಹರೀಶ್ ಶೆಟ್ಟಿ ಅವರು ಪ್ರತಿಯೊಬ್ಬರಿಗೂ—ದಾನಿಗಳಾಗಿರಲಿ ಅಥವಾ ದಾನಿ ಅಲ್ಲದಿರಲಿ—ಸಮಾನ ಗೌರವವನ್ನು ನೀಡಿದ್ದಾರೆ. ಸಮಾಜದಲ್ಲಿ ಕೆಲವರು ಅವಕಾಶವಾದಿಗಳಾಗಿರುತ್ತಾರೆ, ಕಾಲಕ್ಕೆ ತಕ್ಕಂತೆ ಬದಲಾಗುವ ಸ್ನೇಹಿತರಿರುತ್ತಾರೆ. ಕೆಲಸ ಮುಗಿದ ಮೇಲೆ ಮುಖ ತಿರುಗಿಸಿ ಹೋಗುವವರೂ ಇದ್ದಾರೆ, ಇದೆಲ್ಲವೂ ಇವರಿಗೆ ಅನುಭವವಿದೆ.
ಸಾಧಾರಣ 1984 ಅಥವಾ 1985 ರಲ್ಲಿ ಹರೀಶ್ ಶೆಟ್ಟಿ ಅವರು ಮುಂಬೈ ಬಂಟರ ಸಂಘಕ್ಕೆ ಸೇರ್ಪಡೆಯಾದರು. ಭುಜಂಗ ಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹರೀಶ್ ಶೆಟ್ಟಿಯವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಅವರ ಜೊತೆ ಕೆಲವರು ಹಿರಿಯರೂ ಸೇರಿಕೊಂಡರು. ಯುವಜನತೆಯನ್ನು ಸಂಘಟಿಸಿ, ಅವರಿಗೆ ವೇದಿಕೆ ಕಲ್ಪಿಸಿ, ಸರಿಯಾದ ಸ್ಥಾನಮಾನ ನೀಡಿ ಪ್ರೋತ್ಸಾಹಿಸಿದರು. ಐಕಳ ಹರೀಶ್ ಶೆಟ್ಟಿ ಅವರು ಬಂಟರ ಸಂಘದ ಅಧ್ಯಕ್ಷತೆ ವಹಿಸಿ, ಕಾರ್ಯಕಾರಿ ಸಮಿತಿಯ ಇತರ ಹಿರಿಯರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಸಂಸ್ಥೆಯು ಶಾಲೆ, ಕಾಲೇಜು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಅವರಿಗೆ ಕಟೀಲು ತಾಯಿ, ಉಡುಪಿ ಶ್ರೀಕೃಷ್ಣ ಹಾಗೂ ದೈವ-ದೇವರುಗಳ ಪರಿಪೂರ್ಣ ಆಶೀರ್ವಾದವಿದೆ. ಇದೀಗ ಜಾಗತಿಕ ಬಂಟರ ಸಂಘದ ಮಹತ್ವದ ಯೋಜನೆ ಮುಲ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವನವನ್ನು ನಿಯಮಿತ ಸಮಯದಲ್ಲಿ ಲೋಕಾರ್ಪಣೆ ಮಾಡುವ ಕಾರ್ಯಕ್ಕೆ ನಾನು ಕೂಡ ಅವರೊಂದಿಗೆ ಕೈಜೋಡಿಸುತ್ತೇನೆ ಹಾಗೂ ಸಮಾಜದ ದಾನಿಗಳು ಸಹಕಾರ ನೀಡಬೇಕು. ಆ ಮೂಲಕ ಐಕಳ ಹರೀಶ್ ಶೆಟ್ಟಿ ಅವರ ಈ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ತೋನ್ಸೆ ಆನಂದ್ ಶೆಟ್ಟಿ ನುಡಿದರು.

ಜುಲೈ 19 ರಂದು, ಬಂಟರ ಸಂಘ ಮುಂಬೈನ ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಕಟ್ಟಡದ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯ ಕುರಿತು ಹಾಗೂ ಡಿಸೆಂಬರ್ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುನಿಯಾಲು ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, “ಬಂಟ ಸಮಾಜಕ್ಕೆ ಮಾರ್ಗದರ್ಶಕರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಯಾವುದೇ ಯೋಜನೆಗಳನ್ನು ರೂಪಿಸಿಕೊಂಡರೂ ಅದನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿಕೊಂಡು ಬಂದವರು. ಜಾಗತಿಕ ಬಂಟರ ಸಂಘದ ಮೂಲಕ ಕನ್ಯಾನ ಸದಾಶಿವ ಶೆಟ್ಟಿ ಅವರ ಸಹಕಾರದಿಂದ ಮುಲ್ಕಿಯಲ್ಲಿ ಖರೀದಿಸಿದ ಜಾಗದಲ್ಲಿ ಸೂಕ್ತ ಸಂದರ್ಭದಲ್ಲಿ ಕಾಮಗಾರಿ ಪೂರ್ತಿಗೊಳಿಸುವ ಯೋಚನೆಯನ್ನು ರೂಪಿಸಿಕೊಂಡಿದ್ದಾರೆ, ಅದು ಖಂಡಿತ ಆ ಸಂದರ್ಭದಲ್ಲಿ ಲೋಕಾರ್ಪಣೆಯಾಗುತ್ತದೆ. ನಮ್ಮ ಸಮಾಜದ ಬಹಳಷ್ಟು ಸಂಘಗಳು ಜಾಗಗಳನ್ನು ಖರೀದಿಸಿದ್ದರೂ ಅದು ಯಾವುದೇ ಕಾರ್ಯಕ್ಕೆ ಉಪಯೋಗವಾಗದೆ ಉಳಿದಿದೆ. ಆದರೆ ಜಾಗತಿಕ ಬಂಟರ ಒಕ್ಕೂಟ ಜಾಗ ಖರೀದಿಸಿದ ದಿನದಿಂದಲೇ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಭವ್ಯ ಭವನ ನಿರ್ಮಾಣದ ಕೆಲಸ ಪ್ರಾರಂಭಿಸಿದೆ. ಅದು ನಿರಂತರವಾಗಿ ನಡೆಯುತ್ತಿದ್ದು, ಈ ಮಹತ್ವದ ಯೋಜನೆಗೆ ಹರೀಶ್ ಶೆಟ್ಟಿ ಅವರೊಂದಿಗೆ ನಾವೆಲ್ಲರೂ ಕೈಜೋಡಿಸಬೇಕು. ಮುಂದಿನ ದಿನಗಳಲ್ಲೂ ಅವರ ಎಲ್ಲಾ ಯೋಚನೆ ಮತ್ತು ಯೋಜನೆಗಳಿಗೆ ಸಹಕಾರ ನೀಡಬೇಕು. ಈ ಭವನ ನಿರ್ಮಾಣಗೊಂಡ ಬಳಿಕ ಬಂಟ ಸಮಾಜಕ್ಕೆ ಮಾತ್ರವಲ್ಲದೆ ನಾಡಿನ ಎಲ್ಲಾ ಸಮಾಜದ ಬಂಧುಗಳಿಗೂ ಸಹಕಾರಿಯಾಗಲಿದೆ. ಬಂಟ ಬಂಧುಗಳು ಕೇವಲ ಬಂಟರಿಗಾಗಿ ಬದುಕುವುದಲ್ಲ, ಸಮಸ್ತ ಸಮಾಜಕ್ಕಾಗಿ ಬದುಕುತ್ತಾ ಸಹಕಾರ ನೀಡುವವರು” ಎಂದರು.
ಒಕ್ಕೂಟದ ವಿಶೇಷ ಮಹಾದಾನಿ ಹಾಗೂ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಕ್ಕೆ ಜಾಗ ಖರೀದಿಸಬೇಕು ಎಂದು ಮೊದಲು ಪ್ರಸ್ತಾವನೆ ಮಾಡಿದ್ದೆ. ಆನಂದ ಶೆಟ್ಟಿಯವರು ಆ ದಿನದಿಂದ ಈವರೆಗೆ ಒಕ್ಕೂಟದಲ್ಲಿದ್ದು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಹಿಂದೊಮ್ಮೆ ಒಕ್ಕೂಟದ ಬಗ್ಗೆ ಬಿರುಗಾಳಿ ಎದ್ದಾಗ ಸಂಸದ ಗೋಪಾಲ್ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡಾ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್, ಮಹೇಶ್ ಶೆಟ್ಟಿ ತೆಳ್ಳಾರ್, ಅಶೋಕ್ ಶೆಟ್ಟಿ ಮೆರಿಟ್, ಅರವಿಂದ ಶೆಟ್ಟಿ ಮೀರಾ ರೋಡ್ ನಂಥವರು ತಡೆಗೋಡೆಯಂತೆ ನಿಂತವರು. ಇಂತಹ ಅಪಾರ ಶಕ್ತಿವಂತರು ಹರೀಶ್ ಶೆಟ್ಟಿ ಅವರೊಟ್ಟಿಗೆ ಇದ್ದಾರೆ. ಅವರಲ್ಲಿ ಒಂದು ಉತ್ತಮ ಗುಣವಿದೆ; ಯುವಕರನ್ನು ನಾಯಕರನ್ನಾಗಿ ಬೆಳೆಸುವ ಮತ್ತು ಅವರಿಗೆ ಜವಾಬ್ದಾರಿಯನ್ನು ನೀಡುವ ಗುಣವಿದು. ನನಗೂ ಅವರಿಗೂ ಸುದೀರ್ಘ ಕಾಲದ ಸಂಬಂಧವಿದ್ದು, ಅವರು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರೂ ಅದನ್ನು ಸಮರ್ಥ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಒಕ್ಕೂಟದ ಈ ಮಹತ್ವದ ಯೋಜನೆ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳುವಲ್ಲಿ ನಾವೆಲ್ಲರೂ ಸಹಕಾರ ನೀಡೋಣ” ಎಂದರು.
ವಿರಾರ್ ಶಂಕರ್ ಶೆಟ್ಟಿ ಮಾತನಾಡಿ, “ಐಕಳ ಹರೀಶ್ ಶೆಟ್ಟಿ ಅವರ ಮತ್ತು ನನ್ನ ಸಂಬಂಧ ಬಹಳ ವರ್ಷಗಳದ್ದು. ಅವರು ಪರಿವಾರಕ್ಕೆ ನೀಡುವ ಸಮಯವನ್ನು ಕಡಿಮೆ ಮಾಡಿ, ಸಮಾಜಕ್ಕೆ ತಮ್ಮ ಸರ್ವಸ್ವವನ್ನು ನೀಡಿದವರು. ಅವರ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಭವನಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು” ಎಂದರು.
ಪ್ರಾರಂಭದಲ್ಲಿ ಸಭಾಭವನ ನಿರ್ಮಾಣದ ಸಾಕ್ಷ್ಯಚಿತ್ರವನ್ನು ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಎನ್. ಶೆಟ್ಟಿ ರಕ್ಷಿ ಬಿಲ್ಡರ್, ಕೃಷ್ಣ ಪ್ಯಾಲೇಸ್ ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಒಕ್ಕೂಟದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಮೀರಾ ದಹಣು ಬಂಟ್ಸ್ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಹರೀಶ್ ಶೆಟ್ಟಿ ಪಡುಕುದ್ರು, ರತ್ನ ಪಿ. ಶೆಟ್ಟಿ, ಮನೋರಮಾ ಎನ್. ಬಿ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಲತಾ ಪಿ. ಶೆಟ್ಟಿ, ಪದಾಧಿಕಾರಿಗಳಾದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ, ಸಂಚಾಲಕ ಕೊಲ್ಲಾಡಿ ಬಾಲಕೃಷ್ಣ ರೈ, ಸಭಾಭವನ ನಿರ್ಮಾಣದ ಉಸ್ತುವಾರಿ ಇಂಜಿನಿಯರ್ ಗೋಪಾಲ್ ಭಟ್, ಒಕ್ಕೂಟದ ಲೆಕ್ಕಪರಿಶೋಧಕರಾದ ಸಿ. ಎ. ದಯಶರಣ್ ಶೆಟ್ಟಿ, ಸದಸ್ಯರಾದ ಮುಂಬೈ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಡ್ವೋಕೇಟ್ ಡಿ. ಕೆ. ಶೆಟ್ಟಿ, ಮೀರಾ ಭಯಂದರ್ ಬಂಟ್ಸ್ ಫೋರಂ ಅಧ್ಯಕ್ಷ ಮಲ್ಲಾರ್ ಬೀಡು ಉದಯ ಶೆಟ್ಟಿ, ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್ ಶೆಟ್ಟಿ ಮತ್ತಿತರರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ವಿಜಯ್ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು, ಗಿರೀಶ್ ಶೆಟ್ಟಿ ತೆಳ್ಳಾರ್ ಧನ್ಯವಾದ ಸಮರ್ಪಿಸಿದರು.
ಸಭೆಯ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ಪ್ರಾಯೋಜಕತ್ವವನ್ನು ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಶಶಿಧರ್ ಶೆಟ್ಟಿ ಇನ್ನಂಜೆ ಅವರು ವಹಿಸಿದ್ದರು. ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಸಭೆಯಲ್ಲಿ ಸಿ. ಎ. ಸದಾಶಿವ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಚಂದ್ರಶೇಖರ ಎಸ್. ಶೆಟ್ಟಿ, ಡಾ. ಸದಾನಂದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಆನಂದ್ ಡಿ. ಶೆಟ್ಟಿ ಎಕ್ಕಾರ್, ವಾಸು ಶೆಟ್ಟಿ ಭಿವಂಡಿ, ಜಯಂತ್ ಶೆಟ್ಟಿ ಠಾಣೆ, ಕೃಷ್ಣ ವಿ. ಶೆಟ್ಟಿ ಸಯನ್, ವಜ್ರಾಕ್ಷಿ ಪೂಂಜ ಮತ್ತು ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಕಾರ್ಯದರ್ಶಿ ಶೇಖರ್ ಶೆಟ್ಟಿ, ಬಂಟ್ಸ್ ಫೋರಂ ಮೀರಾ ರೋಡ್ ನ ಅಧ್ಯಕ್ಷ ಉದಯ್ ಶೆಟ್ಟಿ ಮಲ್ಲಾರ್ ಬೀಡು, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಠಾಣೆ ಬಂಟ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ವಿಜಯ್ ಶೆಟ್ಟಿ ಕುತ್ತೆತ್ತೂರು, ನವನೀತ್ ಶೆಟ್ಟಿ ಕದ್ರಿ, ಪ್ರವೀಣ್ ಶೆಟ್ಟಿ ವರಂಗ, ಶಾಲಿನಿ ಶೆಟ್ಟಿ ಮೀರಾ ರೋಡ್, ಜಯಂತಿ ಶೆಟ್ಟಿ ನವಿ ಮುಂಬೈ, ಜ್ಯೋತಿ ಶೆಟ್ಟಿ ನವಿ ಮುಂಬೈ, ಚೇತನಾ ಸುರೇಶ್ ಶೆಟ್ಟಿ, ಸರೋಜ ಶೆಟ್ಟಿ, ಜಯಶ್ರೀ ಶೆಟ್ಟಿ, ಮಮತಾ ಭಂಡಾರಿ, ಶೋಭಾ ಶೆಟ್ಟಿ, ಅರುಣಾ ಶೆಟ್ಟಿ, ಉಷಾ ಶ್ರೀಧರ್ ಶೆಟ್ಟಿ, ಅನಿತಾ ಅಶೋಕ್ ಶೆಟ್ಟಿ, ಹರೀಶ್ ಶೆಟ್ಟಿ ಕಲ್ಯಾಣ್, ರವಿ ಶೆಟ್ಟಿ ಕಲ್ಯಾಣ್, ಸಿ. ಎ. ರಮೇಶ್ ಶೆಟ್ಟಿ, ಸಿ. ಎ. ಸುಕುಮಾರ್ ಶೆಟ್ಟಿ, ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪೂನಾ, ಭಾಸ್ಕರ್ ಶೆಟ್ಟಿ ಸಿಬಿಡಿ ಪನ್ವೇಲ್, ರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಾಪಾಡಿ, ರವೀಂದ್ರ ಶೆಟ್ಟಿ ಪಡುಬಿದ್ರಿ, ನಾಗೇಶ್ ಶೆಟ್ಟಿ ಐರೋಳಿ, ವಿಠ್ಠಲ್ ಆಳ್ವ, ಜಯ ಎ. ಶೆಟ್ಟಿ, ಧನಂಜಯ ಪಿ. ಶೆಟ್ಟಿ, ವನಿತಾ ನೋಂಡ, ಬಾಬಣ್ಣ ಶೆಟ್ಟಿ ಅನ್ನೇದಗುತ್ತು, ಸುಕೇಶ್ ಶೆಟ್ಟಿ ಅನ್ನೇದಗುತ್ತು, ಅಡ್ವೋಕೇಟ್ ಆರ್. ಜಿ. ಶೆಟ್ಟಿ, ಚಂದ್ರಶೇಖರ ಪಾಲೇತ್ತಾಡಿ, ವೈ. ಟಿ. ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಕ್ಕೂಟದ ಭವನ ಡಿಸೆಂಬರ್ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಿಯೇ ಸಿದ್ಧ: ಶಶಿಧರ್ ಶೆಟ್ಟಿ ಬರೋಡ
ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ಶಶಿಧರ್ ಶೆಟ್ಟಿ ಬರೋಡ ಮಾತನಾಡಿ, “ಯಾವುದೇ ವಿಷಯದಲ್ಲಿ ಸಂಕಲ್ಪದಿಂದ ಏನಾಗುತ್ತದೆ ಎನ್ನುವುದಕ್ಕೆ ಉದಾಹರಣೆ ಎಂದರೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಟ್ಟಡಕ್ಕಾಗಿ ಓಪನ್ ಏರ್ ಥಿಯೇಟರ್ ಮಾಡೋಣ ಎಂದು ಆನಂದ ಶೆಟ್ಟಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಅದಕ್ಕೆ ದೇವರ ಅನುಗ್ರಹವೇ ಬೇರೆಯಾಗಿತ್ತು. ಅವರ ಹೆಸರಿನಲ್ಲಿ ಒಂದು ಸಭಾಂಗಣ ಆಗಬೇಕು ಎನ್ನುವ ಕಲ್ಪನೆಗೆ ಹೊಸ ರೂಪ ಸಿಕ್ಕಿ ಬದಲಾಯಿತು. ಓಪನ್ ಏರ್ ಥಿಯೇಟರ್ ಆಗುವುದು ಇತ್ತು, ಆದರೆ ಅಷ್ಟಕ್ಕೇ ನಿಲ್ಲಲಿಲ್ಲ, ಭವ್ಯ ಭವನ ನಿರ್ಮಾಣದಲ್ಲಿ ಪೂರ್ತಿಗೊಳ್ಳಲಿದೆ. ನನಗೆ ಮತ್ತು ಅನೇಕರಿಗೆ ಒಕ್ಕೂಟ ಇದೆ ಎಂದು ಗೊತ್ತಾಗಿದ್ದು ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಾತ್ರ. ಅದಕ್ಕೆ ದೊಡ್ಡ ಆನೆಬಲ ಬಂದದ್ದು ಕನ್ಯಾನ ಸದಾಶಿವ ಶೆಟ್ಟಿ ಅವರಿಂದ. ಅದರಲ್ಲಿ ಎರಡನೇ ಮಾತಿಲ್ಲ. ಸದಾಶಿವ ಶೆಟ್ಟರು ದೊಡ್ಡ ಮಟ್ಟದಲ್ಲಿ ದಾನ ನೀಡಿದವರು. ಅವರು ಹೇಳಿದಂತೆ ಪ್ರತಿವರ್ಷ 5 ಲಕ್ಷ ರೂಪಾಯಿ ನೀಡುತ್ತಾರೆ. ಆ ಹಣವನ್ನು ಅವರು ಮುಂಚಿತವಾಗಿಯೇ ನೀಡಿದ್ದಾರೆ. 50 ಲಕ್ಷ ಕೊಡುವುದಕ್ಕೆ ಇನ್ನೂ ಸಮಯ ಇತ್ತು, ಆದರೆ ಮುಂಚಿತವಾಗಿಯೇ ಜಾಗ ಪಡೆಯಲು ಮತ್ತು ಕಟ್ಟಡದ ವ್ಯವಸ್ಥೆಗಾಗಿ 5.5 ಕೋಟಿ ರೂಪಾಯಿಯನ್ನು ಈಗಲೇ ಕೊಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ದೊಡ್ಡ ದಾನಿ ಎಂದರೆ ಸದಾಶಿವ ಶೆಟ್ಟಿ. ಹಾಗಾಗಿ ಅವರ ಹೆಸರಿನಲ್ಲಿ ಈ ಸಂಕೀರ್ಣ ಆಗುತ್ತಿರುವುದು ತುಂಬಾ ಸಂತೋಷದ ವಿಷಯ. ಅವರು ಬಹಳಷ್ಟು ಕೊಡುಗೆ ಮತ್ತು ದಾನಗಳನ್ನು ನೀಡುತ್ತಿದ್ದಾರೆ. ಅವರ ದಾನದ ವಿಷಯ ತೆಗೆದುಕೊಂಡರೆ ಅವರ ಹೆಸರಿನಲ್ಲಿ ಒಂದು ಹಾಲ್ ಮತ್ತು ಸಂಕೀರ್ಣ ಆಗುತ್ತಿರುವುದು ಒಕ್ಕೂಟಕ್ಕೆ ಅತ್ಯಂತ ಸಂತೋಷದ ಸಂಗತಿ. ದೇವರು ಅವರಿಗೆ ಆಯುಷ್ಯ ಮತ್ತು ಆರೋಗ್ಯ ನೀಡಲಿ. ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ನಮ್ಮ ಸಮಾಜದ ದೊಡ್ಡ ಶಕ್ತಿ. ಇಡೀ ನಮ್ಮ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಹೆಸರು ಎಂದರೆ ಡಾ. ಪ್ರಕಾಶ್ ಶೆಟ್ಟಿ ಅವರದ್ದು. ಅವರು ಕೂಡ ಒಕ್ಕೂಟದ ಯೋಜನೆಗೆ ಕೈಜೋಡಿಸಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲು ಎಲ್ಲರ ಸಹಕಾರ ನೀಡಬೇಕಾಗಿ ವಿನಂತಿ” ಎಂದರು.

ದಾನಿಗಳನ್ನು ಸದಾ ಸಮಾಜ ನೆನಪಿಸುವಂತೆ ಸಂಕೀರ್ಣದಲ್ಲಿ ಶಾಶ್ವತವಾಗಿ ಉಳಿಸುತ್ತೇವೆ: ಐಕಳ ಹರೀಶ್ ಶೆಟ್ಟಿ
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಇಲ್ಲಿ ಸೇರಿರುವವರೆಲ್ಲರೂ ಒಕ್ಕೂಟದ ಮೇಲೆ ಮತ್ತು ನನ್ನ ಮೇಲೆ ಪ್ರೀತಿ-ಗೌರವ ಇಟ್ಟು ಈ ಸಭೆಗೆ ಸೇರಿಕೊಂಡಿದ್ದೀರಿ. ಒಕ್ಕೂಟವು ಬಂಟ ಸಮಾಜದ ಆಸ್ತಿಯಾಗಿದೆ. ಒಕ್ಕೂಟಕ್ಕೆ ದಾನ ನೀಡಿರುವುದರಿಂದ ನನಗೆ ಯಾವುದೇ ತೊಂದರೆಗಳಾಗಿಲ್ಲ, ಸಮಸ್ಯೆಗಳೂ ಎದುರಾಗಿಲ್ಲ. ಅವರು ನೀಡಿರುವ ದಾನಗಳು ಮಹತ್ವದ್ದಾಗಿರಬೇಕು, ಅದಕ್ಕಾಗಿ ಸಂಕೀರ್ಣದಲ್ಲಿ ಅವರನ್ನು ಶಾಶ್ವತವಾಗಿ ನೆನಪಿಸುವಂತೆ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ನಮ್ಮ ಸಂಕೀರ್ಣದ ಯೋಚನೆ ಪೂರ್ಣಗೊಂಡ ಬಳಿಕ ಜವಾಬ್ದಾರಿಯುತ ನಾಯಕನಿಗೆ ಜವಾಬ್ದಾರಿಯನ್ನು ನೀಡುತ್ತೇನೆ. ನಾನು ಈಗ ಜವಾಬ್ದಾರಿಯಲ್ಲಿದ್ದೇನೆ, ಆದ್ದರಿಂದ ಯಾವುದೇ ರೀತಿಯ ಎದುರು ಮಾತುಗಳನ್ನಾಡದೆ ಕರ್ತವ್ಯದ ಸೇವೆಯಲ್ಲಿ ನಿರತನಾಗಿದ್ದೇನೆ.”
”40 ವರ್ಷಗಳ ಸುದೀರ್ಘ ಕಾಲದ ನನ್ನ ಸಮಾಜ ಸೇವೆಯಲ್ಲಿ ಬಹಳಷ್ಟು ಟೀಕೆಗಳನ್ನು ಎದುರಿಸಿದ್ದೇನೆ, ಅದಕ್ಕೆ ನಾನೆಂದು ದುಃಖಿತನಾಗಿಲ್ಲ. ಸಮಾಜಕ್ಕೆ ನಾನು ಎಂದಿಗೂ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನಿಂದ ನನ್ನ ಪರಿವಾರಕ್ಕೆ ಸಮಸ್ಯೆಗಳಾಗಿರಬಹುದು, ಆದರೆ ನನ್ನ ಬದುಕಿನಲ್ಲಿ ಯಾರಿಗೂ ತೊಂದರೆ ಕೊಟ್ಟಿಲ್ಲ. ನನ್ನನ್ನು ಪ್ರೀತಿಸುವವರು, ಗೌರವಿಸುವವರು ಬೇರೆಯದೇ ಆದ ಒಂದು ವರ್ಗವಿದ್ದಾರೆ, ಅವರು ಸದಾ ನನ್ನೊಂದಿಗೆ ಇರುತ್ತಾರೆ. ನಾನು ಈ ಸಮಾಜಕ್ಕೆ ಏನು ಮಾಡಿದ್ದೇನೆ, ಏನು ನೀಡಿದ್ದೇನೆ ಎಂದು ಅವರಿಗೆ ಗೊತ್ತಿದೆ. ಒಂದೇ ಗುರಿ; ಒಕ್ಕೂಟದ ಭವನ ನಿರ್ಮಾಣದ ಕಾರ್ಯ. ಅದಕ್ಕೆ ದಾನಿಗಳೆಲ್ಲರೂ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ. ಅವರೆಲ್ಲರ ಅಪೇಕ್ಷೆಯಂತೆ ಈ ಕಾರ್ಯವನ್ನು ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳಿಸಿ ಭವನವನ್ನು ಲೋಕಾರ್ಪಣೆ ಮಾಡುತ್ತೇವೆ. ಅಲ್ಲದೆ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಸೇವಾ ರೂಪದಲ್ಲಿ ಯಕ್ಷಗಾನವನ್ನು ಅಲ್ಲಿ ನಡೆಸುತ್ತೇವೆ” ಎಂದು ನುಡಿದರು.
ಮೂಲ್ಕಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಸಭಾಭವನ ಕೊನೆ ಹಂತದ ನಿರ್ಮಾಣಕ್ಕೆ ಮುಂಬೈ ದಾನಿಗಳ ಭರವಸೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) 10 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯನ್ನು ಡಿಸೆಂಬರ್ 31 ರ ಒಳಗೆ ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವುದಕ್ಕೆ ಇನ್ನು ಆರೂವರೆ ಕೋಟಿ ರೂಪಾಯಿ ಬಾಕಿ ಇದೆ. ಅದಕ್ಕೆ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ್ ಶೆಟ್ಟಿ, ಡಾ. ಕೆ. ಪ್ರಕಾಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್, ಕರ್ನಿರೆ ವಿಶ್ವನಾಥ್ ಶೆಟ್ಟಿ ಹಾಗೂ ಕೃಷ್ಣ ವೈ. ಶೆಟ್ಟಿ ಅವರು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಇವರೆಲ್ಲರ ಸಹಕಾರದಿಂದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಭವನವು ಲೋಕಾರ್ಪಣೆಗೊಳ್ಳಲಿದೆ.





