ಮಂಗಳೂರು: ಮುಂಬೈನ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯು ಬರುವ ಆಗಸ್ಟ್ 9ರಂದು 125ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ವಿವಿಧ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಹಾಗೂ ಈ ಐತಿಹಾಸಿಕ ಸಂದರ್ಭದ ಸವಿನೆನಪಿಗಾಗಿ ಮಹತ್ತರ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಈ ಎಲ್ಲಾ ಯೋಜನೆಗಳು ಯಶಸ್ವಿಯಾಗಲು ದೇವತಾ ಅನುಗ್ರಹ ಪ್ರಾಪ್ತಿಗಾಗಿ ಸಮಾಜದ ಪ್ರಮುಖ ಆರಾಧನಾ ಕ್ಷೇತ್ರಗಳಿಗೆ ಮಂಡಳಿಯ ಕಾರ್ಯಕರ್ತರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿದರು.
ಮಂಡಳಿಯ ಅಧ್ಯಕ್ಷರಾದ ಗಣೇಶ್ ಕೆ. ಕಾಂಚನ್ ಅವರ ನೇತೃತ್ವದಲ್ಲಿ ಆಗಮಿಸಿದ ನಿಯೋಗವು ಆಗಸ್ಟ್ 1ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವರ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾ. ಜಿ. ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಕ್ಷೇತ್ರ ಆಡಳಿತ ಸಮಿತಿಯ ಗಿರಿಧರ್ ಸುವರ್ಣ, ವಾಸುದೇವ್ ಕೋಟ್ಯಾನ್, ದಿನೇಶ್ ಎರ್ಮಾಳ್, ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಮೂಲ್ಕಿ, ಉಪಾಧ್ಯಕ್ಷೆ ದಯಾವತಿ ಸುವರ್ಣ, ಪಾರುಪತ್ಯಗಾರರಾದ ದೇವರಾಜ್ ಬಂಗೇರ, ಪುರುಷೋತ್ತಮ್ ಕರ್ಕೇರ, ಲಕ್ಷ್ಮಣ್ ಶ್ರೀಯಾನ್, ಕೋಶಾಧಿಕಾರಿ ದೇವರಾಜ್ ಕುಂದರ್, ಜೊತೆ ಕಾರ್ಯದರ್ಶಿಗಳಾದ ಪ್ರೀತಿ ಹರೀಶ್ ಶ್ರೀಯಾನ್ ಮತ್ತು ಪ್ರಶಾಂತ್ ತಿಂಗಳಾಯ, ‘ಮೊಗವೀರ’ ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ, ಪತ್ರಿಕೆಯ ಮ್ಯಾನೇಜರ್ ಪ್ರಮೋದ್ ಪುತ್ರನ್, ಮಂಡಳಿಯ ಹಿತೈಷಿ ಹಾಗೂ ಮೊಗವೀರ ಬ್ಯಾಂಕ್ನ ನಿರ್ದೇಶಕರಾದ ಮುಖೇಶ್ ಬಂಗೇರ, ಮಂಡಳಿಯ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಶಾಖೆಯ ಭರತ್ ಎರ್ಮಾಳ್ ಹಾಗೂ ದೊಂಬಿವಲಿ ಶಾಖೆಯ ಕೇಶವ್ ಬಂಗೇರ ಉಪಸ್ಥಿತರಿದ್ದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯರು ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಮಂಡಳಿಯ ಮತ್ತು ಸಮಾಜದ ಉನ್ನತಿಗೆ ದೇವಿಯ ಅನುಗ್ರಹ ಕೋರಿದರು. ಈ ವೇಳೆ ಮಂಡಳಿಯ ಪದಾಧಿಕಾರಿಗಳು ಮಹಾಲಕ್ಷ್ಮಿ ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.




