ತುಲುವೆರ ಕಲ, ಟ್ರಸ್ಟ್ (ರಿ) ಇದರ ಮುಂಬಯಿ ಘಟಕದ ( ಬೊಂಬೈ ಎಗ್ಗೆ) ಆಯೋಜನೆಯಲ್ಲಿ ತುಲುವೆರೆ ಕಲತೋಚ್ಚಯ ಕಾರ್ಯಕ್ರಮವು ಅಗಸ್ಟ್ 30, ಆದಿತ್ಯವಾರ ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಪನ್ನಗೊಳ್ಳಲಿದೆ. ಆ ಸಂದರ್ಭದಲ್ಲಿ ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು ಇವರ ಮಾಯದ ತುಡರ್ ಎಂಬ ತುಳು ಕವನ ಸಂಕಲನವು ಲೋಕಾರ್ಪಣೆಗೊಳ್ಳಲಿದೆ. ಈ ಕವನಸಂಕಲನವನ್ನು ಶಂಕರ್ ಶೆಟ್ಟಿ ಮಾಜಿ ಅಧ್ಯಕ್ಷರು, ಆದಿಶಕ್ತಿ ಕನ್ನಡ ಸಂಘ ಇವರು ತಮ್ಮ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಿದ್ದಾರೆ. ಈ ಕವನ ಸಂಕಲನದ ಪರಿಚಯವನ್ನು ಖ್ಯಾತ ಸಾಹಿತಿ, ನಿರೂಪಕರಾಗಿರುವ ಅಶೋಕ್ ಪಕ್ಕಳ ಮಾಡಲಿದ್ದಾರೆ. ಮುನ್ನುಡಿಯನ್ನು ತುಳು ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ ಹಾಗೂ ಹಿರಿಯ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣರವರು ದಾಖಲಿಸಿದರೆ ಬೆನ್ನುಡಿ ಖ್ಯಾತ ಸಾಹಿತಿ ಡಾ.ಕರುಣಾಕರ್ ಶೆಟ್ಟಿಯವರು ಬರೆದಿದ್ದಾರೆ

ಶೋಭಾ ಎಸ್ ಶೆಟ್ಟಿ ಯವರು ಮೂಲತಃ ಮಿಜಾರು ಶಿವಶೆಟ್ಟಿ ಮತ್ತು ಬಜ್ಪೆ ನೆಲ್ಲಿದಡಿಗುತ್ತು ಶಾಂಭವಿ ಶೆಟ್ಟಿ ದಂಪತಿಯ ಸುಪುತ್ರಿ.
ಶೋಭಾ ಶೆಟ್ಟಿಯವರಿಗೆ ಎಳವೆಯಲ್ಲಿಯೇ ಕಥೆ ,ಕವನ ,ಲೇಖನಗಳನ್ನು ಬರೆಯುವ ಹವ್ಯಾಸ. ಇವರ ಆನೇಕ ಬರಹಗಳು ದಿನ ಪತ್ರಿಕೆ , ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಇವರು ಬರೆದಿರುವ ಆನೇಕ ಕಥೆ ,ಕವನ ,ಲೇಖನಗಳಿಗೆ ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ತುಳುವಿನಲ್ಲೂ ಬರಹಗಳನ್ನು ಬರೆಯುವ ಆಸಕ್ತಿಯನ್ನು ಹೊಂದಿರುವ ಇವರು ಆನೇಕ ಕಡೆ ಕವಿ ಗೋಷ್ಟಿ, ವಿಚಾರ ಗೋಷ್ಟಿ ಯಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಬರಹಗಳನ್ನು ಮಂಡಿಸಿರುತ್ತಾರೆ. ಇವರು ಬರೆದು ನಿರ್ದೇಶಿಸಿದ ‘ಕಲಿಕೆಯ ಮಹತ್ವ ಎಂಬ ಪ್ರಹಸನ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು.

ಇವರು ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ಆನೇಕ ಪಾತ್ರಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ . ಅಷ್ಟಭುಜೆ ದೇವಿಯಾಗಿ ಮಾಡಿದ ಇವರ ಪಾತ್ರ ಜನಮನ್ನಣೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ರಂಗಭೂಮಿಯಲ್ಲೂ ಆನೇಕ ನಾಟಕದಲ್ಲಿ ಅಭಿನಯಿಸಿದ ಹಿರಿಮೆ ಇವರದ್ದು .ಇವರು ರಚಿಸಿ ಅಭಿನಯಿಸಿರುವ "ನಮ್ಮವರು ಯಾರು" ನಾಟಕಕ್ಕೆ ಪ್ರಶಸ್ತಿ ಲಭಿಸಿ ಜನಮೆಚ್ಚುಗೆ ಗಳಿಸಿದೆ. ಇವರು ನಿರೂಪಕಿ, ಸಂಘಟಕಿ ಹಾಗೂ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.
ಪತಿ ಶಶಿಧರ್ ಶೆಟ್ಟಿ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಸಮೀಕ್ಷಾ ಮತ್ತು ಶ್ರಾವ್ಯ ಇವರೊಂದಿಗಿನ ಸಂತೃಪ್ತ ಕುಟುಂಬ ಇವರದ್ದು. ಹಿರಿಯ ಮಗಳು ಸಮೀಕ್ಷಾ ಇಂಜಿನಿಯರ್ ಪದವೀಧರೆಯಾಗಿದ್ದು ಹುದ್ದೆಯನ್ನು ಮಾಡುತ್ತಿರುವುದರ ಜೊತೆಗೆ ಪವರ್ ಲಿಫ್ಟಿಂಗ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ. ಕಿರಿಯ ಮಗಳು ಶ್ರಾವ್ಯ ಬಿಕಾಂ ಪದವೀಧರೆ ಜೊತೆಗೆ CMA ವೃತ್ತಿಪರ ಕೋರ್ಸ್ ಮಾಡುತ್ತಿದ್ದಾಳೆ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತದಲ್ಲಿ ಭಾಗವಹಿಸುವುದರ ಜೊತೆಗೆ ಭಾಷಣ, ಶ್ಲೋಕ, ನಾಟಕ, ಭಜನೆ, ಏಕಪಾತ್ರಾಭಿನಯ, ನೃತ್ಯಗಳಲ್ಲಿ ಸ್ಪರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರಕ್ಕೆ ಭಾಜನಳಾಗಿರುತ್ತಾಳೆ. ಇವರು ಪ್ರಸ್ತುತ ಚಿಣ್ಣರಬಿಂಬ ಥಾಣೆ ಶಿಬಿರದ ಕನ್ನಡ ಶಿಕ್ಷಕಿಯಾಗಿ ಹೊರನಾಡಿನಲ್ಲಿ ಚಿಣ್ಣರ ಮುಖೇನ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ತುಲುವೆರೆ ಕಲ ಬೊಂಬೈ ಎಗ್ಗೆ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ, ಅಮೃತ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯೆಯಾಗಿ, ಥಾಣೆ ನವೋದಯ ಕನ್ನಡ ಸೇವಾ ಸಂಘದಲ್ಲಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸದಸ್ಯೆಯಾಗಿ ಮತ್ತು ಆನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
.




