
ಚಿತ್ರ ವರದಿ: ಉಮೇಶ್ ಕೆ ಅಂಚನ್
ಮುಂಬಯಿ, ಅ.28: ವಿದ್ಯಾದಾಯಿನಿ ಸಭಾ (ರಿ), ಫೋರ್ಟ್ ಮುಂಬಯಿ ಇದರ 105ನೇ ವಾರ್ಷಿಕ ಮಹಾಸಭೆಯು ಅ.26ರಂದು ಫೋರ್ಟ್ 31 ರಘುನಾಥ್ ದಾದಾಜಿ ಸ್ಟ್ರೀಟ್ ನಲ್ಲಿರುವ ವಿದ್ಯಾದಾಯಿನಿ ಭವನದ ಕಚೇರಿಯಲ್ಲಿ ಸಭಾದ ಅಧ್ಯಕ್ಷರಾರ ಪುರುಷೋತ್ತಮ ಎಸ್.ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜತೆ ಕಾರ್ಯದರ್ಶಿ ಶರತ್ ಪೂಜಾರಿ ವಾರ್ಷಿಕ ವರದಿಯನ್ನು ವಾಚಿಸಿ ಕೋಶಾಧಿಕಾರಿ ಗೋಪಾಲ್ ಪೂಜಾರಿಯವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಹಾಗೂ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮುಂದಿನ ವರ್ಷಕ್ಕೆ ಮಾಹಾಂಡಿಕ್ ಎಂಡ್ ಕಂಪನಿಯವರನ್ನು ಲೆಕ್ಕಪರಿಶೋಧಕರನ್ನಾಗಿ ಪುನರ್ ನೇಮಿಸಲಾಯಿತು.
ಸಭಾ ಹಾಗೂ ಸಭಾದ ಸಂಚಾಲಕತ್ವದಲ್ಲಿರುವ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಶತಮಾನೋತ್ಸವ ಆಚರಣೆಯ ಕುರಿತು ಶ್ರೀನಿವಾಸ್ ಪೂಜಾರಿ, ಜಿ.ಸಿ.ಸಾಲ್ಯಾನ್, ಜೆ.ಜೆ.ಕೋಟ್ಯಾನ್, ಆರ್.ಕೆ.ಕೋಟ್ಯಾನ್, ವಸಂತಿ ಕೋಟ್ಯಾನ್, ಜೆ.ಎಮ್.ಕೋಟ್ಯಾನ್, ಉಮೇಶ್ ಕೆ ಅಂಚನ್, ಅಶೋಕ್ ಪೂಜಾರಿ , ಸುರೇಶ್ ಪೂಜಾರಿ, ಗಣೇಶ್ ಪೂಜಾರಿ, ರಾಮಣ್ಣ ಪೂಜಾರಿ ಹಾಗೂ ವಸಂತ್ ಪೂಜಾರಿಯವರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಮಾತನಾಡಿ 105 ವರ್ಷ ಪೂರೈಸಿರುವ ನಮ್ಮೀ ಸಂಸ್ಥೆಯ ಶತಮಾನೋತ್ಸವ ಸಮಾರಂಭವನ್ನು ನಾವು ವಿಜ್ರಂಭಣೆಯಿಂದ ಆಚರಿಸಿದ್ದೇವೆ. ಪ್ರಸ್ತುತ ವರ್ಷದಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಶತಮಾನೋತ್ಸವ ಆಚರಣೆಗೆ ಅಣಿಯಾಗಿದೆ. ಈ ಸಮಾರಂಭವನ್ನು ನೂತನ ವರ್ಷದ ಮೊದಲ ತಿಂಗಳಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ನಾಮಾಂಕಿತ ಹುದ್ದೆ ಯಾ ಉದ್ಯೋಗದಲ್ಲಿದ್ದಾರೆ. ಅವರನ್ನೆಲ್ಲಾ ಈ ಸಮಾರಂಭದಲ್ಲಿ ಒಗ್ಗೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಇದಕ್ಕೆ ಸರ್ವ ಸದಸ್ಯರು ಸಹಾಯ ಸಹಕಾರ ನೀಡಬೇಕು ಎಂದರು.
ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಪ್ರಸ್ತುತ ವರ್ಷದಲ್ಲಿ ಭಗವಂತನ ಪಾದ ಸೇರಿದ್ದ ಸಭಾದ ಸದಸ್ಯರನ್ನು ಮೌನ ಪ್ರಾರ್ಥನೆಯೊಂದಿಗೆ ಸ್ಮರಿಸಲಾಯಿತು. ಜತೆ ಕಾರ್ಯದರ್ಶಿ ಶರತ್ ಪೂಜಾರಿಯವರು ಆಗಮಿಸಿದ್ದ ಸರ್ವ ಸದಸ್ಯರನ್ನು ವಂದಿಸುವುದರೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.




