ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ ಆಚರಣೆಯ ಸರಣಿ ಕಾರ್ಯಕ್ರಮಗಳ (ಸರಣಿ–5) ಅಂಗವಾಗಿ, ಮಂದಿರದ ಮಹಿಳಾ ವಿಭಾಗದ ವತಿಯಿಂದ ತುಳು–ಕನ್ನಡಿಗರ ಮಕ್ಕಳಿಗಾಗಿ ‘ರೇಖಾಚಿತ್ರ ಬಿಡಿಸಿ ಬಣ್ಣ ಹಚ್ಚುವ ಸ್ಪರ್ಧೆ – 2026’ ಅನ್ನು ಆಯೋಜಿಸಲಾಗಿದೆ.
ಮಕ್ಕಳಲ್ಲಿ ಸೃಜನಶೀಲತೆ, ಕಲ್ಪನಾಶಕ್ತಿ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಏರ್ಪಡಿಸಲಾಗಿರುವ ಈ ಸ್ಪರ್ಧೆಯು ಸೆಪ್ಟೆಂಬರ್ 20ರ ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಡೊಂಬಿವಲಿ ಪಶ್ಚಿಮದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ಸಭಾಂಗಣದಲ್ಲಿ (ವೇದ್ ಬ್ರಹ್ಮ ಬಿಲ್ಡಿಂಗ್/ಬಂಗಲೆ, 2ನೇ ಮಹಡಿ, ಲಿಜ್ಜತ್ ಪಾಪಡ್ ಮೇಲೆ, ಎಸ್ಬಿಐ ಬ್ಯಾಂಕ್ ಹತ್ತಿರ) ಜರುಗಲಿದೆ.
ಸ್ಪರ್ಧೆಯನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಸಲಾಗುವುದು:
- ವಿಭಾಗ 1: 1ರಿಂದ 2ನೇ ತರಗತಿ
- ವಿಭಾಗ 2: 3ರಿಂದ 4ನೇ ತರಗತಿ
- ವಿಭಾಗ 3: 5ರಿಂದ 6ನೇ ತರಗತಿ
- ವಿಭಾಗ 4: 7ರಿಂದ 10ನೇ ತರಗತಿ
ನಿಯಮಗಳು ಮತ್ತು ಮಾರ್ಗಸೂಚಿಗಳು: ಸ್ಪರ್ಧೆಯು ‘ಶ್ರೀ ಮಹಾವಿಷ್ಣು ದೇವರು’ ಅಥವಾ ‘ದಶಾವತಾರ’ ವಿಷಯವನ್ನು ಆಧರಿಸಿರಲಿದೆ. ಸಂಘಟಕರು ಸ್ಥಳದಲ್ಲೇ ನೀಡುವ ವಿಷಯದಂತೆ ರೇಖಾಚಿತ್ರ ಬಿಡಿಸಿ ಬಣ್ಣ ತುಂಬಬೇಕು. ಡ್ರಾಯಿಂಗ್ ಶೀಟ್ ಅನ್ನು ಆಯೋಜಕರೇ ಒದಗಿಸಲಿದ್ದು, ಪೆನ್ಸಿಲ್, ಎರೇಸರ್, ಶಾರ್ಪನರ್, ಕ್ರಯೋನ್ಸ್, ಆಯಿಲ್ ಪಾಸ್ಟೆಲ್ಸ್, ಸ್ಕೆಚ್ ಪೆನ್, ಬ್ರಷ್ ಪೆನ್, ಜಲವರ್ಣ (ವಾಟರ್ ಕಲರ್) ಹಾಗೂ ಡ್ರಾಯಿಂಗ್ ಬೋರ್ಡ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.
ಸ್ಪರ್ಧೆಯ ಅವಧಿ 1ರಿಂದ 4ನೇ ತರಗತಿಯ ಮಕ್ಕಳಿಗೆ 60 ನಿಮಿಷ ಹಾಗೂ 5ರಿಂದ 10ನೇ ತರಗತಿಯ ಮಕ್ಕಳಿಗೆ 2 ಗಂಟೆಗಳಾಗಿರುತ್ತವೆ. ಪೂರ್ವ ಸಿದ್ಧಪಡಿಸಿದ ಚಿತ್ರಗಳು, ಟ್ರೇಸಿಂಗ್ ಪೇಪರ್, ಸ್ಟೆನ್ಸಿಲ್ಗಳ ಬಳಕೆ ಹಾಗೂ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಪರ್ಧೆಯ ವೇಳೆ ಪೋಷಕರು ಅಥವಾ ಶಿಕ್ಷಕರು ಮಕ್ಕಳಿಗೆ ಸಹಾಯ ಮಾಡುವಂತಿಲ್ಲ.
ವಿಷಯಕ್ಕೆ ಹೊಂದಾಣಿಕೆ, ಸ್ವಂತಿಕೆ, ಸೃಜನಶೀಲತೆ, ಬಣ್ಣಗಳ ಸಂಯೋಜನೆ ಮತ್ತು ಸ್ವಚ್ಛತೆ–ಅಚ್ಚುಕಟ್ಟುತನದ ಆಧಾರದ ಮೇಲೆ ತೀರ್ಪುಗಾರರು ಮೌಲ್ಯಮಾಪನ ಮಾಡಲಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಸ್ಪರ್ಧಿಗಳು ಕಾರ್ಯಕ್ರಮ ಆರಂಭಕ್ಕೆ ಕನಿಷ್ಠ 15ರಿಂದ 30 ನಿಮಿಷ ಮುಂಚಿತವಾಗಿ ಹಾಜರಿರಬೇಕು.
ನೋಂದಣಿಗೆ ಸೆಪ್ಟೆಂಬರ್ 10 ಕೊನೆಯ ದಿನ. ಹೆಚ್ಚಿನ ವಿವರ ಹಾಗೂ ಹೆಸರು ನೋಂದಾಯಿಸಲು ಸವಿತಾ ಸಾಲಿಯನ್ (9892850309) ಅಥವಾ ಸಪ್ನಾ ಮರಕಲ್ (9167122161) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.




