
ಮುಂಬಯಿಯ ಹಿರಿಯ ಕನ್ನಡ ಸಂಸ್ಥೆಗಳಲ್ಲಿ ಒಂದಾಗಿರುವ ಮುಂಬಯಿ ಕನ್ನಡ ಸಂಘದ 85ನೇ ವಾರ್ಷಿಕ ಮಹಾಸಭೆಯು ಶನಿವಾರ, ಆಗಸ್ಟ್ 29 ರಂದು ಸಂಜೆ 5:00 ಗಂಟೆಗೆ ದಾದರ್ (ಪೂರ್ವ) ಹಿಂದೂ ಕಾಲನಿಯಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಗುರುರಾಜ ಎಸ್. ನಾಯಕ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.
ಎಸ್. ಕೆ. ಪದ್ಮನಾಭ ಅವರಿಂದ ಪ್ರಾರ್ಥನೆ ಸಲ್ಲಿಕೆಯಾದ ಬಳಿಕ, ಸಂಘದ ಘನ ಪೋಷಕರಾದ ಎನ್. ಪಿ. ಸುವರ್ಣ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಮಹಾಸಭೆಗೆ ಚಾಲನೆ ನೀಡಿದರು. ಆರಂಭದಲ್ಲಿ ಗತ ವರ್ಷದ ಅವಧಿಯಲ್ಲಿ ಅಗಲಿದ ಸಂಘದ ಸದಸ್ಯರು ಹಾಗೂ ಅವರ ಕುಟುಂಬಸ್ಥರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಗೌರವ ಜೊತೆ ಕಾರ್ಯದರ್ಶಿ ರಾಮಚಂದ್ರ ಭಟ್ ಅವರು ಕಳೆದ ವರ್ಷದ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಮಂಡಿಸಿದರು. ತದ ನಂತರ ಗತ ವರ್ಷದ ಲೆಕ್ಕಪತ್ರಗಳನ್ನು ಸಭೆಯ ಮುಂದಿರಿಸಲಾಗಿದ್ದು, ಸದಸ್ಯರು ಕೇಳಿದ ಪ್ರಶ್ನೆಗಳಿಗೆ ತೃಪ್ತಿಕರವಾಗಿ ಉತ್ತರಿಸಿದ ಬಳಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸರ್ವಾನುಮತದಿಂದ ಮಂಜೂರು ಮಾಡಲಾಯಿತು. 2026-2027ರ ಸಾಲಿಗೆ ಎಮ್. ಎಮ್. ಕಿಸ್ತಿ & ಕಂಪೆನಿ ಇವರನ್ನು ಲೆಕ್ಕ ಪರಿಶೋಧಕರನ್ನಾಗಿ (Auditors) ನೇಮಿಸಲಾಯಿತು.

ಮಾಟುಂಗಾ (ಪೂರ್ವ) ಭಾವು ದಾಜಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಕಛೇರಿಗಾಗಿ ಧನ ಸಂಗ್ರಹಿಸುವ ಕುರಿತಾಗಿ ನಡೆದ ಚರ್ಚೆಯಲ್ಲಿ ಎನ್. ಪಿ. ಸುವರ್ಣ, ಪ್ರಭಾ ಸುವರ್ಣ, ನಾಗೇಶ್ ಕುಂದರ್, ಮಂಜು ದೇವಾಡಿಗ, ನೇಮಿರಾಜ್ ಶೆಟ್ಟಿ, ವಿಶ್ವನಾಥ ದೊಡ್ಮನೆ, ಸುರೇಖಾ ದೇವಾಡಿಗ, ನಾರಾಯಣ ರಾವ್, ನರ್ಮದಾ ಕಿಣಿ, ಸಂಧ್ಯಾ ಪ್ರಭು ಮುಂತಾದವರು ಭಾಗವಹಿಸಿದ್ದು, ಈ ದಿಸೆಯಲ್ಲಿ ಇನ್ನಷ್ಟು ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ನಿರ್ಧರಿಸಲಾಯಿತು.
ಗುರುರಾಜ ಎಸ್. ನಾಯಕ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಂಘದ ಕಾರ್ಯಾಲಯವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಅನೇಕ ಹೊಸ ಕಾರ್ಯಕ್ರಮಗಳನ್ನು ನಡೆಸಲಾಗುವುದರಿಂದ ಇದಕ್ಕೆ ಸದಸ್ಯರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಸಂಘದ ಕಟ್ಟಡ ನಿಧಿಗಾಗಿ ಎನ್. ಪಿ. ಸುವರ್ಣ – ಪ್ರಭಾ ಸುವರ್ಣ ದಂಪತಿಯು ನೀಡಿದ ₹11,111/- ದೇಣಿಗೆಯನ್ನು ಸ್ವೀಕರಿಸಲಾಯಿತು. ಅಲ್ಲದೆ ಸಂಘಕ್ಕೆ ಹೊಸ ಸದಸ್ಯರಾಗಿ ಸೇರಿದ ಪೃಥ್ವಿರಾಜ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ಅವರು ವಂದನಾರ್ಪಣೆ ಮಾಡಿದರು. ಲಘು ಉಪಾಹಾರದೊಂದಿಗೆ ಸಭೆಯು ಮುಕ್ತಾಯಗೊಂಡಿತು.




