
ನವಿ ಮುಂಬೈ: ದೇವಾಡಿಗ ಸಂಘ ಮುಂಬೈ ಇದರ ಶ್ರೀ ರಾಮ ಭಜನಾ ಮಂಡಳಿಯ ವತಿಯಿಂದ 14ನೇ ವರ್ಷದ ಶ್ರೀ ರಾಮನವಮಿ ಮಹೋತ್ಸವವು ಮಾರ್ಚ್ 26, 2026ರಂದು ನೆರೂಲ್ ಪಶ್ಚಿಮದ ಸೆಕ್ಟರ್-12ರಲ್ಲಿರುವ ದೇವಾಡಿಗ ಭವನದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್. ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಹಾಗೂ ಮಂಡಳಿಯ ಸಂಯೋಜಕ, ನ್ಯಾಯವಾದಿ ಪ್ರಭಾಕರ್ ದೇವಾಡಿಗ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.




ರಾಮನವಮಿ ಅಂಗವಾಗಿ ವಿಶೇಷವಾಗಿ ಅಲಂಕೃತಗೊಂಡಿದ್ದ ಶ್ರೀ ರಾಮ ಮಂದಿರದಲ್ಲಿ ಮುಂಜಾನೆ 7.30ಕ್ಕೆ ಶ್ರೀ ರಾಮ ದೇವರಿಗೆ ಪೂಜೆ ಸಲ್ಲಿಸಿ, ವಿಷ್ಣು ಸಹಸ್ರನಾಮ ವಾಚನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ 8 ಗಂಟೆಗೆ ಅರ್ಚಕ ಶ್ರೀ ಶ್ರೀನಿವಾಸ್ ಕರ್ಮರನ್, ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ನ್ಯಾಯವಾದಿ ಪ್ರಭಾಕರ್ ದೇವಾಡಿಗ, ಶಂಕರ್ ದೇವಾಡಿಗ, ಆನಂದ್ ಸೇರಿಗಾರ, ಚಂದ್ರಶೇಖರ ದೇವಾಡಿಗ, ದಯಾನಂದ್ ದೇವಾಡಿಗ, ಸುರೇಶ್ ದೇವಾಡಿಗ ಬಾರಕೂರು ಹಾಗೂ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆಯನ್ನೊಳಗೊಂಡ ತಂಡವು ವಿಠಲನ ನಂದಾದೀಪ ಬೆಳಗಿಸಿ ಮಹೋತ್ಸವವನ್ನು ಉದ್ಘಾಟಿಸಿದರು.








ಮನಸೂರೆಗೊಂಡ ಭಜನಾ ಸಂಕೀರ್ತನೆ
ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳು ಹಾಗೂ ವಿವಿಧ ಮಂಡಳಿಗಳಿಂದ ಸತತವಾಗಿ ಭಜನೆ ಮತ್ತು ಕುಣಿತ ಭಜನೆ ನಡೆದವು. ನವಿ ಮುಂಬೈ ಪ್ರಾದೇಶಿಕ ಸಮಿತಿಯಿಂದ ಆರಂಭವಾದ ಭಜನಾ ಸರಣಿಯಲ್ಲಿ ಚೆಂಬೂರು, ಸಿಟಿ ವಲಯ, ಭಾಂಡುಪ್, ಅಸಲ್ಪಾ, ಥಾಣೆ, ಡೊಂಬಿವಲಿ ವಲಯಗಳು ಭಾಗವಹಿಸಿದ್ದವು.
ಇವುಗಳ ಜೊತೆಗೆ ನೆರೂಲ್ನ ಶ್ರೀ ಶನೈಶ್ಚರ ಭಜನಾ ಮಂಡಳಿ, ಸಾನ್ಪಾಡದ ಶ್ರೀ ಜೈ ಅಂಬೇ ಚಾರಿಟೇಬಲ್ ಟ್ರಸ್ಟ್, ಖಾಮೋಟೆಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಐರೋಲಿಯ ಶ್ರೀ ಅಯ್ಯಪ್ಪ ಸೇವಾ ಸಮಿತಿ, ಸಾಯನ್ನ ಗೋಕುಲ ಭಜನಾ ಮಂಡಳಿ, ಸಂಘದ ಬೋರಿವಲಿ ಮತ್ತು ಮೀರಾ ರೋಡ್ ವಲಯಗಳು ಹಾಗೂ ಚೆಂಬೂರಿನ ಶ್ರೀ ಉದ್ಭವ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸೇರಿದಂತೆ ಒಟ್ಟು 15 ತಂಡಗಳು ಸಂಕೀರ್ತನೆ ನಡೆಸಿಕೊಟ್ಟವು. ವಿಶೇಷವಾಗಿ ಚೆಂಬೂರಿನ ಶ್ರೀ ಉದ್ಭವ ದುರ್ಗಾಪರಮೇಶ್ವರಿ ತಂಡದ ಕುಣಿತ ಭಜನೆಯು ನೆರೆದಿದ್ದ ಭಕ್ತರ ಮನ ಗೆದ್ದಿತು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಧರ್ಮಪಾಲ ಯು. ದೇವಾಡಿಗ, ಶ್ರೀ ಹಿರಿಯಡ್ಕ ಮೋಹನ್ ದಾಸ್, ಉಪಾಧ್ಯಕ್ಷರಾದ ಶ್ರೀ ನರೇಶ್ ದೇವಾಡಿಗ ದಂಪತಿ, ಶ್ರೀ ವಿಶ್ವನಾಥ್ ಬಿ. ದೇವಾಡಿಗ ದಂಪತಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಎ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಸುಚಿತಾ ಶ್ರೇಯಾನ್, ಕೋಶಾಧಿಕಾರಿಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀ ಜಯ ಎಲ್. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್, ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ವಿಶಾಲ್ ದೇವಾಡಿಗ ಉಪಸ್ಥಿತರಿದ್ದರು.

ಸಮಾಜ ಸೇವಕ ಶ್ರೀ ಹರೀಶ್ ಪೂಜಾರಿ, ಉದ್ಯಮಿ ಶ್ರೀ ನಾಗರಾಜ್ ಪಡುಕೋಣೆ, ಹರಿ ಓಂ ಕೆಟರರ್ಸ್ ಮಾಲೀಕ ಶ್ರೀ ತ್ರಿವೇದಿ ಮತ್ತಿತರ ಗಣ್ಯರು ದರ್ಶನ ಪಡೆದರು. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ CA ಶ್ರೀ ಜಗದೀಶ್ ದೇವಾಡಿಗ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಗಣೇಶ್ ಕೆ. ದೇವಾಡಿಗ, ಸಮಿತಿ ಸದಸ್ಯರಾದ ಶ್ರೀ ಪ್ರಭಾಕರ್ ಎಸ್. ದೇವಾಡಿಗ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ, ಶ್ರೀ ಜನಾರ್ದನ್ ಎಸ್. ದೇವಾಡಿಗ, ಶ್ರೀಮತಿ ಜಯಂತಿ ಎಂ. ದೇವಾಡಿಗ, ಶ್ರೀ ರಾಮಪ್ಪ ದೇವಾಡಿಗ, ಶ್ರೀಮತಿ ಮಾಲತಿ ಜೆ. ಮೊಯಿಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿ ಭಜನಾ ತಂಡವನ್ನು ಮಂದಿರದ ದ್ವಾರದಲ್ಲಿ ತಿಲಕವಿಟ್ಟು, ಮಂಗಳಾರತಿ ಬೆಳಗಿ, ಚಂಡೆ-ತಾಳಗಳೊಂದಿಗೆ ಬರಮಾಡಿಕೊಳ್ಳುವ ಸಂಪ್ರದಾಯ ಗಮನ ಸೆಳೆಯಿತು. ಅರ್ಚಕ ಶ್ರೀ ಶ್ರೀನಿವಾಸ್ ಕರ್ಮರನ್, ಶ್ರೀ ಆನಂದ್ ಸೇರಿಗಾರ, ಶ್ರೀ ಶಂಕರ್ ದೇವಾಡಿಗ, ಶ್ರೀ ಚಂದ್ರಶೇಖರ ದೇವಾಡಿಗ, ಶ್ರೀ ಸುರೇಶ್ ದೇವಾಡಿಗ ಬಾರಕೂರು, ಶ್ರೀ ದಯಾನಂದ್ ದೇವಾಡಿಗ, ಶ್ರೀ ನಾಗರಾಜ್ ದೇವಾಡಿಗ ಹಾಗೂ ನವಿ ಮುಂಬೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಪಿ. ದೇವಾಡಿಗ ಮತ್ತು ತಂಡದವರು ವ್ಯವಸ್ಥೆಗಳನ್ನು ಸುಗಮಗೊಳಿಸಿದರು.
ಸಂಜೆ 8 ಗಂಟೆಗೆ ದೀಪೋತ್ಸವದೊಂದಿಗೆ ಮಹಾ ಮಂಗಳಾರತಿ ನಡೆದು ಮಹೋತ್ಸವ ಸಂಪನ್ನಗೊಂಡಿತು. ಭಕ್ತಾದಿಗಳಿಗೆ ದಿನವಿಡೀ ತೀರ್ಥಪ್ರಸಾದ ಹಾಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಸಂಯೋಜಕ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಅವರು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.




