ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ದೇವಾಡಿಗ ಸಂಘ (ರಿ.) ಮುಂಬಯಿ ಜಂಟಿ ಆಶ್ರಯದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮವು ಎ. 4ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯ ಕಲಿನಾ ಕ್ಯಾಂಪಸ್ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಮತ್ತು ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 2 ರಿಂದ ಸುರೇಖಾ ದೇವಾಡಿಗ ಅವರ ದೇವಾಡಿಗ ಸಂಘ (ರಿ.) ಮುಂಬಯಿ ಪ್ರಕಾಶನದ ಗೌರವ ಗ್ರಂಥ ‘ಧೀಮಂತ ಧರ್ಮಪಾಲ’ ಬಿಡುಗಡೆಯಾಗಲಿದೆ. ಗೌರವ ಗ್ರಂಥವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಗೌರವ ಗ್ರಂಥದ ಕುರಿತು ಕಳ್ಳಿಗೆ ದಯಾ ಸಾಗರ ಚೌಟ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಎಸ್. ಶೆಟ್ಟಿಯವರು ಸಂಯೋಜಿಸಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.
ಸುರೇಖಾ ದೇವಾಡಿಗ : ಸುರೇಖಾ ದೇವಾಡಿಗ ಅವರು ಮೂಲತಃ ಮಂಗಳೂರಿನ ಕೊಂಚಾಡಿ ದೆರೆಬೈಲ್ನವರು. ಇವರು ಮುಂಬಯಿ ಪರಿಸರದಲ್ಲಿ ನೆಲೆಸಿರುವರು. ಸುರೇಖಾರವರು ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್ ಪದವಿಯನ್ನು ಪಡೆದಿದ್ದು ‘ದೇವಾಡಿಗ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಇವರ ಎಂ. ಫಿಲ್ ಸಂಪ್ರಬಂಧವು ಕೃತಿಯ ರೂಪದಲ್ಲಿ ಅಭಜಿತ್ ಪ್ರಕಾಶನದ ಮೂಲಕ ಹೊರಬಂದಿದೆ. ಅವರ ಸಂಪಾದಿತ ಕೃತಿ ‘ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್’ ಕೂಡ ಅಭಜಿತ್ ಪ್ರಕಾಶನದ ಮೂಲಕ ಬೆಳಕು ಕಂಡಿದೆ. ಮಂಗಳೂರು ಬೆಸೆಂಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಈಕೆ ಯಕ್ಷಗಾನ, ನಾಟಕ, ಕ್ರೀಡೆಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡವರು. ‘ದೇವಾಡಿಗ ಕ್ರೀಡಾ ಸಾಧಕಿ’, ‘ಕಲಾಜಗತ್ತಿನ ತೌಳವ ಸಿರಿ ಪ್ರಶಸ್ತಿ’, ‘ದೇವಾಡಿಗ ಮಹಿಳಾ ಸಾಧಕಿ’, ‘ದೇವಾಡಿಗ ಶ್ರೀ ಭ್ರಾಮರಿ ವನಿತಾ ಪ್ರಶಸ್ತಿ’ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಉತ್ತಮ ಸಂಘಟಕಿಯಾಗಿಯೂ ಇವರು ದೇವಾಡಿಗ ಸಂಘದ ಸಕ್ರಿಯ ಸದಸ್ಯೆಯಾಗಿ ಸದ್ಯ ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರು ಬರೆದ ‘ಧೀಮಂತ ಧರ್ಮಪಾಲ’ ಗೌರವ ಗ್ರಂಥವು ಬೆಳಕು ಕಾಣುತ್ತಿರುವುದು ಅಭಿಮಾನದ ವಿಷಯ. ಇವರು ಸದ್ಯ ‘ಮುಂಬಯಿ ಕನ್ನಡಿಗರ ಸಾಂಘಿಕ ಚಟುವಟಿಕೆ’ ಎಂಬ ವಿಷಯದಲ್ಲಿ ಪಿಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.





