
ಕಲ್ಯಾಣ (ಪಶ್ಚಿಮ): ಇಲ್ಲಿನ ಕರ್ನಾಟಕ ಸಂಘವು ಕಳೆದ ಹಲವಾರು ವರ್ಷಗಳಿಂದ ಶ್ರೀ ರಾಮ ನವಮಿಯನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸಿಕೊಂಡು ಬರುತ್ತಿದೆ. ಕಳೆದ ವರ್ಷ ಸಂಘದ ಕಾರ್ಯಾಲಯದಲ್ಲಿ ಶ್ರೀ ರಾಮಕೃಷ್ಣ ಆಚಾರ್ಯರ ಪ್ರವಚನದೊಂದಿಗೆ ರಾಮ ನವಮಿ ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರತಿ ಶನಿವಾರ ಸಂಜೆ ಸಂಘದ ಕಾರ್ಯಾಲಯದಲ್ಲಿ ಆಚಾರ್ಯರಿಂದ ‘ಶ್ರೀ ರಾಮಾಯಣ’ ಪ್ರವಚನ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಈ ಪ್ರವಚನ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದ್ದು, ಈ ಸಲದ ರಾಮ ನವಮಿ ಪ್ರಯುಕ್ತ ಮಾರ್ಚ್ 27ರಂದು ‘ಸೀತಾ ಸ್ವಯಂವರ’ದ ಪ್ರವಚನವನ್ನು ಆಚಾರ್ಯರು ಅತ್ಯಂತ ಮನಮುಟ್ಟುವಂತೆ ನಡೆಸಿಕೊಟ್ಟರು. ಅಂದು ಸಂಘದ ಸದಸ್ಯರಿಂದ ಶ್ರೀ ರಾಮ ಭಜನಾ ಕಾರ್ಯಕ್ರಮ ಕೂಡ ಜರುಗಿತು. ಕಾರ್ಯಕ್ರಮದ ಪ್ರಸಾದ ವಿತರಣೆಯ ಪ್ರಾಯೋಜಕತ್ವವನ್ನು ಸಂಘದ ಮಾಜಿ ಮಹಿಳಾ ಅಧ್ಯಕ್ಷೆ ಶ್ರೀಮತಿ ಅಹಲ್ಯ ರಮೇಶ ಶೆಟ್ಟಿ ವಹಿಸಿದ್ದರು.


ಆದರ್ಶ ಸಮಾಜಕ್ಕೆ ರಾಮಾಯಣವೇ ಪ್ರೇರಣೆ: ಶ್ರೀ ಮಾವುಲಿ ವಿದ್ಯಾಸಿಂಹಾಚಾರ್ಯ
ಈ ವರ್ಷದ ರಾಮ ನವಮಿ ಪ್ರಯುಕ್ತ ಮಾರ್ಚ್ 28ರಂದು ಸತ್ಯಧ್ಯಾನ ವಿದ್ಯಾಪೀಠದ ಕುಲಗುರುಗಳಾದ ಶ್ರೀ ಮಾವುಲಿ ವಿದ್ಯಾಸಿಂಹಾಚಾರ್ಯರಿಂದ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರವಚನ ನೀಡಿದ ಆಚಾರ್ಯರು, “ಆಧುನಿಕತೆ ಹಾಗೂ ತಾಂತ್ರಿಕ ಪ್ರಗತಿಯ ಹೆಸರಿನಲ್ಲಿ ಮಾನವನ ಜೀವನಶೈಲಿ ವಿನಾಶದತ್ತ ಸಾಗುತ್ತಿದೆ. ಯಂತ್ರ ತಂತ್ರಜ್ಞಾನವು ಮಾನವನಿಗೇ ಪರ್ಯಾಯವಾಗುವ ಹಂತ ತಲುಪಿದೆ. ಇದು ನಮ್ಮ ಸಂಸ್ಕೃತಿ ಮತ್ತು ಅವಿಭಜಿತ ಕುಟುಂಬ ಪದ್ಧತಿಯನ್ನು ಮರೆಸುತ್ತಿದ್ದು, ಸನಾತನ ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ,” ಎಂದು ಕಳವಳ ವ್ಯಕ್ತಪಡಿಸಿದರು.

”ಇಂದಿನ ಅಸ್ಥಿರ ಮತ್ತು ಅಶಾಂತ ಸಾಮಾಜಿಕ ಪರಿಸ್ಥಿತಿಯಲ್ಲಿ ಆದರ್ಶ ಸಮಾಜ, ವ್ಯಕ್ತಿ ಸಂಬಂಧ ಹಾಗೂ ಜೀವನ ಪದ್ಧತಿ ಹೇಗಿರಬೇಕೆಂಬುದನ್ನು ಶ್ರೀ ರಾಮನ ಜೀವನ ಚರಿತ್ರೆ ನಮಗೆ ತಿಳಿಸಿಕೊಡುತ್ತದೆ. ಕೌಟುಂಬಿಕ ಸಂಬಂಧ, ಗುರು-ಹಿರಿಯರ ಗೌರವ ಹಾಗೂ ಪ್ರಜೆಗಳೊಂದಿಗೆ ರಾಜನ ನಡವಳಿಕೆ ಹೇಗಿರಬೇಕೆಂಬುದಕ್ಕೆ ‘ರಾಮರಾಜ್ಯ’ದ ಪರಿಕಲ್ಪನೆಯೇ ಸಾಕ್ಷಿ. ಕಲುಷಿತ ವಾತಾವರಣ ಮತ್ತು ಮಾನಸಿಕ ಅನಾರೋಗ್ಯದಿಂದ ಕೂಡಿದ ಇಂದಿನ ಸಮಾಜ ವ್ಯವಸ್ಥೆಯನ್ನು ಸುಧಾರಿಸಲು ರಾಮಾಯಣದ ಸಂದೇಶಗಳು ಇಂದಿಗೂ ಪ್ರಸ್ತುತ,” ಎಂದು ಅವರು ಮಾರ್ಮಿಕವಾಗಿ ವಿವರಿಸಿದರು.

ಶ್ರೀ ರಾಮ ಭಜನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಕೆ. ಎನ್. ಸತೀಶ್ ಅವರು ಕುಲಪತಿಗಳನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷ ಗೋಪಾಲ ಹೆಗ್ಡೆ, ದರ್ಶನಾ ಸೋಂಕರ್, ಅಧ್ಯಕ್ಷ ಜಯಂತ ದೇಶಮುಖ್ ಹಾಗೂ ಉಪಾಧ್ಯಕ್ಷೆ ಜಯಂತಿ ಹೆಗ್ಡೆ ಅವರು ಆಚಾರ್ಯರನ್ನು ಶಾಲು, ಫಲಪುಷ್ಪ ನೀಡಿ ಸತ್ಕರಿಸಿದರು. ಸಂಘದ ಕಾರ್ಯದರ್ಶಿ ಶ್ರೀ ವಿಜಯ ಪೈ ಅವರು ಪ್ರತಿ ಶನಿವಾರ ಪ್ರವಚನ ನೀಡುತ್ತಿರುವ ಶ್ರೀ ರಾಮಕೃಷ್ಣ ಆಚಾರ್ಯರನ್ನು ಪರಿಚಯಿಸಿದರು. ಸಂಘದ ಗಣ್ಯರು ಇಬ್ಬರೂ ಆಚಾರ್ಯರನ್ನು ಗೌರವಿಸಿದರು.

ಎರಡೂ ದಿನಗಳ ಕಾರ್ಯಕ್ರಮವು ಕಲ್ಯಾಣ ಪಶ್ಚಿಮದ ಡಿ-ಮಾರ್ಟ್ ಪಕ್ಕದ ರಾಮ ಮಂದಿರದಲ್ಲಿ ನಡೆದಿದ್ದು, ಸ್ಥಳಾವಕಾಶ ಮಾಡಿಕೊಟ್ಟ ಶ್ರೀ ಲಲಿತ್ ಗೋಯೆಂಕಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎರಡನೇ ದಿನದ ಕಾರ್ಯಕ್ರಮವನ್ನು ಶ್ರೀ ಗೋಪಾಲ ಹೆಗ್ಡೆ ಮತ್ತು ಕುಟುಂಬದವರು ಪ್ರಾಯೋಜಿಸಿದ್ದರು. ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.




