
ಮುಲ್ಕಿ: ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾ, ಮುಂಬೈ ಮೊಗವೀರ ಸಭಾ ಹಾಗೂ ಅಂಗಸಂಸ್ಥೆಯಾದ ಕದಿಕೆ ವಿದ್ಯಾಪ್ರಸಾರಕ ಸಂಘದ ವತಿಯಿಂದ ಶನಿವಾರ ಸಸಿಹಿತ್ತು ಗ್ರಾಮದ 117 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಹಾಗೂ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಂಬೈನ ಉದ್ಯಮಿ ವೇದಪ್ರಕಾಶ್ ಎಂ. ಶ್ರೀಯಾನ್ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಗ್ರಾಮ ಹಾಗೂ ದೇಶದ ಉತ್ತಮ ಪ್ರಜೆಗಳಾಗಬೇಕು” ಎಂದರು. ಮತ್ತೊಬ್ಬ ಮುಖ್ಯ ಅತಿಥಿ, ಮುಲ್ಕಿ ವಿಜಯ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಿಕೆ ಮೊಗವೀರ ಮಹಾಸಭೆಯ ಅಧ್ಯಕ್ಷ ಗಿರೀಶ್ ಶ್ರೀಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಗುರಿಕಾರರಾದ ಕಿಶೋರ್ ಗುರಿಕಾರ, ಪೂಜಾರಿಗಳಾದ ದಿನೇಶ್ ಪೂಜಾರಿ ಹಾಗೂ ಆನಂದ ಪೂಜಾರಿ, ಅಂಗಸಂಸ್ಥೆಗಳ ಅಧ್ಯಕ್ಷರಾದ ಡಾ. ವಿ.ಕೆ. ಯಾದವ್ ಮತ್ತು ಪ್ರೇಮನಾಥ್ ಸುವರ್ಣ, ಮಹಿಳಾ ಸಭಾದ ಕಾರ್ಯದರ್ಶಿ ಪ್ರಭಾವತಿ, ಮುಂಬೈನ ಉದ್ಯಮಿ ಜಯಂತಿ ಬಾಬು ಬಂಗೇರ, ಕದಿಕೆ ಮೊಗವೀರ ಮಹಾಸಭೆಯ ಉಪಾಧ್ಯಕ್ಷ ಶೋಭೇಂದ್ರ ಸಾಲ್ಯಾನ್, ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಹಿರಿಯ ಸದಸ್ಯ ಅರವಿಂದ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾಪ್ರಸಾರಕ ಸಂಘದ ಅಧ್ಯಕ್ಷ ಡಾ. ವಿ.ಕೆ. ಯಾದವ್ ಸ್ವಾಗತಿಸಿದರು. ಕಾರ್ಯದರ್ಶಿ ಅನಿಲ್ ಕುಂದರ್ ಧನ್ಯವಾದ ಅರ್ಪಿಸಿದರು. ಮೊಗವೀರ ಮಹಾಸಭೆಯ ಉಪಾಧ್ಯಕ್ಷ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.




