
ಮುಂಬಯಿ: ಜೂನ್ 3, 2026 ರಂದು ಮುಂಬಯಿಯ ‘ದಿ ಸೇಂಟ್ ರೆಜಿಸ್’ ನಲ್ಲಿ ನಡೆದ ‘ಫಿನಾಕಲ್ ಇಂಡಿಯಾ ಕನೆಕ್ಟ್ 2026’ ಶೃಂಗಸಭೆಯಲ್ಲಿ, ಭಾರತದ ಅತ್ಯಂತ ಗ್ರಾಹಕ ಸ್ನೇಹಿ ಬ್ಯಾಂಕ್ಗಳಲ್ಲಿ ಒಂದಾದ ಭಾರತ್ ಬ್ಯಾಂಕಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಷ್ಠಿತವೆಂದು ಪರಿಗಣಿಸಲಾದ “ಇನ್ಫೋಸಿಸ್ ಪ್ರೋಸೆಸ್ ಇನ್ನೋವೇಶನ್ ಅವಾರ್ಡ್” ನೀಡಿ ಗೌರವಿಸಲಾಯಿತು. ಈ ಮೂಲಕ ಬ್ಯಾಂಕ್ ಈಗಾಗಲೇ ತನ್ನ ಮುಡಿಗೆ ಏರಿಸಿಕೊಂಡಿರುವ 80ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳ ಸರಣಿಗೆ ಈಗ ಮತ್ತೊಂದು ಮಹತ್ವದ ರಾಷ್ಟ್ರೀಯ ಗೌರವ ಸೇರ್ಪಡೆಯಾದಂತಾಗಿದೆ.
ಈ ಪ್ರಶಸ್ತಿಯನ್ನು ಬ್ಯಾಂಕಿನ ಉಪಕಾರ್ಯಾಧ್ಯಕ್ಷರಾದ ಅಡ್ವೋಕೇಟ್ ಶ್ರೀ ಸೋಮನಾಥ್ ಬಿ. ಅಮಿನ್ ಅವರಿಗೆ ಇನ್ಫೋಸಿಸ್ನ ದಕ್ಷಿಣ ಏಷ್ಯಾದ ಬ್ಯುಸಿನೆಸ್ ಹೆಡ್ ಶ್ರೀ ಅಜಿತ್ ಸಾವಂತ್ ಮತ್ತು ಇನ್ಫೋಸಿಸ್ನ ಪ್ರಾಡಕ್ಟ್ ಡೆವಲಪ್ಮೆಂಟ್ನ – ಗ್ಲೋಬಲ್ ಹೆಡ್ ಶ್ರೀಮತಿ ರಾಜಶ್ರೀ ರೆಂಗನ್ ರವರು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ವಿದ್ಯಾನಂದ ಎಸ್. ಕರ್ಕೇರ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿನೇಶ್ ಬಿ. ಸಾಲ್ಯಾನ್, ಉಪ ಮಹಾಪ್ರಬಂಧಕರಾದ ಶ್ರೀ ಯಶೋಧರ ಪೂಜಾರಿ ಮತ್ತು ವರಿಷ್ಠ ವ್ಯವಸ್ಥಾಪಕಿ ಶ್ರೀಮತಿ ಗೀತಾವತಿ ಸುವರ್ಣ ಉಪಸ್ಥಿತರಿದ್ದರು.
ಇನ್ಫೋಸಿಸ್ ನಂತಹ ಜಾಗತಿಕ ಸಂಸ್ಥೆಯಿಂದ ನೀಡಲ್ಪಟ್ಟ ಈ ಮನ್ನಣೆಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣರು, “ಇನ್ಫೋಸಿಸ್ ಪ್ರೋಸೆಸ್ ಇನ್ನೋವೇಶನ್ ಅವಾರ್ಡ್ ಸ್ವೀಕರಿಸುತ್ತಿರುವ ಈ ಸಂದರ್ಭ ಭಾರತ್ ಬ್ಯಾಂಕ್ಗೆ ಅತ್ಯಂತ ಗೌರವಪ್ರದ ಕ್ಷಣವಾಗಿದೆ. ಈ ಪ್ರಶಸ್ತಿಯು ನಮ್ಮ ಸಿಬ್ಬಂದಿ ವರ್ಗದ ಸಮರ್ಪಣೆ ಮತ್ತು ಸಂಸ್ಥೆಯ ತಾಂತ್ರಿಕ ದೂರದೃಷ್ಟಿಯ ಫಲಿತಾಂಶವಾಗಿದೆ. ಭಾರತ್ ಬ್ಯಾಂಕ್ ಸದಾ ಗ್ರಾಹಕ ಸೇವೆಯ ಗುಣಮಟ್ಟ, ಕಾರ್ಯಾಚರಣಾ ದಕ್ಷತೆ ಮತ್ತು ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ನಲ್ಲಿ ಶ್ರೇಷ್ಠತೆ ಸಾಧಿಸುವ ಬದ್ಧತೆಯನ್ನು ಹೊಂದಿದೆ. ನಮ್ಮ ಡಿಜಿಟಲ್ ಸೇವೆಗಳ ವಿಸ್ತರಣೆ ಮೂಲಕ ಸಮಾಜದ ಪ್ರತಿಯೊಂದು ವರ್ಗಕ್ಕೂ ಆಧುನಿಕ ಹಾಗೂ ಭರವಸೆಯ ಬ್ಯಾಂಕಿಂಗ್ ಸೇವೆ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಭಾರತ್ ಬ್ಯಾಂಕ್ ಕೇವಲ ತನ್ನ ಶಾಖೆಗಳನ್ನು ವಿಸ್ತರಿಸುತ್ತಿಲ್ಲ, ಅಲ್ಲದೆ ವ್ಯವಸ್ಥಿತವಾಗಿ ಆಧುನಿಕ ಯುಗಕ್ಕೆ ವಿಕಸನಗೊಳ್ಳುತ್ತಿದೆ. ನಮ್ಮ ಗ್ರಾಹಕರ ಮತ್ತು ಸದಸ್ಯರ ಬದಲಾಗುತ್ತಿರುವ ಆರ್ಥಿಕ ಅಗತ್ಯಗಳಿಗೆ ತಕ್ಕಂತೆ ಸಂಪೂರ್ಣ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಹೊಸ ಡಿಜಿಟಲ್ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ” ಎಂದು ತಿಳಿಸಿದರು.
1978 ರಿಂದ ಗ್ರಾಹಕರ ಮತ್ತು ಷೇರುದಾರರ ಅಚಲ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಭಾರತ್ ಬ್ಯಾಂಕಿಗೆ ಈ ಮನ್ನಣೆಯು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಇನ್ಫೋಸಿಸ್ ಫಿನಾಕಲ್ ಸಿಬಿಎಸ್ (CBS) ತಂತ್ರಜ್ಞಾನದ ಆಧುನಿಕ ಹಾಗೂ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಷೇರುದಾರರ ಪಾಲಿಗೆ ಈ ಪ್ರಶಸ್ತಿಯು ಭಾರತ್ ಬ್ಯಾಂಕನ್ನು ತಾಂತ್ರಿಕವಾಗಿ ಪ್ರಗತಿಪರ, ಮುಂದಾಲೋಚನೆ ಹೊಂದಿರುವ ಮತ್ತು ಕಾರ್ಯಾಚರಣೆಯಲ್ಲಿ ದಕ್ಷತೆ ಹೊಂದಿರುವ ಬ್ಯಾಂಕ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.




