
ವಸಯಿ, ಜೂ. 19: ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಸಯಿ ಕರ್ನಾಟಕ ಸಂಘದ ಪ್ರಾಯೋಜಕತ್ವದಲ್ಲಿ ದಿ. ಕರ್ನಿರೆ ಶ್ರೀಧರ ಶೆಟ್ಟಿಯವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಶ್ರೀ ಕಟೀಲು ಯಕ್ಷಕಲಾವೇದಿಕೆ ವತಿಯಿಂದ ಸಂಸ್ಥೆಯ ದಶಮಾನೋತ್ಸವ ವರ್ಷದ ಯಕ್ಷಗಾನ ತರಬೇತಿ ಶಿಬಿರಕ್ಕೆ ಚಾಲನೆ ಹಾಗೂ ಸಂಘದ ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ನಡೆಯಲಿರುವ ಯಕ್ಷಗಾನ ಪ್ರದರ್ಶನಕ್ಕೆ ‘ಅಮರಶಿಲ್ಪಿ ಶಂಭು ಕಲ್ಕುಡ’ ಎಂಬ ಕಥಾ ಪ್ರಸಂಗದ ಮುಹೂರ್ತವು ಜೂ. 17ರಂದು ವೀರ ಸಾವರ್ಕರ್ ನಗರದ ವಿ.ವಿ.ಎಂ.ಸಿ. ಸಮಾಜ ಮಂದಿರದಲ್ಲಿ ಸಂಸ್ಥೆಯ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ, ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ,ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಕರ್ನೂರು ಶಂಕರ ಕೆ ಆಳ್ವ ,ಯಕ್ಷಗುರು ಕಟೀಲು ಸದಾನಂದ ಶೆಟ್ಟಿ, ಯಕ್ಷಗಾನ ಸಾಹಿತ್ಯಕಾರ ಕೊಲ್ಯಾರು ರಾಜು ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಕುಸುಮ್ ಬಿ. ಸುವರ್ಣ ಅವರ ಪ್ರಾರ್ಥನೆಯೊಂದಿಗೆ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ಮಾತನಾಡಿ, “ಕನ್ನಡ ನಾಡಿನ ಕಲೆ-ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಯಕ್ಷಗಾನವನ್ನು ಕಲಿಯುತ್ತಿರುವ ಸಂಸ್ಥೆಯ ಬಾಲ ಕಲಾವಿದರು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಯಕ್ಷಗಾನ ಅನುಸರಿಸಿಕೊಂಡು ಸಂಸ್ಕಾರವಂತರಾಗಿ ಬೆಳೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ” ಎಂದು ನುಡಿದರು.
ವಸಯಿ ಕರ್ನಾಟಕ ಸಂಘ ಹಾಗೂ ಶ್ರೀ ಕಟೀಲು ಯಕ್ಷಕಲಾವೇದಿಕೆಯ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ, “ಇಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿರುವ ಮಕ್ಕಳು ತಮ್ಮ ಯಕ್ಷಗಾನಾಭಿನಯದ ಮೂಲಕ ಮುಂಬೈ ಹಾಗೂ ಒಳನಾಡಿನಲ್ಲಿಯೂ ಸಂಸ್ಥೆಯ ಕೀರ್ತಿಯನ್ನು ಪಸರಿಸಿದ್ದಾರೆ. ಬಾಲ ಕಲಾವಿದರು ತಮ್ಮ ಶಾಲಾ ಶಿಕ್ಷಣದೊಂದಿಗೆ ಯಕ್ಷಗಾನವನ್ನು ಕಲಿತು ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿದರು.
ಕಟೀಲು ಯಕ್ಷಕಲಾವೇದಿಕೆಯ ಉಪಾಧ್ಯಕ್ಷ ಓ.ಪಿ. ಪೂಜಾರಿ, ಕೋಶಾಧಿಕಾರಿ ಭಾರತಿ ಎಚ್. ಶೆಟ್ಟಿ, ಸಂಚಾಲಕ ಹರೀಶ್ ಶೆಟ್ಟಿ, ವಸಯಿ ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಅನಿತಾ ದೇವೇಂದ್ರ ಬುನ್ನನ್ ವಂದನಾರ್ಪಣೆ ಸಲ್ಲಿಸಿದರು.
ಕೋಶಾಧಿಕಾರಿ ಅಮಿತಾ ಸಂತೋಷ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮಾ ಅನೂಪ್ ಶೆಟ್ಟಿ, ಮಮತಾ ಜಯ. ಶೆಟ್ಟಿ, ಸುರೇಖಾ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪಾಲಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.




