September 6, 2026
Mumbai News Kannada
ಮುಂಬಯಿ

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”





 ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ ಮುಂಬಯಿಯ ಶತಮಾನೋತ್ಸವ ಆಚರಣೆಯ ಅಂಗವಾಗಿ ರವಿವಾರ 9.3.2025 ರಂದು  ಗೋಕುಲ ಸರಸ್ವತಿ ಸಭಾಗೃಹದಲ್ಲಿ  ಅಧ್ಯಕ್ಷ ಡಾ. ಸುರೇಶ್ ಎಸ್. ರಾವ್ ರವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ,  “ಪುರುಷರ ಮಹಾ ದಿನ” ವನ್ನು ಅತ್ಯಂತ ವರ್ಣಮಯವಾಗಿ ಆಚರಿಸಲಾಯಿತು. ಪುರುಷರ ದಿನಾಚರಣಾ  ಸಮಿತಿ ಕಾರ್ಯಾಧ್ಯಕ್ಷ  ವೈ. ಗುರುರಾಜ್ ಭಟ್ ಮತ್ತು ಸಂಘದ ಸಹ ಕಾರ್ಯದರ್ಶಿ ವೈ. ಮೋಹನ್ ರಾಜ್ ರವರ  ಜಂಟಿ ನಿರೂಪಣೆಯಲ್ಲಿ ಪರೇಲ್ ಶ್ರೀನಿವಾಸ್ ಭಟ್ ರವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉಪಾಧ್ಯಕ್ಷ ವಾಮನ್ ಹೊಳ್ಳ, ಗೌ. ಕಾರ್ಯದರ್ಶಿ ಎ. ಪಿ.ಕೆ. ಪೋತಿ ಮತ್ತು ಇತರ ಪದಾಧಿಕಾರಿಗಳು ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕೃತಿಕ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಮನ್ ಹೊಳ್ಳ ರವರು ಸ್ವಾಗತ ಗೈದು ಪ್ರಾಸ್ತಾವಿಕ ನುಡಿಗಳನ್ನಾಡಿದರು. 

 ಬೆಂಗಳೂರಿನಿಂದ ಆಗಮಿಸಿದ ಅತಿಥಿ,  ಹಾಸ್ಯ ಕವಿ ಡುಂಢಿರಾಜ್ ತಮ್ಮ ಹನಿಗವನ, ಲಘು  ಹಾಸ್ಯ ಚಟಾಕಿಗಳೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.   

ಕಲಾ ಕದಂಬ ಆರ್ಟ್ಸ್ ಸೆಂಟರ್ ತಂಡದ  ಶಶಿಕಾಂತ್ ಆಚಾರ್ಯ ಮತ್ತು ಡಾ. ರಾಧಾಕೃಷ್ಣ, ಬೆಂಗಳೂರು ಇವರು, ಸತ್ಯವೇ ನಮ್ಮ ತಾಯಿತಂದೆ ಎಂಬ  ಸತ್ಯ ವಚನ ಪಾಲನೆಗಾಗಿ ಹೆಬ್ಬುಲಿಗೆ ತನ್ನನ್ನು ತಾನು ಆಹಾರವಾಗಿಸಲು  ಮುಂದಾದ ಗೋವಿನ,   ಕರ್ನಾಟಕದ ಐತಿಹಾಸಿಕ    “ಪುಣ್ಯಕೋಟಿ”  ಕಥಾನಕವನ್ನು  ಯಕ್ಷಗಾನ ನೃತ್ಯ ರೂಪಕದಲ್ಲಿ ಪ್ರಸ್ತುತಗೊಳಿಸಿ,  ವೀಕ್ಷಕರು  ಭಾವುಕರಾಗುವಂತೆ ಮಾಡಿದರು. ಪುಟಾಣಿ ಪೃಥ್ವೀಶ್  ಕರುವಾಗಿ ಉತ್ತಮವಾಗಿ  ಅಭಿನಯಿಸಿದರು.   ನಂತರ ಡಾ. ಮಧುಸೂದನ್ ರಾವ್  ಪರಿವಾರದವರಿಂದ “ನರಸಿಂಹ” ನೃತ್ಯ ರೂಪಕದಲ್ಲಿ, ಪುಟಾಣಿ ಕಲಾವಿದರಾದ ರೇಯಾಂಶ್ ಮತ್ತು ಪಾರ್ಥ್ ತಮ್ಮ ಅಭಿನಯದ ಮೂಲಕ ಎಲ್ಲರ ಮನ ಗೆದ್ದರು. ವಿದ್ವಾನ್ ದಾಮೋದರ ಶರ್ಮ ರವರಿಂದ ದೈನಂದಿನ ಧಾರ್ಮಿಕ ಅನುಷ್ಠಾನದ ಬಗ್ಗೆ ಪ್ರವಚನ ನಡೆಯಿತು. 

ಸ್ವಾದಿಷ್ಟ ಭೋಜನಾ ನಂತರ  ನವನೀತ್ ರಾವ್, ಪವನ್ ರಾವ್, ಶ್ರೀನಾಥ್ ಸೋಮಯಾಜಿಯವರಿಂದ ತಬಲಾ, ಘಟಂ, ಮತ್ತು ಮೃದಂಗ ವಾದನದ  ತಾಳವಾದ್ಯ ಕಚೇರಿ,  ಶಶಿಕಾಂತ್ ಆಚಾರ್ಯ ಬಳಗದವರಿಂದ ಯಕ್ಷಗಾನ/ಭರತನಾಟ್ಯ ಸಮ್ಮಿಶ್ರಣದಲ್ಲಿ “ಕಂಸ ವಧೆ”  ಕಥಾನಕ,   ರಾಜಾರಾಮ್ ಆಚಾರ್ಯರವರ ರಚನೆ ಹಾಗೂ ದಿಗ್ದರ್ಶನದಲ್ಲಿ   “ಪತಿವ್ಯಥೆ” ಎಂಬ ಹಾಸ್ಯ ರೂಪಕ,  ಗೋಕುಲ ಯಕ್ಷಗಾನ ಕಲಾವಿದರಿಂದ ಎಚ್. ಲಕ್ಷ್ಮೀನಾರಾಯಣರವರ  ನೇತೃತ್ವ ಹಾಗೂ ಗೀತಾಂಬಿಕಾ  ಯಕ್ಷಗಾನ ಮಂಡಳಿಯವರ ಸಹಕಾರದಲ್ಲಿ ಗರುಡ ಗರ್ವಭಂಗ ಎಂಬ ತೆಂಕು ತಿಟ್ಟು  ಯಕ್ಷಗಾನ  ಹೀಗೆ ವೈವಿಧ್ಯಮಯ, ವರ್ಣರಂಜಿತ   ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ೫ ವರ್ಷದಿಂದ  ೮೦ ವರ್ಷದವರೆಗಿನ ಹಿರಿಕಿರಿಯ ಸದಸ್ಯರು ಭಾಗವಹಿಸಿ, ತುಂಬಿದ ಸಭಾಗೃಹದಲ್ಲಿ ನೆರೆದ ಕಲಾಭಿಮಾನಿಗಳ ಮನ ರಂಜಿಸಿದರು  ಕೃಷ್ಣ ಭಟ್, ಕರ್ನಾಟಕ ಬ್ಯಾಂಕ್ ಡಿ.ಜಿ.ಎಂ. ರಾಜಗೋಪಾಲ್ ಭಟ್ ಮತ್ತು ಎಚ್.ಸೀತಾರಾಮ್ ಆಚಾರ್ಯ ರವರು ಕರೌಕೆ ಸಂಗೀತದಲ್ಲಿ ಸಿನೆಮಾ  ಮತ್ತು ಭಾವಗೀತೆಗಳನ್ನು ಹಾಡಿದರು. ಎಲ್ಲಾ ಕಲಾವಿದರನ್ನು ಸಂಘದ ಅಧ್ಯಕ್ಷ    ಡಾ. ಸುರೇಶ್ ರಾವ್ ಮತ್ತು  ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಅಂತೆಯೇ ಸಂಘದ ಸದಸ್ಯ ಉದ್ಯೋಗ ಕ್ಷೇತ್ರದಲ್ಲಿ ಮಹತ್ ಸಾಧನೆಯನ್ನು ಮಾಡಿದ ಡಾ. ರಘುನಂದನ್ ಅವರನ್ನು ಕೂಡಾ ಶಾಲು ಹೊದಿಸಿ ಸನ್ಮಾನಿಸಿದರು. ಅಂದಿನ ಕಾರ್ಯಕ್ರಮವನ್ನು ರಾಮಪ್ರಸಾದ್ ರಾವ್, ಮುಲುಂಡು ಪ್ರಾಯೋಜಿಸಿದ್ದರು. ಅವರನ್ನು ವಾಮನ  ಹೊಳ್ಳ ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು.  ಗೌ.ಕಾರ್ಯದರ್ಶಿ ಎ. ಪಿ.ಕೆ. ಪೋತಿ  ವಂದನಾರ್ಪಣೆ ಗೈದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.



Related posts

ಮುಂಬೈ: ಬಾಂದ್ರಾದಲ್ಲಿ ರೈಲ್ವೆ ಭೂಮಿ ತೆರವು ವೇಳೆ ಭಾರಿ ಹಂಗಾಮು, ಪೊಲೀಸರ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ

Mumbai News Desk

ಅತ್ಯಂತ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ -ಶ್ರೀ ಕೃಷ್ಣ ಲೀಲೋತ್ಸವ /ಮೊಸರು ಕುಡಿಕೆ ಹಬ್ಬ /ಪಲ್ಲಕ್ಕಿ ಉತ್ಸವ 

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಸಮಿತಿಯಿಂದ ವಿಜೃಂಭಣೆಯ ಗುರುಪೂರ್ಣಿಮಾ ಆಚರಣೆ

Mumbai News Desk

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಕುಮಾರಕ್ಷತ್ರಿಯ ಸಂಘ ವಾರ್ಷಿಕ ಸ್ನೇಹ ಸಮ್ಮಿಲನ, ಧಾರ್ಮಿಕ ಕಾರ್ಯಕ್ರಮ.

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ಗಣರಾಜ್ಯೋತ್ಸವ

Mumbai News Desk