
ಮಹಿಳೆಯರ ಸ್ವಾವಲಂಬನೆಗೆ ಉಚಿತ ಹೊಲಿಗೆ ತರಬೇತಿ ಶ್ಲಾಘನೀಯ: ಡಾ. ಬಾಗೆಶ್ರೀ ಪಿ. ಬಂಗೇರ ಮಾಂಡೇಕರ್
ಚಿತ್ರ,ವರದಿ: ಉಮೇಶ್ ಕೆ. ಅಂಚನ್
ಮುಂಬಯಿ,ಆ.13-ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಲು ಅನೇಕ ಉತ್ತಮ ಅವಕಾಶಗಳಿವೆ. ಯೂಟ್ಯೂಬ್ ಹಾಗೂ ಮೊಬೈಲ್ ಮೂಲಕ ಅಡುಗೆ ತಯಾರಿಕೆ, ಕೇಶ ವಿನ್ಯಾಸ ಮತ್ತು ಸೀರೆ ಉಡಿಸುವ ಕಲೆಯನ್ನು ಕಲಿತು ಇಂದು ಅದೆಷ್ಟೋ ಮಹಿಳೆಯರು ಯಶಸ್ವಿ ಉದ್ಯಮಿಗಳಾಗಿದ್ದಾರೆ ಎಂದು ಅಂಧೇರಿ ಪಶ್ಚಿಮದ ವಾಲಿಯಾ ಕಾಲೇಜಿನ ಮಾಜಿ ಪ್ರಾಂಶುಪಾಲೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಬಾಗೆಶ್ರೀ ಪಿ. ಬಂಗೇರ ಮಾಂಡೇಕರ್ ಹೇಳಿದರು.

ಅವರು ಆ.9ರಂದು ಬೊರಿವಲಿ ಪಶ್ಚಿಮದ ಚುಕ್ಕುವಾಡಿಯ ಭೂಷನ್ ಪಾರ್ಕ್ ವ್ಯೂ ಕಟ್ಟಡದಲ್ಲಿರುವ ಸಮಿತಿಯ ಕಚೇರಿಯಲ್ಲಿ ನಡೆದ ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ ಉಚಿತ ಹೊಲಿಗೆ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

56 ವರ್ಷ ಪೂರೈಸಿರುವ ಸಾಯಿಬಾಬಾ ಪೂಜಾ ಸಮಿತಿಯು ಕಳೆದ 17 ವರ್ಷಗಳಿಂದ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಿದ್ದು, ನೂರಾರು ಮಹಿಳೆಯರಿಗೆ ಟೈಲರಿಂಗ್ ವೃತ್ತಿಯ ಮೂಲಕ ಸ್ವಾವಲಂಬಿ ಜೀವನ ನಡೆಸಲು ನೆರವಾಗಿದೆ. ತರಬೇತಿ ಪಡೆದ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯನ್ನು ಮರೆಯದೆ, ಸಮಾಜ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಇದೇ ವೇಳೆ ಸಮಿತಿಯು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡುತ್ತಿರುವ ನಿರಂತರ ಸಮಾಜ ಸೇವೆಯನ್ನು ಡಾ. ಬಾಗೇಶ್ರೀ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿ ಮಾತನಾಡಿ ಸದಸ್ಯರ ಹಾಗೂ ದಾನಿಗಳ ಒಮ್ಮನಸ್ಸಿನ ಬೆಂಬಲದಿಂದ ಸಮಿತಿಯ ಸಮಾಜ ಸೇವೆಯು ನಡೆಯುತ್ತಿದೆ . ಮುಂದಿಗೂ ಇದೇ ರೀತಿಯ ಸಹಕಾರ ಲಬಿಸುತ್ತಿರಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಡ್ವೆ ಜಯ ಎಸ್.ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಡಿ.ಶೇಣವ, ಟ್ರಸ್ಟಿ ಸುಧಾಕರ್ ಎಮ್. ಶೆಟ್ಟಿ ಉಪಸ್ಥಿತರಿದ್ದರು.
ಪ್ರಸ್ತುತ ವರ್ಷದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ಹಾಗೂ ಪ್ರತೀ ವರ್ಷ ಕೊಡಮಾಡುವ ಹೊಲಿಗೆ ಯಂತ್ರವೊಂದನ್ನು ರುತ್ವಿಕಾ ಡಿ.ರಮಣಿಯವರಿಗೆ ನೀಡಲಾಯಿತು. ಅತಿಥಿಗಳನ್ನು ಹಾಗೂ ಉಪಸ್ಥಿತರಿದ್ದ ಆಮಂತ್ರಿತ ಗಣ್ಯರನ್ನು ಗೌರವಿಸಲಾಯಿತು.

ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಜಿ.ಭಂಡಾರಿ, ಪ್ರಸಾದ್ ಜಿ.ಶೆಟ್ಟಿ, ರಮೇಶ್ ಕೆ.ಪೂಜಾರಿ, ಪ್ರದೀಪ್ ಎನ್.ಸುವರ್ಣ,ರವಿ.ಎಸ್.ಶೆಟ್ಟಿ, ಹರ್ಷದ್ ಬಿ.ಶೆಟ್ಟಿ,ಪಾರಿತೋಷ್ ಎನ್.ರೈ, ಯಶೋದಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಾಯಿಬಾಬಾರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೊಲಿಗೆ ತರಬೇತಿ ಶಿಕ್ಷಕಿ ಪ್ರೇಮಲತಾ ಪ್ರಜಾಪತಿ ಪ್ರಾರ್ಥನೆ ಗೈದರು.

ಸಮಿತಿಯ ಗೌ.ಕಾರ್ಯದರ್ಶಿ ಪ್ರೊ. ಕೆ.ಎಚ್.ಕರ್ಕೇರ ಸಮಿತಿಯ ಕಾರ್ಯಕಲಾಪಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರಮೇಶ್ ಬಿ.ಶೆಟ್ಟಿ ಮಿಜಾರು ವಂದಿಸಿದರು.
ನಂತರ ಸಮಿತಿಯ 32ನೇ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಪ್ರೊ.ಕೆ.ಎಚ್.ಕರ್ಕೇರ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ರವೀಂದ್ರ ಡಿ.ಶೇಣವ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಹಾಗೂ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಭೆಯಲ್ಲಿ ಕೃಷ್ಣ ನಾಯಕ್ ಎಂಡ್ ಕಂಪನಿಯ ವರನ್ನು ವಾರ್ಷಿಕ ಲೆಕ್ಕಪರಿಶೋಧನಕ ರನ್ನಾಗಿ ನೇಮಿಸಲಾಯಿತು. ಪ್ರಸ್ತುತ ವರ್ಷದ ಸಾಯಿಬಾಬಾ ಮಹಾಪೂಜೆಯನ್ನು ನವೆಂಬರ್ 8ರಂದು ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.ಸದಸ್ಯರು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಧನ್ಯವಾದಗಳೊಂದಿಗೆ ಮಹಾಸಭೆ ಯು ಮುಕ್ತಾಯವಾಯಿತು.




