
ಅಸೋಸಿಯೇಷನ್ ಶೈಕ್ಷಣಿಕ ಸೇವೆಗೆ ಹೆಚ್ಚಿನ ಮಹತ್ವ ನೀಡುತ್ತದೆ- ಹರೀಶ್ ಜಿ. ಅಮೀನ್
ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ, ಜು.1:ನಾರಾಯಣ ಗುರುಗಳ ತತ್ವಾದೇಶದಂತೆ ಬಿಲ್ಲವರ ಅಸೋಸಿಯೇಷನ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ವರ್ಷಂ ಪ್ರತಿ ಲಕ್ಷಾಂತರ ರೂಪಾಯಿಯನ್ನು ಶೈಕ್ಷಣಿಕ ಸೇವೆಗೆ ಅಸೋಸಿಯೇಷನ್ ವ್ಯಯಿಸುತ್ತಿದೆ. ಮುಂದೆ ಮುಂಬಯಿಯಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಅಸೋಸಿಯೇಷನ್ ಕಾರ್ಯಪ್ರವೃತ್ತವಾಗಿದೆ. ಈ ಮಹತ್ತರವಾದ ಯೋಜನೆಗೆ ಸಮಾಜ ಬಾಂಧವರ ಸಹಕಾರ ಅಗತ್ಯ ಎಂದು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್ ನುಡಿದರು.
ಅವರು ಜೂ.29ರಂದು ಭಾಂಡುಪ್ ಪೂರ್ವದ ಸತ್ಯ ವಿಜಯಾ ವಾಣಿಜ್ಯ ಸಂಕೀರ್ಣದಲ್ಲಿರುವ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ನೆರವು ವಿತರಣೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯಲ್ಲಿ ಮಾತನಾಡಿದರು.
ಇಂದು ಲೋಕಾರ್ಪಣೆಗೊಂಡ ಶಂಭು ಸನಿಲ್ ಅವರ ನಾಲ್ಕನೇ ಕೃತಿ ‘ಅಮ್ಮ ಅಪ್ಪ’ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖಕ ಶಂಭು ಸನಿಲ್ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಬರೆದಿದ್ದಾರೆ. ಸಮಾಜಕ್ಕೆ ಈ ಕೃತಿಯ ಅಗತ್ಯ ಇದೆ. ಸ್ಥಳೀಯ ಸಮಿತಿಯು ಇಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹರೀಶ್ ಜಿ. ಅಮೀನ್ ಹೇಳಿದರು.




ಈ ಸಂದರ್ಭದಲ್ಲಿ ಪರಿಸರದ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಪ್ರಸ್ತುತ ವರ್ಷದ ಆರ್ಯಭಟ ಪ್ರಶಸ್ತಿ ಪಡೆದ, ಲೇಖಕ ಶಂಭು ಸನಿಲ್ ಅವರ ನಾಲ್ಕನೇ ‘ಅಮ್ಮ ಅಪ್ಪ’ ಶೀರ್ಷಿಕೆಯ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರನ್ನು ಸನ್ಮಾನಿಸಲಾಯಿತು.ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಎಮ್.ಬಿ.ಸನಿಲ್ ಕೃತಿ ಪರಿಚಯ ಮಾಡಿದರು.
ಸನ್ಮಾನಕ್ಕೆ ಉತ್ತರಿಸಿದ ಶಂಭು ಸನಿಲ್ ಸುಮಾರು ನಾಲ್ಕು ದಶಕಗಳಿಂದ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಗುರು ಸೇವೆಯ ಫಲವಾಗಿ ಆರ್ಯಭಟ ಪ್ರಶಸ್ತಿ ಲಭಿಸಿದೆ. ಸಮಾಜದ ಹಿತಕ್ಕಾಗಿ ವೃದ್ಧಾಶ್ರಮ, ಅಂತರ್ಜಾತಿಯ ವಿವಾಹ ಹಾಗೂ ಆಧ್ಯಾತ್ಮಿಕ ವಿಷಯಗಳೊಂದಿಗೆ ಹೊಸ ಕೃತಿಯ ರಚನೆಯಾಗಿದೆ.ಅಮೂಲ್ಯ ಸಲಹೆ ನೀಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು .
ನಂತರ ವಿಶ್ವೇಶ ದಾಸಾ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ‘ಭಕ್ತ ಕನಕದಾಸ’ ತುಳು ಭಕ್ತಿಮಯ ಹರಿಕಥಯು ಸಾದರ ಗೊಂಡಿತು. ಹಾರ್ಮೋನಿಯಂ ನಲ್ಲಿ ಶೇಖರ್ ಸಸಿಹಿತ್ಲು ಹಾಗೂ ತಬುಲಾದಲ್ಲಿ ಜನಾರ್ಧನ ಸಾಲ್ಯಾನ್ ಸಹಕರಿಸಿದ್ದರು.

ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಇದರ ಶೈಕ್ಷಣಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ತೋನ್ಸೆ, ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕ್ಕರ್ಣೆ, ಕೇಂದ್ರ ಕಚೇರಿಯ ಪ್ರಭಾರಿ ಹಾಗೂ ಉಪಾಧ್ಯಕ್ಷ ಕೆ.ಸುರೇಶ್ ಕುಮಾರ್, ಉಪಾಧ್ಯಕ್ಷೆ ಜಯಂತಿ ವರದ್ ಉಳ್ಳಾಲ್, ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್ ಉಪಸ್ಥಿತರಿದ್ದರು.
ಆರಂಭದಲ್ಲಿ ಕೈರಬೆಟ್ಟು ವಿಶ್ವನಾಥ್ ಭಟ್ ಹಾಗೂ ಪದಾಧಿಕಾರಿಗಳು ಗುರು ಪೂಜೆ ಸಲ್ಲಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ಧನ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸದಾನಂದ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಕಚೇರಿಯ ಆಡಳಿತ ಸಮಿತಿಯ ಸದಸ್ಯರಾದ ಶಂಕರ್ ಎಸ್.ಪೂಜಾರಿ, ಸದಾನಂದ್ ಎಮ್.ಅಮೀನ್, ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ಅಮೀನ್, ಉಪ ಕಾರ್ಯಾಧ್ಯಕ್ಷ ವಿನಯ್ ಪೂಜಾರಿ ಮತ್ತು ಪದಾಧಿಕಾರಿಗಳು, ಥಾಣೆ ಸ್ಥಳೀಯ ಸಮಿತಿಯ ಗೌ. ಕಾರ್ಯಾಧ್ಯಕ್ಷ ಅನಂತ್ ಸಾಲ್ಯಾನ್, ಕೋಶಾಧಿಕಾರಿ ನಾರಾಯಣ ಪೂಜಾರಿ,ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕ ರಾಜಾ.ವಿ.ಸಾಲ್ಯಾನ್, ಉದ್ಯಮಿ ವಾಸು.ಎಸ್ ಪೂಜಾರಿ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಉಪಕಾರ್ಯಾದ್ಯಕ್ಷ ಶೇಖರ್ ಎಮ್.ಪೂಜಾರಿ, ಜೊತೆ ಕಾರ್ಯದರ್ಶಿ ಸತೀಶ್ ವಿ.ಪೂಜಾರಿ, ಕೋಶಾಧಿಕಾರಿ ಜಯಂತ್ ಪೂಜಾರಿ, ಜೊತೆ ಕೋಶಾಧಿಕಾರಿ ಅರವಿಂದ್ ಸಿ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿಸಲು, ಮಹಿಳಾ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.




