
ನವಿ ಮುಂಬಯಿ: ಪನ್ವೇಲ್ ಕರ್ನಾಟಕ ಸಂಘವು ಸತತ 18ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಈ ವರ್ಷದ ಆಚರಣೆಯು ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪದ್ಮ, ಕಾರ್ಯಧ್ಯಕ್ಷರಾದ ಮಾಜಿ ನಗರಸೇವಕ ಸಂತೋಷ್ ಜಿ. ಶೆಟ್ಟಿ, ಮತ್ತು ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಭಕ್ತಾದಿಗಳ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿತು.
ಆಗಸ್ಟ್ 27ರಂದು ಸಂಘದ ಆವರಣದಲ್ಲಿ ಗಣಪತಿಯ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಗಣಪತಿಗೆ ಪೂಜೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳು ಮತ್ತು ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು.

ಸೆಪ್ಟೆಂಬರ್ 2ರಂದು ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಾತಾ ಕಿ ಚೌಕಿ ಕಾರ್ಯಕ್ರಮಗಳು ಅದ್ದೂರಿಯಾಗಿ ಮೂಡಿಬಂದವು. ಬಳಿಕ ಸ್ಥಳೀಯ ದಾನಿಗಳ ಸಹಕಾರದಿಂದ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗವಾಯಿತು. ಈ ಕಾರ್ಯಕ್ರಮವು ಸಂಘದ ಕಾರ್ಯಕಾರಿ ಸಮಿತಿ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಬಹಳ ಅಚ್ಚುಕಟ್ಟಾಗಿ ನಡೆಯಿತು.
ಸೆಪ್ಟೆಂಬರ್ 2ರಂದು ಸಂಜೆ ಸುಮಾರು 5:00 ಗಂಟೆಯ ನಂತರ ಗಣಪತಿಯ ವಿಸರ್ಜನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಸಂಪೂರ್ಣ ಗಣೇಶೋತ್ಸವವು ಸೌಹಾರ್ದಯುತ ವಾತಾವರಣದಲ್ಲಿ ನೆರವೇರಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.




