32 C
Mumbai
March 7, 2026
Mumbai News Kannada
ಮುಂಬಯಿ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ ವತಿಯಿಂದ ಶ್ರೀ ವಿಶ್ವಕರ್ಮ ಮಹೋತ್ಸವ ಸಂಭ್ರಮ





ಮುಂಬೈ, ಸೆಪ್ಟೆಂಬರ್ 22: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿತು. ಸೆಪ್ಟೆಂಬರ್ 16, ಮಂಗಳವಾರದಂದು ಅಂಧೇರಿ ಪಶ್ಚಿಮದಲ್ಲಿರುವ ಭವನ್ಸ್ ಕಾಲೇಜಿನ ಹತ್ತಿರದ ಜಾನಕೀಭಾಯಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.

​ಬೆಳಗ್ಗೆಯಿಂದಲೇ ಬ್ರಹ್ಮಶ್ರೀ ಪುರೋಹಿತ ಶಂಕರನಾಥ ಆಚಾರ್ಯ ಮತ್ತು ವಿಜಯ ಆಚಾರ್ಯ ದಂಪತಿಗಳ ಯಜಮಾನತ್ವದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ಪುರೋಹಿತರಾದ ಗೋಪಾಲಕೃಷ್ಣ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ, ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ, ಸಂತೋಷ್ ಆಚಾರ್ಯ, ಚೇತನ್ ಆಚಾರ್ಯ ಮತ್ತು ಚೇತನ್ ಆಚಾರ್ಯ ಅವರು ಶ್ರೀ ವಿಶ್ವಕರ್ಮ ಹೋಮ, ದೇವರ ಕಲಶ ಪ್ರತಿಷ್ಠೆ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.

​ನಂತರ ನಡೆದ ಭಜನಾ ಕಾರ್ಯಕ್ರಮದಲ್ಲಿ ಸಮಾಜದ ಆರು ಭಜನಾ ಮಂಡಳಿಗಳು ಭಕ್ತಿಪೂರ್ವಕವಾಗಿ ಸೇವೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ, ಡಾ. ಸುಕನ್ಯಾ ಭಟ್ ನೇತೃತ್ವದ ರಾಧಾಕೃಷ್ಣ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರದರ್ಶನ ಹಾಗೂ ನೃತ್ಯರೂಪಕಗಳನ್ನು ಪ್ರಸ್ತುತಪಡಿಸಿದರು. ಇದರೊಂದಿಗೆ ವಿಜಯ ಶೆಟ್ಟಿ ಮೂಡುಬೆಳ್ಳೆಯವರ ಸಂಗೀತ ರಸಮಂಜರಿ ಕಾರ್ಯಕ್ರಮ ಮತ್ತು ಸಮಾಜದ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹೋತ್ಸವಕ್ಕೆ ವಿಶೇಷ ಕಳೆ ತಂದವು.

​ಈ ಮಹೋತ್ಸವದಲ್ಲಿ ಮಾಜಿ ಸಂಸದೆ ಪೂನಂ ಮಹಾಜನ್ ಭಾಗವಹಿಸಿ, ಪೂಜೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಅವರು ಭಜನಾ ತಂಡದೊಂದಿಗೆ ಕುಳಿತು ಮರಾಠಿ ಭಜನೆಯೊಂದನ್ನು ಹಾಡಿ ಎಲ್ಲರ ಮನ ಗೆದ್ದರು. ಅವರೊಂದಿಗೆ ವಿಲೆ ಪಾರ್ಲೆಯ ಕಾರ್ಪೊರೇಟರ್ ರಾಜೇಶ್ ಷಾ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಎನ್.ಡಿ. ಕೋಟ್ಯಾನ್, ಗೋರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ನಾಯಕ್, ಸಿ.ಎ. ಗಣೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ಮುಂಬೈನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರು ಭಾಗವಹಿಸಿದ್ದರು.

​ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಗಣೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ, ಸಂಸ್ಥೆಯ 80ನೇ ವರ್ಷಾಚರಣಾ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ ಆಚಾರ್ಯ ಕಲ್ಯಾಣಪುರ ಮಾತನಾಡಿ, 80ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ನಡೆಸಲು ರೂಪುರೇಷೆಗಳು ಸಿದ್ಧವಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲು ಸಮಾಜ ಬಾಂಧವರ ಸಹಕಾರ ಅಗತ್ಯ ಎಂದು ತಿಳಿಸಿದರು.

​ಸಭೆಯ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್‌ನ ಅಧ್ಯಕ್ಷರಾದ ರವೀಶ್ ಆಚಾರ್ಯ ಅವರು, ಪ್ರತಿವರ್ಷದ ವಿಶ್ವಕರ್ಮ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಮಾಜ ಬಾಂಧವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲೂ ವಿಶೇಷವಾಗಿ, ಸಂಘದ ಮಹಿಳಾ ವಿಭಾಗದವರು ತಮ್ಮ ಸೇವಾ ಕಾರ್ಯಗಳ ಮೂಲಕ ಕಾರ್ಯಕಾರಿ ಸಮಿತಿಗೆ ಬೆನ್ನೆಲುಬಾಗಿದ್ದಾರೆ ಮತ್ತು ಯುವ ವಿಭಾಗದವರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಲವು ಕಾರ್ಯಗಳಲ್ಲಿ ನೆರವಾಗುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಇತರ ಸಮಾಜ ಬಾಂಧವರು ನಿರಂತರವಾಗಿ ಕೈಜೋಡಿಸುತ್ತಿದ್ದಾರೆ. ಹಿರಿಯ ಸದಸ್ಯರು ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಜನವರಿ 4ರಂದು ನಡೆಯಲಿರುವ 80ನೇ ವರ್ಷಾಚರಣೆಯ ಸಮಾರಂಭಕ್ಕೂ ಎಲ್ಲರ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.

​ವೇದಿಕೆಯ ಮೇಲೆ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಕೆ. ಮೋಹನ್, ಖಜಾಂಚಿಗಳಾದ ಬಾಬುರಾಜ್ ಎಂ. ಆಚಾರ್ಯ, ಜೊತೆ ಖಜಾಂಚಿ ರವೀಂದ್ರ ಆಚಾರ್ಯ ಇನ್ನಂಜೆ, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಆಚಾರ್ಯ ಮತ್ತು ಸುಧೀರ್ ಜೆ. ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಗೋಪಾಲ ಆಚಾರ್ಯ, ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಜೆ. ಆಚಾರ್ಯ ಉಪಸ್ಥಿತರಿದ್ದರು.

​ಸಂಘದ ಆಂತರಿಕ ಲೆಕ್ಕಪರಿಶೋಧಕರಾದ ಹರೀಶ್ ಜಿ. ಆಚಾರ್ಯ ಅವರು ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ಸ್ನಾತಕೋತ್ತರ ಪದವಿ ಪಡೆದ ಸಮಾಜದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ನಂತರ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಸಂಘದ ಮಾಜಿ ಅಧ್ಯಕ್ಷರಾದ ಪಾದೂರು ಜನಾರ್ದನ ಆಚಾರ್ಯ ಅವರು ಬಹುಮಾನ ವಿತರಿಸಿದರು.

​ಮಹೋತ್ಸವದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರಾದ ನಿಟ್ಟೆ ಶ್ರೀ ದಾಮೋದರ ಆಚಾರ್ಯ, ಕೃಷ್ಣ ವಿ. ಆಚಾರ್ಯ, ಕೆ. ಸುಂದರ ಆಚಾರ್ಯ, ಶ್ರೀಧರ ಆಚಾರ್ಯ, ಜಿ.ಟಿ. ಆಚಾರ್ಯ, ಪದ್ಮನಾಭ ಆಚಾರ್ಯ, ಪಿ.ಜೆ. ಆಚಾರ್ಯ, ಶ್ರೀ ಎಂ.ಎ. ಆಚಾರ್ಯ, ಅಶೋಕ್ ಪುರೋಹಿತ್ ಉಪಸ್ಥಿತರಿದ್ದರು.

​ಸಮಾಜ ಬಾಂಧವರಿಗಾಗಿ ಪ್ರಧಾನ ಮಂತ್ರಿ ಯೋಜನೆಯಿಂದ ಲಭ್ಯವಿರುವ ಮೆಡಿಕ್ಲೇಮ್ ಯೋಜನೆಯ ಬಗ್ಗೆ ಮಾಹಿತಿ ಮತ್ತು ನೋಂದಣಿಯನ್ನು ರವಿ ಆಚಾರ್ಯ, ಇರ್ಲ ಅವರ ಸಹಕಾರದೊಂದಿಗೆ ನಡೆಸಲಾಯಿತು. ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಜೆ 7 ಗಂಟೆಗೆ ನಡೆದ ಮಹಾಮಂಗಳಾರತಿಯೊಂದಿಗೆ ಮಹೋತ್ಸವವು ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಶ್ವಕರ್ಮ ಬಾಂಧವರು ಭಾಗಿಯಾಗಿದ್ದರು.



Related posts

ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ, ಸಂಚಾಲಕರು ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೋಮನಾಥ ಪೂಜಾರಿ ಪುನರಾಯ್ಕೆ

Mumbai News Desk

ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಶ್ರಯದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಮಂಜುನಾಥ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕಾಡೆಮಿ ವರ್ಷದ ಪ್ರಶಸ್ತಿ ಪ್ರಧಾನ

Mumbai News Desk

ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ 15ನೇ ವರ್ಷದ ಪೂಜೆಯ ಆಮಂತ್ರಣ ಪತ್ರಿಕೆ ಲೋಕಾರ್ಪಣೆ.

Mumbai News Desk

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.

Mumbai News Desk