ನವೆಂಬರ್ 19 ರ ಬುಧವಾರ ಮಧ್ಯರಾತ್ರಿ ಕುಂದಾಪುರದ ಬಳಿ ನಡೆದ ಮಂದಾರ್ತಿ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ, ಮಹಿಷಾಸುರನ ಪಾತ್ರ ನಿರ್ವಹಿಸಿ ಹೊರಬಂದ ಕಲಾವಿದರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ನಿಧನರಾದವರು ಶೃಂಗೇರಿ ಸಮೀಪದ ನೆಮ್ಮಾರ ನಿವಾಸಿ, ಎರಡನೇ ಮೇಳದ ಪ್ರತಿಭಾವಂತ ಕಲಾವಿದ ಈಶ್ವರ ಗೌಡ ನೆಮ್ಮಾರ.
ಅವರು ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ತಮ್ಮ ಪ್ರದರ್ಶನ ಮುಗಿಸಿ, ಚೌಕಿ ಒಳಗೆ ಪೂರ್ಣ ವೇಷಭೂಷಣ ತೆಗೆಯುವ ಮುನ್ನವೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ತಕ್ಷಣವೇ ಸಹ ಕಲಾವಿದರು ನೆರವಿಗೆ ಧಾವಿಸಿದರೂ, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದರು.
ಈಶ್ವರ ಗೌಡ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.




