ಮುಂಬಯಿ: ಇಲ್ಲಿನ ನಾನಿಲ್ತಾರ್ ಅಭಿಮಾನಿ ಬಳಗದ ಮಹಿಳಾ ಸದಸ್ಯರ ವತಿಯಿಂದ ಇತ್ತೀಚೆಗೆ ‘ಅರಿಶಿನ ಕುಂಕುಮ’ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಬಳಗದ ಹಿರಿಯ ಸದಸ್ಯೆ ರುಕ್ಮಿಣಿ ಸಾಲಿಯನ್ ಅವರ ಸಹಕಾರ ಹಾಗೂ ಮಹಿಳಾ ಸದಸ್ಯರ ಸಮ್ಮುಖದಲ್ಲಿ ಈ ಸಮಾರಂಭವು ಯಶಸ್ವಿಯಾಗಿ ನಡೆಯಿತು.

ಮುಂಬಯಿ ಕುಲಾಲ ಸಂಘದ ದಹಿಸರ್-ಚರ್ಚ್ಗೇಟ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನ ಡಿ. ಕುಲಾಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಅರಿಶಿನ ಕುಂಕುಮದ ಧಾರ್ಮಿಕ ಮಹತ್ವ ಹಾಗೂ ಅದರ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಿಗೆ ಉಡುಗೊರೆ ವಿತರಿಸಿ ಮಾತನಾಡಿದ ರುಕ್ಮಿಣಿ ಸಾಲಿಯನ್, “ಅಭಿಮಾನಿ ಬಳಗದ ಮಹಿಳಾ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಪ್ರತಿಯೊಂದು ಕಾರ್ಯವನ್ನೂ ಯಶಸ್ವಿಯಾಗಿ ಪೂರೈಸಲು ಸಾಧ್ಯ,” ಎಂದು ಕರೆ ನೀಡಿದರು.

ಬಳಗದ ಅಧ್ಯಕ್ಷ ಹರೀಶ್ ಡಿ. ಮೂಲ್ಯ ಮಾತನಾಡಿ, “ಮಹಿಳೆಯರ ಸಂಘಟಿತ ಶಕ್ತಿಯೇ ನಮ್ಮ ಬಳಗಕ್ಕೆ ಆನೆ ಬಲ ತಂದಿದೆ. ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋಣ,” ಎಂದರು. ಮಹಿಳಾ ಸದಸ್ಯೆ ಸರೋಜಾ ಎಚ್. ಮೂಲ್ಯ ಅವರು ಮಾತನಾಡಿ, ಸದಸ್ಯರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಂದಿನ ವರ್ಷ ಈ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲರ ಬೆಂಬಲ ಕೋರಿದರು.
ವೇದಿಕೆಯಲ್ಲಿ ವನಿತಾ ಅಂಚನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಚಾಲಕ ಕೃಷ್ಣ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಿನಿ ಎನ್. ಬಂಜನ್ ಕಾರ್ಯಕ್ರಮ ನಿರೂಪಿಸಿದರೆ, ಅರ್ಚನಾ ಎಸ್. ಕುಲಾಲ್ ವಂದಿಸಿದರು. ಹೇಮಲತಾ ಸಾಲಿಯನ್ ಅವರು ಆಗಮಿಸಿದ ಸದಸ್ಯರಿಗೆ ವಿಶೇಷ ಉಡುಗೊರೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಸಾಲಿಯನ್, ದಿವ್ಯ ಸಾಲಿಯನ್, ದಿನೇಶ್ ಮೂಲ್ಯ, ದಿನೇಶ್ ಬಂಗೇರ, ರೋಹಿದಾಸ್ ಬಂಜನ್, ಲೋಕೇಶ್ ಸಾಲಿಯನ್, ಕೇಶವ ಬಂಜನ್, ಶ್ರೀಕಾಂತ್ ಮೂಲ್ಯ ಹಾಗೂ ನಾರಾಯಣ ಬಂಜನ್ ಸೇರಿದಂತೆ ಬಳಗದ ಪ್ರಮುಖರು ಪಾಲ್ಗೊಂಡಿದ್ದರು.




