32 C
Mumbai
March 7, 2026
Mumbai News Kannada
ಸುದ್ದಿ

ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ ಸಂಪನ್ನ





ದೇಶಭಕ್ತಿ ಹಾಗೂ ಈಶ ಭಕ್ತಿ ಮೇಳೈಸಿದಾಗ ಬದುಕು ಪರಿಪೂರ್ಣ: ಕೊಂಡೆವೂರು ಶ್ರೀ

ಚಿತ್ರ ವರದಿ: ದಿನೇಶ್ ಕುಲಾಲ್

ಮಂಗಳೂರು: “ಧಾರ್ಮಿಕ ಕೇಂದ್ರಗಳ ಮೂಲಕ ಭಗವಂತನ ಭಕ್ತಿಯೊಂದಿಗೆ ದೇಶದ ಭಕ್ತಿಯೂ ಜಾಗೃತಗೊಳ್ಳಬೇಕು. ದೇಶಭಕ್ತಿ ಹಾಗೂ ಈಶ ಭಕ್ತಿ ಮೇಳೈಸಿದಾಗ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ” ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

​ನಗರದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 11 ರಿಂದ 14ರ ವರೆಗೆ ನಡೆದ ಕುಂಭ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

​”ನಮ್ಮ ಬದುಕಿಗೆ ದಾರಿ ತೋರಿಸುವ ಕೇಂದ್ರಗಳೇ ದೇವಸ್ಥಾನಗಳು. ಭಗವಂತ ಬಿಂಬವಾದರೆ ಭಕ್ತರು ಪ್ರತಿಬಿಂಬ. ಬಿಂಬವು ವೈಭವದಲ್ಲಿದ್ದರೆ ಭಕ್ತರೂ ಸುಖ-ಸಮೃದ್ಧಿ ಅನುಭವಿಸಲು ಸಾಧ್ಯ. ನಾವು ಕೂಡಿಟ್ಟ ಹಣವು ಪುಣ್ಯದ ಸಂಪತ್ತಾಗಬೇಕು. ಸತ್ಕಾರ್ಯಗಳ ಮೂಲಕ ಸಂಪತ್ತನ್ನು ಪುಣ್ಯವಾಗಿ ಪರಿವರ್ತಿಸಿದಾಗ ಬದುಕು ಪಾವನವಾಗುತ್ತದೆ. ಭಗವಂತ ನಮ್ಮೊಳಗೇ ಇದ್ದು, ಆತನನ್ನು ಕಾಣಲು ಶುದ್ಧ ಅಂತಃಕರಣ ಹಾಗೂ ಜಪದ ಅವಶ್ಯಕತೆಯಿದೆ” ಎಂದು ಅವರು ನುಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸುಂದರ ಕುಲಾಲ್ ಶಕ್ತಿನಗರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕ್ಷೇತ್ರದ ಅಭಿವೃದ್ಧಿಗೆ ಭಕ್ತರು ಹಾಗೂ ದಾನಿಗಳ ಸಹಕಾರವೇ ಶಕ್ತಿ. ಕುಲಾಲ ಸಮಾಜದ ಬಂಧುಗಳು ಹಾಗೂ ವಿವಿಧ ಸಂಘಟನೆಗಳು ನೀಡಿದ ಹೊರೆಕಾಣಿಕೆ ಮತ್ತು ಸಹಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಬಾಕಿ ಇರುವ ಕಾರ್ಯಗಳಿಗೂ ಇದೇ ರೀತಿಯ ಸಹಕಾರ ಮುಂದುವರಿಯಲಿ” ಎಂದರು.

​ಮುಂಬಯಿ ಉದ್ಯಮಿ ಡಾ. ಸುರೇಖಾ ರತನ್ ಕುಲಾಲ್ ಮಾತನಾಡಿ, “ಧಾರ್ಮಿಕ ಕ್ಷೇತ್ರಗಳ ಮೂಲಕ ಸಮಾಜದ ಭಕ್ತರನ್ನು ಒಗ್ಗೂಡಿಸುವ ಕಾರ್ಯ ನಡೆಯಬೇಕು. ಇದರಿಂದ ಯುವ ಜನಾಂಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸಾಧ್ಯ. ದೇಶ-ವಿದೇಶಗಳಲ್ಲಿರುವ ಕುಲಾಲ ಬಂಧುಗಳು ಪ್ರತಿ ವರ್ಷ ಕುಂಭ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು” ಎಂದು ಆಶಿಸಿದರು.

​ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ಕ್ಷೇತ್ರದ ಪಾವಿತ್ರತೆಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಮುಖ ಗೋವರ್ಧನ ಶೆಟ್ಟಿ, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಮೂಲ್ಯ, ನಿವೃತ್ತ ವಲಯ ಅರಣ್ಯ ಅಧಿಕಾರಿ ಕೆ. ಕೃಷ್ಣಪ್ಪ ಪುತ್ತೂರು, ಕೆಎಫ್‌ಸಿಎಸ್‌ಸಿ ಡಿಪೋ ಮ್ಯಾನೇಜರ್ ರವೀಂದ್ರ ಸಾಲ್ಯಾನ್, ಉದ್ಯಮಿ ಕೊರಗಪ್ಪ ಬಂಜನ್ ಬರೋಡಾ, ಭರತ್ ಕಾರ್ಪೊರೇಶನ್ ಮಾಲೀಕ ಭರತ್ ರಾಜ್ ಉಪಸ್ಥಿತರಿದ್ದರು.

​ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ದಾಮೋದರ್, ಸೇವಾ ಸಮಿತಿ ಅಧ್ಯಕ್ಷ ಕಿರಣ್ ಅಟ್ಲೂರು, ಮಾತೃಮಂಡಳಿ ಅಧ್ಯಕ್ಷೆ ಮಮತಾ ದೇವದಾಸ್ ಉಪಸ್ಥಿತರಿದ್ದರು. ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸ್ವಾಗತಿಸಿದರು. ಪ್ರವೀಣ್ ಬಸ್ತಿ ಹಾಗೂ ನವೀನ್ ಕುಲಾಲ್ ಪುತ್ತೂರು ನಿರೂಪಿಸಿದರು. ಕಾರ್ಯದರ್ಶಿ ಗಿರಿಧರ್ ಜೆ. ಮೂಲ್ಯ ವಂದಿಸಿದರು.

ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಆಶೀರ್ವಾದದೊಂದಿಗೆ, ತಂತ್ರಿ ಅನಂತ ಉಪಾಧ್ಯಾಯ ಹಾಗೂ ಪ್ರಧಾನ ಅರ್ಚಕ ಜನಾರ್ದನ ಭಟ್ ನೇತೃತ್ವದಲ್ಲಿ ಮಹೋತ್ಸವ ನಡೆಯಿತು.

  • ಫೆ. 11: ಸುಮತಿ ಮತ್ತು ಶ್ರೀನಿವಾಸ್ ವಾಮಂಜೂರು ಅವರಿಂದ ಭಜನೆ. ಮಧು ಮತ್ತು ಗುರುಪ್ರಸಾದ್ ಪೂಜಾ ವಿಧಿಗಳಿಗೆ ಚಾಲನೆ ನೀಡಿದರು. ಜಾನಪದ ನೃತ್ಯ, ವಾಸ್ತು ಹೋಮಗಳು ಜರುಗಿದವು.
  • ಫೆ. 12: ದೇವರ ಸುತ್ತುಬಲಿ, ಮಹಾರಥೋತ್ಸವ, ಪಲ್ಲಪೂಜೆ, ಬಟ್ಟಲು ಕಾಣಿಕೆ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಭರತನಾಟ್ಯ ಕಾರ್ಯಕ್ರಮಗಳು ರಂಜಿಸಿದವು.
  • ಫೆ. 13: ತುಲಾಭಾರ ಸೇವೆ, ಮಹಾಪೂಜೆ, ಕುಣಿತ ಭಜನೆ ಹಾಗೂ ಪೇಟೆ ಸವಾರಿ ನಡೆಯಿತು. ರಾತ್ರಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.
  • ಫೆ. 14: ಸಂಪ್ರೋಕ್ಷಣೆ ಹಾಗೂ ಮಹಾಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.

​ಕಾರ್ಯಕ್ರಮದ ಯಶಸ್ಸಿಗೆ ದಯಾನಂದ ಪಿ.ಎಸ್. ಕುತ್ತಾರು, ಮೋಹನದಾಸ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ. ಮುಡಿಪು, ಆನಂದ ಪಿ. ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಂ. ಬಾಳ ಶ್ರಮಿಸಿದರು.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ  ಶೆಟ್ಟಿ ಓಪನ್ ಏರ್ ಗಾರ್ಡನ್” ಹೆಸರಿನಲ್ಲಿ ತೆರೆದ ವೇದಿಕೆ  ನಿರ್ಮಾಣ

Mumbai News Desk

ಅಮೂಲ್ಯ ಪತ್ರಿಕೆಯ 25ರ ಸಂಭ್ರಮಾಚರಣೆಯಲ್ಲಿ ಸಂಭ್ರಮಿಸಿದ ಕವಿ ಗೋಷ್ಠಿ.

Mumbai News Desk

ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ

Mumbai News Desk

ಮುಂಬೈಯಲ್ಲಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅವರ ಷಷ್ಠಬ್ದಿ ಮಹೋತ್ಸವದ ನಿಮ್ಮಿತ ಧಾರ್ಮಿಕ ಕಾರ್ಯಕ್ರಮಗಳು ಆರಂಭ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk