ಮುಂಬಯಿ: ಶ್ರೀ ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇದರ 12ನೇ ವರ್ಷದ ತಿರುಗಾಟದ ಅವಧಿಯಲ್ಲಿ ಮುಂಬಯಿ ಪ್ರವಾಸ ಕೈಗೊಳ್ಳಲಾಗಿದ್ದು, ಜುಲೈ 10ರ ಶುಕ್ರವಾರ ಥಾಣೆಯ ಡಾ. ಕಾಶೀನಾಥ್ ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ ನಡೆಯಿತು.
ಥಾಣೆ ವರ್ತಕ ನಗರ ಕನ್ನಡ ಸಂಘದ ಆಶ್ರಯದಲ್ಲಿ ಮೂಡಿಬಂದ ಈ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ವಿದ್ವಾಂಸರು, ಉದ್ಯಮಿಗಳು ಹಾಗೂ ಕಲಾ ಪೋಷಕರಾದ ಪೊಲ್ಯ ಉಮೇಶ್ ಶೆಟ್ಟಿಯವರು ಪ್ರಾಯೋಜಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೊಲ್ಯರು, “ಯಕ್ಷಗಾನವು ನಮ್ಮ ಸಂಸ್ಕೃತಿಯ ಆರಾಧನೆಯನ್ನು ಮಾಡುವಂತಹ ಕರಾವಳಿಯ ಪ್ರಸಿದ್ಧ ಕಲೆಯಾಗಿದೆ. ಕಲಾವಿದರ ಶ್ರಮದ ಮೂಲಕ ಪೌರಾಣಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಅದ್ಭುತ ಕೆಲಸವನ್ನು ಯಕ್ಷಗಾನವು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಹಾಗಾಗಿ ಈ ಮಹಾನಗರದಲ್ಲಿ ಇಂತಹ ವಿಶಿಷ್ಟ ಪ್ರದರ್ಶನಗಳಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸಿಕೊಡಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಥಾಣೆಯ ಉದ್ಯಮಿ ಗಿಳಿಯಾರು ರತ್ನಾಕರ ಶೆಟ್ಟಿ, ಕಲಾಜಗತ್ತು ವಿಜಯ್ ಕುಮಾರ್, ವರ್ತಕ ನಗರ ಕನ್ನಡ ಸಂಘದ ಅಧ್ಯಕ್ಷರಾದ ಶೇಖರ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶಿವಪ್ರಸಾದ್ ಪೂಜಾರಿ, ಮೋಹನ್ ರೈ ಕರ್ನೂರು, ಹಿರಿಯ ಕಲಾಪೋಷಕ ಸಿ.ಎಂ. ಶೆಟ್ಟಿ, ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ, ನವೀನ್ ಶೆಟ್ಟಿ, ರತ್ನಾಕರ ಶೆಟ್ಟಿ ಹೊಸೂರು ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮೇಳದ ಪ್ರಸಿದ್ಧ ಭಾಗವತರಾದ ಆನಂದ ಅಂಕೋಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
previous post





