
ಉಡುಪಿಯ ಕೆ.ಎಮ್. ಮಾರ್ಗದಲ್ಲಿರುವ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಬುಧವಾರದಂದು ಶ್ರೀ ಗುರು ಪೂರ್ಣಿಮಾ ಕಾರ್ಯಕ್ರಮ ಹಾಗೂ ಭಜನಾ ಮಹೋತ್ಸವವು ಅತ್ಯಂತ ವೈಭವ ಮತ್ತು ಭಕ್ತಿಭಾವದಿಂದ ಜರುಗಿತು. ಈ ಶುಭ ಸಂದರ್ಭದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ ಹಾಗೂ ಸೀಯಾಳ ಅಭಿಷೇಕಗಳನ್ನು ನೆರವೇರಿಸಿ, ಮನಮೋಹಕ ಹೂವಿನ ಅಲಂಕಾರದೊಂದಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಮಂದಿರದ ಅರ್ಚಕರಾದ ಸತ್ಯೇಂದ್ರ ಮಹಾರಾಜ್ ಅವರು ದೀಪ ಬೆಳಗಿಸುವ ಮೂಲಕ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಹರ್ಷ ಬಳಗದ ಸದಸ್ಯರ ಸುಶ್ರಾವ್ಯ ಭಜನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ದಿನವಿಡೀ ನಿರಂತರ ಭಜನಾ ಸೇವೆಯು ನೆರವೇರಿ ಭಕ್ತರ ಮನಸೆಳೆಯಿತು. ಶಾಸಕರಾದ ಯಶ್ಪಾಲ್ ಸುವರ್ಣ ಅವರು ಮಂದಿರಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದಾಗ, ಮಂದಿರದ ವತಿಯಿಂದ ಅವರಿಗೆ ಗೌರವಪೂರ್ವಕವಾಗಿ ಪ್ರಸಾದ ನೀಡಿ ಸನ್ಮಾನಿಸಲಾಯಿತು. ಈ ಧಾರ್ಮಿಕ ಉತ್ಸವದಲ್ಲಿ ಮಂದಿರದ ಟ್ರಸ್ಟಿಗಳಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು, ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ, ಪ್ರಮುಖರಾದ ವಿಜಿ ಶೆಟ್ಟಿ, ವಿಶ್ವನಾಥ್ ಸನಿಲ್, ಶ್ರೀಮತಿ ಬಿಂದು ಶೆಟ್ಟಿ, ಹರ್ಷದ ಸೂರ್ಯ ಪ್ರಕಾಶ್, ತೋನ್ಸೆ ನವೀನ್ ಶೆಟ್ಟಿ, ಮೋಹನ್ ಚಂದ್ರ ನಂಬಿಯಾರ್, ತಾರಾನಾಥ್ ಮೇಸ್ತ, ಅರ್ಚಕರಾದ ಸುಧಾಕರ್ ಶಾಂತಿ ಮತ್ತು ಓಂ ಪ್ರಕಾಶ್ ಸೇರಿದಂತೆ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನದ ಮಹಾಪೂಜೆಯ ನಂತರ ಆಯೋಜಿಸಲಾಗಿದ್ದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.





