28.5 C
Mumbai
August 13, 2026
Mumbai News Kannada
ತುಳುನಾಡು

ನಾಡಿನ ಸಂಸ್ಕೃತಿ ಉಳಿಸುವಲ್ಲಿ ಕಟೀಲು ಕ್ಷೇತ್ರದ ಪಾತ್ರ ಅನನ್ಯ: ಸಚಿವ ಯು. ಟಿ. ಖಾದರ್ (೨೬ನೇ ವರ್ಷದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ)





ವರದಿ: ದಿನೇಶ್ ಕುಲಾಲ್ | ಚಿತ್ರ: ಭಾಸ್ಕರ್ ಕಾಂಚನ್

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬೈ-ಯುಎಇ ಪರವಾಗಿ, ಪದ್ಮನಾಭ ಕಟೀಲು ದುಬೈ ಅವರ ಆಯೋಜನೆಯಲ್ಲಿ ೨೬ನೇ ವರ್ಷದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಅರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಅವರ ಶುಭ ಆಶೀರ್ವಾದದೊಂದಿಗೆ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆದ ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು. টি. ಖಾದರ್ ಮಾತನಾಡಿ, “ಅತ್ಯಂತ ಪುರಾತನ ಹಾಗೂ ಶಕ್ತಿ ಕೇಂದ್ರವಾದ ಕಟೀಲು, ಈ ನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಹಿರಿಯರನ್ನು ಸ್ಮರಿಸುವ ಈ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾದದ್ದು,” ಎಂದು ನುಡಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ. ಮೋಹನ್ ಆಳ್ವ, “ಈ ಪವಿತ್ರ ಕಾರ್ಯಕ್ರಮ ಮಾಡುವುದು ಮತ್ತು ನೋಡುವುದು ನಮ್ಮೆಲ್ಲರ ಭಾಗ್ಯ. ಯಕ್ಷಗಾನದ ಪೋಷಕರಾದ ಪದ್ಮನಾಭ ಕಟೀಲು ಅವರು ಅಸ್ರಣ್ಣರ ಮೇಲಿಟ್ಟಿರುವ ನಂಬಿಕೆಯಿಂದ ೧೦೦ ಯಕ್ಷಗಾನ ಬಯಲಾಟ ಪ್ರದರ್ಶನಗಳನ್ನು ನೀಡಿದ್ದಾರೆ. ೨೬ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ನಡೆಸಿರುವುದು ಅವರ ಶ್ರದ್ಧೆಗೆ ಸಾಕ್ಷಿ,” ಎಂದರು. ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಿದರು.

ಸಾಧಕರಿಗೆ ಪ್ರಶಸ್ತಿ ಹಾಗೂ ಗೌರವಾರ್ಪಣೆ:

  • ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ: ಹರೀಶ್ ಸೇರಿಗಾರ್ (ಎಕ್ಮೆ ಬಿಲ್ಡರ್ಸ್, ದುಬೈ)
  • ದಾರ್ಶನಿಕ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸ್ಮೃತಿ ಗೌರವ: ಚಂದ್ರಹಾಸ್ ಎಂ. ರೈ (ಬೊಳ್ನಾಡು ಗುತ್ತು)
  • ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಸ್ಮೃತಿ ಗೌರವ: ರವಿಶಂಕರ ವಳಕ್ಕುಂಜ
  • ಶ್ರೀ ಕಟೀಲು ಮೇಳ ಚೆಂಡೆಯ ಗುರಿಕಾರ ನಿಡ್ಲೆ ನರಸಿಂಹ ಭಟ್ ಸ್ಮೃತಿ ಗೌರವ: ಮೋಹನ್ ಶೆಟ್ಟಿಗಾರ್ (ಶ್ರೀ ಕಟೀಲು ಮೇಳ)
  • ಕಲಾವಿದ ಸನ್ಮಾನ: ನಾರಾಯಣ ಕುಲಾಲ್ (ಶ್ರೀ ಕಟೀಲು ಮೇಳ)
  • ಹೊರನಾಡ ಕಲಾಪೋಷಕ ಗೌರವ: ದಿನೇಶ್ ಶೆಟ್ಟಿ ಕೊಟ್ಟಿಂಜ (ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇ)
  • ಹೊರನಾಡ ಕಲಾವಿದ ಗೌರವ: ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ
  • ಹೊರನಾಡ ಸಮಾಜ ಸೇವಕ ಗೌರವ: ಸುದರ್ಶನ ಹೆಗ್ಡೆ ಕಾರ್ಕಳ
  • ಹೊರನಾಡ ಸಂಘಟನಾ ಗೌರವ: ದೀಪಕ್ ಎಸ್. ಪಿ. (ಅಧ್ಯಕ್ಷರು, ದುಬೈ ಬಿಲ್ಲವಾಸ್)
  • ಹೊರನಾಡ ಭಾಷಾ ಗೌರವ (ತುಳು-ಕನ್ನಡ): ದಯಾನಂದ ಕಿರೋಡಿಯನ್ (ಸ್ಥಾಪಕ ಸದಸ್ಯರು, ಯಕ್ಷಮಿತ್ರರು, ದುಬೈ)
  • ಸಂಸ್ಥೆಯ ವಿಶೇಷ ಗೌರವಾರ್ಪಣೆ: ಬಾಬು ಎಸ್. ಶೆಟ್ಟಿ ಪೆರಾರ (ಮಲಾಡ್ ಪ್ರಸಾದ್ ಹೋಟೆಲ್ ಮಾಲಕರು, ಬಜಪೆ ಬಂಟರ ಸಂಘದ ಮಾಜಿ ಅಧ್ಯಕ್ಷರು), ಚಂದ್ರಶೇಖರ ಬೆಳ್ಚಡ ಕಟೀಲು (ಆಡಳಿತ ಮೊಕ್ತೇಸರರು, ಶ್ರೀ ಭಗವತೀ ಕ್ಷೇತ್ರ ಸಸಿಹಿತ್ಲು), ಡಾ. ಅರುಣೋದಯ ರೈ ಬಿಳಿಯೂರುಗುತ್ತು (ಸಿಎಂಡಿ, ಸೈಂಟ್ ಆಗ್ನೆಸ್ ಸ್ಕೂಲ್, ಮೀರಾ ಭಯಂದರ್).

ನಿರಂತರ ೨೫ ವರ್ಷಗಳ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದ ವಿಶೇಷತೆಗಾಗಿ ಐಕಳ ಹರೀಶ್ ಶೆಟ್ಟಿ ಹಾಗೂ ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷೀಯ ಭಾಷಣ ಮಾಡಿದ ಐಕಳ ಹರೀಶ್ ಶೆಟ್ಟಿ, “ಪದ್ಮನಾಭ ಕಟೀಲು ಅವರಂತಹ ಸಾಮಾನ್ಯ ಸೇವಕರೊಂದಿಗೆ ನಾನು ನಿರಂತರವಾಗಿ ಇರುತ್ತೇನೆ,” ಎಂದು ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ಪದ್ಮನಾಭ ಕಟೀಲು ದಂಪತಿಯನ್ನೂ ಗೌರವಿಸಲಾಯಿತು.

ವೇದಿಕೆಯಲ್ಲಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅಗರಿ ರಾಘವೇಂದ್ರ ರಾವ್, ಗಿರೀಶ್ ಎಂ. ಶೆಟ್ಟಿ, ರವಿ ಶೆಟ್ಟಿಗಾರ್ ಕಾರ್ಕಳ, ಸಂದೀಪ್ ಬಿ. ಕೆ. ಕೂಳೂರು, ದಯಾನಂದ ಶೆಟ್ಟಿ ಹಿರಿಯಡ್ಕ, ನಿಡ್ಲೆ ರಾಮ್ ಭಟ್, ಪ್ರಮೋದ್ ಭಟ್, ಶ್ರೀಕಾಂತ ಶೆಟ್ಟಿ ಅಗರಿ, ಧನಂಜಯ ಶೆಟ್ಟಿಗಾರ್, ಪ್ರೇಮಾನಂದ ಕುಲಾಲ್ ಕೊಡಿಕಲ್, ರವಿ ಕೋಟ್ಯಾನ್ ಶಿಬರೂರು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಡಾ. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಕಾರ್ಯಕ್ರಮ ನಿರೂಪಿಸಿ, ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು. ಶ್ರೀಕ್ಷೇತ್ರ ಕಟೀಲಿನ ೭ ಮೇಳಗಳ ಆಯ್ದ ಕಲಾವಿದರಿಂದ ‘ದೇವ ಸಂಕಲ್ಪ’ ಯಕ್ಷಗಾನ ಪ್ರದರ್ಶನಗೊಂಡಿತು. ದೇಶ-ವಿದೇಶಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.



Related posts

ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk

ಹೊಸಬೆಟ್ಟಿನಲ್ಲಿ ಅಹೋರಾತ್ರಿ ತಾಳಮದ್ದಳೆ: ಶಿವ-ಶಕ್ತಿ ಸಮಾಗಮ, ಇಂದ್ರಜಿತು ಕಾಳಗದ ವೈಭವ

Mumbai News Desk

ಮೂಲ್ಕಿ : ವಿಜಯಾ ರೈತರ ಸೇವಾ ಸಂಘದ ಮಹಾಸಭೆ ಸದಸ್ಯರಿಗೆ ಶೇ ೧೨ ಡಿವಿಡೆಂಡ್

Mumbai News Desk

ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಚಾಲನೆ. ಕಂಬಳ ತುಳುನಾಡಿನ ಸಂಸ್ಕೃತಿಯ ಪ್ರತೀಕ:ಐಕಳ ಹರೀಶ್ ಶೆಟ್ಟಿ

Mumbai News Desk