
ಚಿತ್ರ ವರದಿ: ದಿನೇಶ್ ಕುಲಾಲ್
ನವಿ ಮುಂಬಯಿ:
ಉಡುಪಿಯ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ, ಶ್ರೀ ಡಾ. ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ‘ವಿಶ್ವ ಗೀತಾ ಪರ್ಯಾಯ’ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಬಳಿಕ, ತಮ್ಮ 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ನವಿ ಮುಂಬೈನ ವಾಶಿಯಲ್ಲಿರುವ ನೂತನ ಶಾಖಾ ಮಠದಲ್ಲಿ ಆಚರಿಸಲಿದ್ದಾರೆ. ಆಗಸ್ಟ್ 11ರ ಮಂಗಳವಾರದಂದು ನವಿ ಮುಂಬಯಿಯಲ್ಲಿ ಶ್ರೀಗಳ ‘ಪುರಪ್ರವೇಶ’ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ಜರುಗಿತು.
ನವಿ ಮುಂಬಯಿಯ ವಾಶಿ ಸೆಕ್ಟರ್-29ರಲ್ಲಿರುವ ಶ್ರೀ ಗುರು ವಾಯುರಪ್ಪನ್ ದೇವಾಲಯದಿಂದ ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳ ಪುರಪ್ರವೇಶ ನಡೆಯಿತು. ಸೆಕ್ಟರ್-12ರಲ್ಲಿ ನೂತನವಾಗಿ ಪ್ರಾರಂಭಗೊಂಡ ಉಡುಪಿ ಶ್ರೀ ಪುತ್ತಿಗೆ ಮಠಕ್ಕೆ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.

ಈ ಸಂದರ್ಭದಲ್ಲಿ ಜರಿ ಮೇರಿ ದಿನೇಶ್ ಕೋಟ್ಯಾನ್ ಬಳಗವು ಮೆರವಣಿಗೆಯದ್ದಕ್ಕೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ವೇಷಭೂಷಣಗಳು, ಯಕ್ಷಗಾನ, ಚೆಂಡೆ ಹಾಗೂ ವಾದ್ಯ ಘೋಷಗಳೊಂದಿಗೆ ಮೆರವಣಿಗೆಗೆ ವಿಶೇಷ ಮೆರಗನ್ನು ನೀಡಿತು. ಶ್ರೀ ಮೂಕಾಂಬಿಕಾ ದೇವಸ್ಥಾನದ ಮಹಿಳಾ ತಂಡದ ಸದಸ್ಯರಿಂದ ಭಜನೆ, ಭಕ್ತರಿಂದ ಕುಣಿತ ಭಜನೆ ಹಾಗೂ ಪರಿಸರದ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಸಾಮಾಜಿಕ ಮುಖಂಡರು ಮತ್ತು ವಿವಿಧ ಜಾತೀಯ ಸಂಸ್ಥೆಗಳ ಪ್ರಮುಖರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀಗಳು ಆಗಸ್ಟ್ 12ರಿಂದ ಸೆಪ್ಟೆಂಬರ್ 26, 2026ರವರೆಗೆ 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಸ್ವೀಕರಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ‘ಸಹಸ್ರ ಕಂಠ ಗೀತಾ ಪಾರಾಯಣ’ ಹಾಗೂ ‘ಕೋಟಿ ಗೀತಾ ಲೇಖನ ಯಜ್ಞ’ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ.

ಚಾತುರ್ಮಾಸ್ಯ ವ್ರತ ಸಮಿತಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂಬಯಿಯ ಹೆಸರಾಂತ ಉದ್ಯಮಿ ಶಿವರಾಮ ಜಿ. ಶೆಟ್ಟಿ ಅಜೆಕಾರು, ಕಾರ್ಯಾಧ್ಯಕ್ಷರಾಗಿ ನೇರುಳ್ ಶ್ರೀ ಬಾಲಾಜಿ ಮಂದಿರದ ಕಾರ್ಯಾಧ್ಯಕ್ಷ, ಉದ್ಯಮಿ, ಸಮಾಜಸೇವಕ ಗೋಪಾಲ ವೈ. ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷರಾಗಿ ಎನ್. ಆರ್. ರಾವ್ ಹಾಗೂ ಡಾ. ಸುರೇಶ್ ರಾವ್, ಉಪಾಧ್ಯಕ್ಷರಾಗಿ ವಾಮನ ಹೊಳ್ಳ ಚೆಂಬೂರು, ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ, ಉದ್ಯಮಿ ಹಾಗೂ ಸಮಾಜಸೇವಕ ಬಿ. ಆರ್. ಶೆಟ್ಟಿ, ಕಾರ್ಯದರ್ಶಿಯಾಗಿ ದಿನೇಶ್ ಕುಲಾಲ್, ಸಹ ಕಾರ್ಯದರ್ಶಿಗಳಾಗಿ ವಿದ್ವಾನ್ ರಾಘವೇಂದ್ರ ಜಮದಗ್ನಿ, ವಿದ್ವಾನ್ ನಾಗೇಂದ್ರ ಆಚಾರ್ಯ ಕುರ್ಲಾ ಹಾಗೂ ವಿದ್ವಾನ್ ಗುರುಪ್ರಸಾದ್ ಘನ್ಸೋಲಿ, ಖಜಾಂಚಿಯಾಗಿ ಉದ್ಯಮಿ ಸಂತೋಷ್ ಸಿ. ಶೆಟ್ಟಿ, ಸಹ ಖಜಾಂಚಿಯಾಗಿ ಗುರುಪ್ರಸಾದ್ ಚೆಂಬೂರು, ಸಂಚಾಲಕರಾಗಿ ಸುಧೀರ್ ಆರ್. ಎಲ್. ಶೆಟ್ಟಿ ಹಾಗೂ ಇತರ ಸಮಿತಿ ಸದಸ್ಯರು ಶ್ರೀಗಳ 53ನೇ ಚಾತುರ್ಮಾಸ್ಯ ವ್ರತ ದೀಕ್ಷಾ ಮಹೋತ್ಸವವನ್ನು ಅತ್ಯಂತ ಅದ್ದೂರಿಯಿಂದ ನಡೆಸಲು ಸಂಪೂರ್ಣ ಸಹಕಾರ ನೀಡಿದರು.
ಮುಂಬಯಿ ಮಹಾನಗರ ಹಾಗೂ ದೇಶ-ವಿದೇಶಗಳ ಸದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ, ಪಾರಾಯಣ ಮತ್ತು ಪ್ರವಚನಗಳಲ್ಲಿ ಪಾಲ್ಗೊಂಡು, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸುಮಾರು 750 ವರ್ಷಗಳ ಗುರುಪರಂಪರೆಯಿಂದ ಪೂಜಿಸಲ್ಪಡುತ್ತಿರುವ ಶ್ರೀ ವಿಠಲದೇವರ ಪೂರ್ಣಾನುಗ್ರಹ ಹಾಗೂ ಪ್ರಸಾದ ಸ್ವೀಕರಿಸಿ ಚಾತುರ್ಮಾಸ್ಯ ವ್ರತ ದೀಕ್ಷೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.




