ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಪಶ್ಚಿಮ ಇದರ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ದಿನಾಂಕ 30.08.2026 ರಂದು ಮಂದಿರದ ಸದಸ್ಯರು ಠಾಕೂರ್ಲಿ ಪರಿಸರದಲ್ಲಿರುವ ಗುರುಕಲಾಶ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಈ ಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ಅಗತ್ಯವಿರುವ ದವಸ-ಧಾನ್ಯ, ಊಟೋಪಚಾರ ಹಾಗೂ ಔಷಧ ಸಾಮಗ್ರಿಗಳನ್ನು ಮಂದಿರದ ವತಿಯಿಂದ ವಿತರಿಸಲಾಯಿತು. ಅಲ್ಲದೆ, ವೃದ್ಧಾಶ್ರಮದ ವೈದ್ಯರ ತಂಡವನ್ನು ಶಾಲು ಹೊದಿಸಿ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.


ಮಂದಿರದ ಸದಸ್ಯರು ವಯೋವೃದ್ಧರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಯೋಗಕ್ಷೇಮವನ್ನು ವಿಚಾರಿಸಿ, ಅವರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು ಹಾಗೂ ಆಶೀರ್ವಾದ ಪಡೆದರು. ವೃದ್ಧರ ಮುಖದಲ್ಲಿ ಸಂತೋಷ ಮೂಡಿಸುವ ಮೂಲಕ ಈ ಸೇವಾ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀ ಸುಮಿತ್ ಚೌದರಿ, ಕಾರ್ಯಾಧ್ಯಕ್ಷರು, ಬಿಜೆಪಿ–ಒಬಿಸಿ ವಿಭಾಗ, ಡೊಂಬಿವಲಿ–ಠಾಕೂರ್ಲಿ, ಮಂದಿರದ ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಉಪಾಧ್ಯಕ್ಷರಾದ ಶ್ರೀ ಅರವಿಂದ್ ಪದ್ಮಶಾಲಿ, ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ, ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಸೇರಿದಂತೆ ಮಂದಿರದ ಅನೇಕ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾದ ಈ ಸೇವಾ ಕಾರ್ಯಕ್ರಮವು “ಸೇವೆಯೇ ಶ್ರೇಷ್ಠ ಸಾಧನೆ” ಎಂಬ ಮಹತ್ವದ ಸಂದೇಶವನ್ನು ಸಾರಿತು. ಸಮಾಜದ ಹಿರಿಯರೊಂದಿಗೆ ಆತ್ಮೀಯತೆಯಿಂದ ಬೆರೆತು, ಅವರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳತ್ತ ಮಂದಿರದ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.
ಸೇವೆ – ಸಹಕಾರ – ಸಮಾಜಮುಖಿ ಬದ್ಧತೆ ಎಂಬ ಆಶಯದೊಂದಿಗೆ ಸುವರ್ಣ ಸಂಭ್ರಮದ ಈ ಕಾರ್ಯಕ್ರಮ ಸ್ಮರಣೀಯವಾಗಿ ನೆರವೇರಿತು.




