ಮುಂಬೈನ ಪ್ರಸಿದ್ಧ ಲಾಲ್ಬಾಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಗಣೇಶೋತ್ಸವದ ಸಂಭ್ರಮದ ನಡುವೆ ರವಿವಾರ ಮುಂಜಾನೆ ದಾರುಣ ವಿದ್ಯುತ್ ಆಘಾತ (ಎಲೆಕ್ಟ್ರೋಕ್ಯೂಷನ್) ಘಟನೆ ಸಂಭವಿಸಿದ್ದು, ಎಂಟು ವರ್ಷದ ಮಗು ಮತ್ತು 33 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಕಲಾಚೌಕಿಯ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ಕಲಾಚೌಕಿ ವಿಭಾಗ ಸಾರ್ವಜನಿಕ ಉತ್ಸವ ಮಂಡಲದ ಪ್ರವೇಶ ದ್ವಾರದ ಬಳಿ ಮುಂಜಾನೆ ಸುಮಾರು 2:20ಕ್ಕೆ ಈ ದುರಂತ ನಡೆದಿದೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ನೆರೆದಿದ್ದ ಸಂದರ್ಭದಲ್ಲಿ ಪ್ರವೇಶ ದ್ವಾರದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಕುಡಿಯುವ ನೀರಿನ ಸ್ಟಾಲ್ನಲ್ಲಿ ವಿದ್ಯುತ್ ಪ್ರವಾಹ ಸೋರಿಕೆಯಾಗಿದ್ದೇ ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ಮುಂಬೈ ಅಗ್ನಿಶಾಮಕ ದಳ, ಬಿಇಎಸ್ಟಿ (BEST) ಮತ್ತು ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಿ, ಆ ಭಾಗವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಯಿತು.
ಹಬ್ಬದ ಬೆಳಕಿನ ಅಲಂಕಾರ ಮತ್ತು ತಂಪಾದ ಪಾನೀಯಗಳ ಸ್ಟಾಲ್ಗಾಗಿ ದತ್ತಾರಾಮ್ ಲಾಡ್ ಮಾರ್ಗದ ದಿಗ್ವಿಜಯ್ ಮಿಲ್ ಚಾಲ್ ಬಳಿ ಅಳವಡಿಸಲಾಗಿದ್ದ ತಾತ್ಕಾಲಿಕ ಮೀಟರ್ ಸಂಖ್ಯೆ M217392 ಅನ್ನು BEST ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಗೂ ಮುನ್ನವೇ ಸ್ಥಳೀಯ ಎಲೆಕ್ಟ್ರಿಷಿಯನ್ ವೈರಿಂಗ್ ಮತ್ತು ಎಂಸಿಬಿ (MCB) ಸಂಪರ್ಕವನ್ನು ಕಡಿತಗೊಳಿಸಿದ್ದು, ಪ್ರಸ್ತುತ ಸ್ಥಳೀಯ ಪೊಲೀಸರು ಹಾಗೂ ಮೀಟರ್ ಇನ್ಸ್ಪೆಕ್ಟರ್ ಘಟನೆಯ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಆರು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಬೈಕುಲ್ಲಾದ ಮಸೀನಾ ಆಸ್ಪತ್ರೆಗೆ ಕರೆದೊಯ್ಯಲಾದ 8 ವರ್ಷದ ಬಾಲಕಿ ರಘಿಣಿ ಘನಶ್ಯಾಮ್ ಯಾದವ್ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಹಾಗೆಯೇ ಪರೇಲ್ನ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 33 ವರ್ಷದ ಸುಜಾತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ ಗಾಯಾಳುಗಳಾದ 12 ವರ್ಷದ ರೂಹಿ ಸಿಂಗ್ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಗಾಯಾಳುಗಳಾದ ಕಿರಣ್ ಅಕ್ಬರ್ ನಾಯಕ್ (19), ತನ್ವಿ ನರೇಶ್ ಹಂಡೆ (19) ಮತ್ತು ಸಾಹಿಲ್ ಸಂದೀಪ್ ತಾರೆ (19) ಮಸೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.




