
ಡೊಂಬಿವಲಿ: ಬಿಲ್ಲವರ ಅಸೋಸಿಯೇಷನ್ ಮುಂಬೈನ ಡೊಂಬಿವಲಿ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಜುಲೈ 29ರ ಬುಧವಾರದಂದು ಸ್ಥಳೀಯ ಸಮಿತಿಯ ಕಚೇರಿ/ಸಭಾಂಗಣದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ಶ್ರದ್ಧಾ-ಭಕ್ತಿಗಳೊಂದಿಗೆ ಆಚರಿಸಲಾಯಿತು.
ಬುಧವಾರ ಮಧ್ಯಾಹ್ನ 3:00 ಗಂಟೆಯಿಂದ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ಜರುಗಿದವು. ಸಮಿತಿಯ ಭಜನಾ ಮಂಡಳಿಯ ಸದಸ್ಯರಿಂದ ದಿವ್ಯ ಭಜನಾ ಸಂಕೀರ್ತನೆ ಜರುಗಿತು.



ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಭಜನಾ ಸದಸ್ಯರ ಮುದ್ದಿನ ಮಕ್ಕಳಿಂದ ಮನಮೋಹಕ ಕುಣಿತ ಭಜನೆ ನೆರವೇರಿತು. ಮಕ್ಕಳು ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಪ್ರದರ್ಶಿಸಿದ ಕುಣಿತ ಭಜನೆಯು ನೆರೆದಿದ್ದ ಸಮಾಜ ಬಾಂಧವರ ಮನಸೂರೆಗೊಂಡಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕುಣಿತ ಭಜನೆಯ ತರಬೇತಿ ನೀಡಿದ ಶ್ರುತಿ ಪೂಜಾರಿ ಅವರಿಗೆ, ಅವರ ಶಿಷ್ಯರು/ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ‘ಗುರು ವಂದನೆ’ ಸಲ್ಲಿಸಿ, ಗೌರವಿಸಿ ಆಶೀರ್ವಾದ ಪಡೆದುಕೊಂಡರು.

ಈ ಶ್ರದ್ಧಾ ಭಕ್ತಿಯ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕೇಂದ್ರ ಕಚೇರಿಯ ಕೋಶಾಧಿಕಾರಿ ರವಿ ಎಸ್. ಸನಿಲ್, ಡೊಂಬಿವಿಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ, ಕೋಶಾಧಿಕಾರಿ ಆನಂದ ಪೂಜಾರಿ, ಕಾರ್ಯಕಾರಿ ಸಮಿತಿಯ ಸಮಸ್ತ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಮತ್ತು ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಗುರುಪೂಜೆ, ಮಹಾಮಂಗಳಾರತಿ ನೆರವೇರಿ, ತದನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ಜರುಗಿತು.
ಸಮಿತಿಯ ಗೌರವ ಕಾರ್ಯದರ್ಶಿ ಜೆ. ಜೆ. ಕೋಟ್ಯಾನ್ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಸಾಂಗವಾಗಿ ಹಾಗೂ ಅಚ್ಚುಕಟ್ಟಾಗಿ ನಿರೂಪಿಸಿದರು.






