29 C
Mumbai
August 16, 2026
Mumbai News Kannada
ಸುದ್ದಿ

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ





ಕಾರ್ಕಳ ತಾಲೂಕಿನ ಕೆರ್ವಾಶೆಯ ಹೆಮ್ಮೆಯ ಪ್ರತಿಭೆ ಸಿಂಚನ್ ಎ. ಪೂಜಾರಿ ಅವರು ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ. ಜೂನ್ 26ರಿಂದ 28, 2026ರವರೆಗೆ ನಡೆದ ‘ವರ್ಲ್ಡ್ ಫಿಟ್ನೆಸ್ ಫೆಡರೇಶನ್ ಆಫ್ ಯೋಗಾಸನ ಸ್ಪೋರ್ಟ್ಸ್’ (World Fitness Federation of Yogasana Sports) ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯ ‘ಆರ್ಟಿಸ್ಟಿಕ್ ಸೋಲೋ’ (ARTISTIC SOLO) ವಿಭಾಗದಲ್ಲಿ ಇವರು ಕರ್ನಾಟಕವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಅದ್ಭುತ ಸಾಧನೆಯ ಮೂಲಕ ಥೈಲ್ಯಾಂಡ್‌ನಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವರು ಅರ್ಹತೆ ಪಡೆದಿದ್ದಾರೆ.
ಕಾರ್ಕಳದ ಜೋಕ್ಲಕಟ್ಟೆ ಕೆರ್ವಾಶೆಯ ಮಂಜುನಾಥ ನಿಲಯದ ನಿವಾಸಿಗಳಾದ ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ದಂಪತಿಯ ದ್ವಿತೀಯ ಪುತ್ರನಾಗಿರುವ ಸಿಂಚನ್, ಆರಂಭದಿಂದಲೂ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಅಪ್ರತಿಮ ಪ್ರತಿಭೆಯನ್ನು ತೋರಿದವರು. ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ಇವರು, ಬಳಿಕ ಕ್ರೈಸ್ಟ್‌ಕಿಂಗ್ ಇಂಗ್ಲಿಷ್ ಮೀಡಿಯಂ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 96.86ರಷ್ಟು ಅತ್ಯುನ್ನತ ಅಂಕಗಳಿಸಿ ತೇರ್ಗಡೆಯಾಗಿದ್ದರು. ಪ್ರಸ್ತುತ ಮಂಗಳೂರಿನ ವಾಮಂಜೂರಿನಲ್ಲಿರುವ ಪ್ರತಿಷ್ಠಿತ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (St. Joseph Engineering College) ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.
ಸಿಂಚನ್ ಅವರ ಈ ಯೋಗ ಸಾಧನೆಯ ಹಿಂದಿನ ಹಾದಿ ಅತ್ಯಂತ ಪ್ರೇರಣಾದಾಯಕವಾಗಿದೆ. ಇವರಿಗೆ ಯೋಗಾಸನದ ಮೇಲಿನ ಆಸಕ್ತಿ ಮತ್ತು ತರಬೇತಿಯು ಮೊರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಜಗಧೀಶ್ ಅವರಿಂದ ಲಭಿಸಿತ್ತು. ತದನಂತರ, ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರಾದ ಕೃಷ್ಣ ಪ್ರಸಾದ್ ಅವರು ಸಿಂಚನ್ ಅವರಿಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿದ್ದರು. ಈಗಾಗಲೇ ಮೂರು ಬಾರಿ ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ಇವರು, ಇದೀಗ ಕಠಿಣ ಪರಿಶ್ರಮ, ಹೆತ್ತವರ ಹಾಗೂ ಗುರುಗಳ ನಿರಂತರ ಬೆಂಬಲದೊಂದಿಗೆ ಅಂತರರಾಷ್ಟ್ರೀಯ ವೇದಿಕೆಗೆ ಲಗ್ಗೆ ಇಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ತಾಯ್ನಾಡಿನ ಕೀರ್ತಿಯನ್ನು ಬೆಳಗಲಿರುವ ಸಿಂಚನ್ ಪೂಜಾರಿ ಅವರಿಗೆ ಗಣ್ಯರು ಹಾಗೂ ಸಾರ್ವಜನಿಕರಿಂದ ಹಾರ್ದಿಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.



Related posts

ಮುಲುಂಡ್:ಸದಾಶಿವ ಕುಕ್ಯಾನ್ ನಿಧನ

Mumbai News Desk

ಯಕ್ಷ ಪ್ರೇಮಿಗಳ, ಕಲಾಭಿಮಾನಿಗಳ ಮನ ಗೆದ್ದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರ ಯಕ್ಷಗಾನ.

Mumbai News Desk

ನಾಸಿಕ್‌ನಲ್ಲಿ ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಕಟೀಲು:ಚಂದು ಪೂಜಾರಿ ನಿಧನ.

Mumbai News Desk

ದ್ವಿತೀಯ ಪಿಯುಸಿ ಪರೀಕ್ಷೆ : 96% ಅಂಕ ಪಡೆದ ಸೃಜನ್ ಬಿ ಮೊಗವೀರ

Mumbai News Desk

ಡಾ.ಈಶ್ವರ ಅಲೆವೂರು ಅವರಿಗೆ  ಕೆ.ವಿ.ಆರ್ ಠಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ

Mumbai News Desk