27.9 C
Mumbai
June 29, 2026
Mumbai News Kannada
ಸುದ್ದಿ

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ





ಕಾರ್ಕಳ ತಾಲೂಕಿನ ಕೆರ್ವಾಶೆಯ ಹೆಮ್ಮೆಯ ಪ್ರತಿಭೆ ಸಿಂಚನ್ ಎ. ಪೂಜಾರಿ ಅವರು ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ. ಜೂನ್ 26ರಿಂದ 28, 2026ರವರೆಗೆ ನಡೆದ ‘ವರ್ಲ್ಡ್ ಫಿಟ್ನೆಸ್ ಫೆಡರೇಶನ್ ಆಫ್ ಯೋಗಾಸನ ಸ್ಪೋರ್ಟ್ಸ್’ (World Fitness Federation of Yogasana Sports) ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯ ‘ಆರ್ಟಿಸ್ಟಿಕ್ ಸೋಲೋ’ (ARTISTIC SOLO) ವಿಭಾಗದಲ್ಲಿ ಇವರು ಕರ್ನಾಟಕವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಅದ್ಭುತ ಸಾಧನೆಯ ಮೂಲಕ ಥೈಲ್ಯಾಂಡ್‌ನಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವರು ಅರ್ಹತೆ ಪಡೆದಿದ್ದಾರೆ.
ಕಾರ್ಕಳದ ಜೋಕ್ಲಕಟ್ಟೆ ಕೆರ್ವಾಶೆಯ ಮಂಜುನಾಥ ನಿಲಯದ ನಿವಾಸಿಗಳಾದ ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ದಂಪತಿಯ ದ್ವಿತೀಯ ಪುತ್ರನಾಗಿರುವ ಸಿಂಚನ್, ಆರಂಭದಿಂದಲೂ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಅಪ್ರತಿಮ ಪ್ರತಿಭೆಯನ್ನು ತೋರಿದವರು. ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ಇವರು, ಬಳಿಕ ಕ್ರೈಸ್ಟ್‌ಕಿಂಗ್ ಇಂಗ್ಲಿಷ್ ಮೀಡಿಯಂ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 96.86ರಷ್ಟು ಅತ್ಯುನ್ನತ ಅಂಕಗಳಿಸಿ ತೇರ್ಗಡೆಯಾಗಿದ್ದರು. ಪ್ರಸ್ತುತ ಮಂಗಳೂರಿನ ವಾಮಂಜೂರಿನಲ್ಲಿರುವ ಪ್ರತಿಷ್ಠಿತ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (St. Joseph Engineering College) ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.
ಸಿಂಚನ್ ಅವರ ಈ ಯೋಗ ಸಾಧನೆಯ ಹಿಂದಿನ ಹಾದಿ ಅತ್ಯಂತ ಪ್ರೇರಣಾದಾಯಕವಾಗಿದೆ. ಇವರಿಗೆ ಯೋಗಾಸನದ ಮೇಲಿನ ಆಸಕ್ತಿ ಮತ್ತು ತರಬೇತಿಯು ಮೊರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಜಗಧೀಶ್ ಅವರಿಂದ ಲಭಿಸಿತ್ತು. ತದನಂತರ, ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರಾದ ಕೃಷ್ಣ ಪ್ರಸಾದ್ ಅವರು ಸಿಂಚನ್ ಅವರಿಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿದ್ದರು. ಈಗಾಗಲೇ ಮೂರು ಬಾರಿ ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ಇವರು, ಇದೀಗ ಕಠಿಣ ಪರಿಶ್ರಮ, ಹೆತ್ತವರ ಹಾಗೂ ಗುರುಗಳ ನಿರಂತರ ಬೆಂಬಲದೊಂದಿಗೆ ಅಂತರರಾಷ್ಟ್ರೀಯ ವೇದಿಕೆಗೆ ಲಗ್ಗೆ ಇಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ತಾಯ್ನಾಡಿನ ಕೀರ್ತಿಯನ್ನು ಬೆಳಗಲಿರುವ ಸಿಂಚನ್ ಪೂಜಾರಿ ಅವರಿಗೆ ಗಣ್ಯರು ಹಾಗೂ ಸಾರ್ವಜನಿಕರಿಂದ ಹಾರ್ದಿಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.



Related posts

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜು16 ರಿಂದು 27 ವರೆಗೆ ಮುಂಬಯಿ ನಗರದಲ್ಲಿ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಲಕ್ಷಾಂತರ ಜನರಿಂದ ಹೂಮಳೆ ಸುರಿಸಿ ಸ್ವಾಗತ

Mumbai News Desk

1,000 ಕ್ಕೂ ಹೆಚ್ಚು ವಿಮಾನ ರದ್ದತಿಗೆ ಇಂಡಿಗೋ ಕ್ಷಮೆಯಾಚಣೆ ; ಡಿಸೆಂಬರ್ 10 ರಿಂದ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (14/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk