
ಧಾರ್ಮಿಕ ಕಾರ್ಯದಿಂದ ಸಮಾಜ ಬಾಂಧವರ ಒಗ್ಗಟ್ಟು ಬಲಿಷ್ಠವಾಗಲಿ: ಮಯೂರ್ ಉಳ್ಳಾಲ್
ಮುಂಬಯಿ: ಕುಲಶೇಖರ, ಮಂಗಳೂರು ಶ್ರೀ ವೀರನಾರಾಯಣ ದೇವಸ್ಥಾನದ 48 ವಾರಗಳ ಭಜನಾ ಸಂಕೀರ್ತನೆಯ ಅಂಗವಾಗಿ ಭಜನೆ ಮತ್ತು ಕುಣಿತ ಭಜನೆ ಕಾರ್ಯಕ್ರಮವು ಜುಲೈ 22ರಂದು ಬುಧವಾರ ಬೆಳಿಗ್ಗೆ ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನಾ ಸೇವೆ ನಡೆಯಲಿದ್ದು, ಸಂಜೆ 7 ಗಂಟೆಗೆ ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರನಾರಾಯಣ ದೇವರಿಗೆ ರಂಗಪೂಜೆ ನೆರವೇರಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ. ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರು, “ಇಂದು ಭಜನಾ ಮಂಗಳೋತ್ಸವ ಕಾರ್ಯದಲ್ಲಿ ಸಮಾಜ ಬಾಂಧವರು ಹಾಗೂ ಶ್ರೀ ವೀರನಾರಾಯಣ ದೇವರ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದು, ಈ ಮೂಲಕ ಸಮಾಜ ಬಾಂಧವರ ಒಗ್ಗಟ್ಟು ಬಲಿಷ್ಠವಾಗಲಿ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭಜನಾ ಸಾರಥ್ಯ ವಹಿಸಿದ ಲೋಕೇಶ್ ಬಜಾಲ್ ದಂಪತಿಯನ್ನು ಸನ್ಮಾನಿಸಲಾಯಿತು.
೪೮ ವಾರಗಳ ಭಜನಾ ಸಂಕೀರ್ತನೆ, ಮಂಗಳೋತ್ಸವ ಹಾಗೂ ರಂಗಪೂಜೆಗೆ ಮುಂಬಯಿಯ ಸಮಾಜ ಸೇವಕಿ ರತ್ನಾ ಡಿ. ಕುಲಾಲ್, ಪತ್ರಕರ್ತ ಬಿ. ದಿನೇಶ್ ಕುಲಾಲ್ ಹಾಗೂ ಕಾನೂನು ವಿದ್ಯಾರ್ಥಿನಿ ಲಾಸ್ಯಾ ಡಿ. ಕುಲಾಲ್ സേವಾಕರ್ತರಾಗಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ಅಟ್ಲೂರು ಮತ್ತು ಸದಸ್ಯರು, ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ಅಧ್ಯಕ್ಷರಾದ ಕೆ. ಸುಂದರ್ ಕುಲಾಲ್ ಶಕ್ತಿನಗರ ಮತ್ತು ಸದಸ್ಯರು, ದೇವಸ್ಥಾನದ ಮಾತೃ ಮಂಡಳಿಯ ಅಧ್ಯಕ್ಷೆ ಮಮತಾ ದೇವದಾಸ್ ಮತ್ತು ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ. ದಾಮೋದರ, ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಸುರೇಶ್ ಕುಲಾಲ್ ಮಂಗಳದೇವಿ, ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಗಿರಿಧರ ಮೂಲ್ಯ, ಕಾಸರಗೋಡು ಕುಲಾಲ ಸಂಘದ ಅಧ್ಯಕ್ಷ ನ್ಯಾ. ರವೀಂದ್ರ ಮುನ್ನಿಪ್ಪಾಡಿ ಉಪಸ್ಥಿತರಿದ್ದರು. ಪ್ರವೀಣ್ ಭಸ್ತಿ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.





