
ಭಾರತ್ ಬ್ಯಾಂಕ್ ಉದ್ಯಮಿಗಳ ಯಶಸ್ಸಿನ ಪಯಣದಲ್ಲಿ ನಂಬಿಕೆಯ ಸಾರಥಿ – ಕಿಶನ್ ಶೆಟ್ಟಿ
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ, ಮಾ.16: ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ನ ವಿಲೇ ಪಾರ್ಲೆ ಪೂರ್ವ ಶಾಖೆಯ 30ನೇ ವಾರ್ಷಿಕೋತ್ಸವವನ್ನು ಮಾರ್ಚ್ 16ರಂದು ಸಂಭ್ರಮದಿಂದ ಆಚರಿಸಲಾಯಿತು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಅವರು 30ನೇ ವಾರ್ಷಿಕೋತ್ಸವದ ಪ್ರಯುಕ್ತ ಕೇಕ್ ಕತ್ತರಿಸಿ ದೀಪ ಬೆಳಗಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಚಾನೆಲ್ ಫ್ರೈಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರೂ, ಮಂಗಳೂರಿನ ಅಡ್ಯಾರ್ ಗಾರ್ಡನ್ ಮಾಲಕರೂ ಆಗಿರುವ ಕಿಶನ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಭಾರತ್ ಬ್ಯಾಂಕ್ ನನ್ನ ಉದ್ಯಮದ ಯಶಸ್ಸಿನ ಪಯಣದಲ್ಲಿ ನಂಬಿಕೆಯ ಕೈಹಿಡಿದ ಸಾರಥಿ
ಸಂಸ್ಥೆಯೊಂದರ ಯಶಸ್ಸಿನ ಹಿಂದೆ ಕೇವಲ ಬಂಡವಾಳವಿರುವುದಿಲ್ಲ, ಬದಲಾಗಿ ಅಚಲವಾದ ನಂಬಿಕೆ ಮತ್ತು ಪ್ರೋತ್ಸಾಹವಿರುತ್ತದೆ. ಭಾರತ್ ಬ್ಯಾಂಕ್ ಅಂತಹ ನಂಬಿಕೆಗೆ ಮತ್ತೊಂದು ಹೆಸರಾಗಿದೆ. ಅಂದು ಬ್ಯಾಂಕಿನೊಂದಿಗೆ ವ್ಯವಹಾರ ಆರಂಭಿಸಿದ ಆ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ಮನಸ್ಸಿನಲ್ಲಿ ಹಸಿರಾಗಿವೆ. ನಿತ್ಯಾನಂದ ಕೋಟ್ಯಾನ್ ಮತ್ತು ಸಂತೋಷ್ ಅವರು ನನ್ನ ಬಳಿ ಬಂದು ಅತ್ಯಂತ ಆಪ್ತವಾಗಿ ಮಾತುಕತೆ ನಡೆಸಿ, ಬ್ಯಾಂಕಿನ ವೈವಿಧ್ಯಮಯ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ನೀಡಿದ ಸವಿಸ್ತಾರವಾದ ವಿವರಣೆ ನನ್ನಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ಅವರ ಅಂದಿನ ಆ ಮಾರ್ಗದರ್ಶನ ಮತ್ತು ಆತ್ಮೀಯತೆ ಒಬ್ಬ ಉದ್ಯಮಿಗೆ ಬೇಕಾದ ಧೈರ್ಯವನ್ನು ನೀಡಿತ್ತು.

ಆರಂಭದಲ್ಲಿ ಸ್ವಲ್ಪ ಕಾಲ ಆಲೋಚಿಸಿದರೂ, ನಂತರ ನಮ್ಮೂರಿನವರೇ ಕಟ್ಟಿ ಬೆಳೆಸಿದ, ನಮ್ಮ ಮಣ್ಣಿನ ಸತ್ವವಿರುವ ಬ್ಯಾಂಕಿನಲ್ಲೇ ಆರ್ಥಿಕ ವ್ಯವಹಾರವನ್ನು ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆ. ಅಂದು ಭಾರತ್ ಬ್ಯಾಂಕ್ನೊಂದಿಗೆ ಬೆಸೆದ ಆ ಬೆಸುಗೆ, ಇಂದು ನನ್ನ ಉದ್ಯಮವು ಬೃಹತ್ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆಯಲು ಮುಖ್ಯ ಕಾರಣವಾಗಿದೆ. ಬ್ಯಾಂಕ್ ಎಂದರೆ ಕೇವಲ ಹಣದ ವಹಿವಾಟಲ್ಲ, ಅದೊಂದು ಸುದೃಢವಾದ ಸಂಬಂಧ ಎಂಬುದು ಇಲ್ಲಿನ ಪ್ರತಿಯೊಂದು ಅನುಭವದಲ್ಲೂ ಸಾಬೀತಾಗಿದೆ.ಈ ಯಶಸ್ಸಿನ ಹಾದಿಯಲ್ಲಿ ಬ್ಯಾಂಕಿನ ಪ್ರಬಂಧಕರು ಮತ್ತು ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರ ಅತ್ಯಂತ ಅನನ್ಯವಾದದ್ದು. ಅವರ ಕಾರ್ಯವೈಖರಿ, ವೃತ್ತಿಪರತೆ ಮತ್ತು ಗ್ರಾಹಕರನ್ನು ಗೌರವದಿಂದ ನಡೆಸಿಕೊಳ್ಳುವ ರೀತಿ ಅತ್ಯಂತ ಶ್ಲಾಘನೀಯವಾಗಿದೆ. ಈಗಿನ ಬ್ಯಾಂಕಿನ ಕಾರ್ಯಧ್ಯಕ್ಷರಾಗಿರುವ. ಸೂರ್ಯಕಾಂತ್ ಜಯ ಸುವರ್ಣ ರು ಪ್ರತಿಯೊಂದು ಹಂತದಲ್ಲೂ ಅವರು ನೀಡುವ ಉತ್ಕೃಷ್ಟ ಮಟ್ಟದ ಸೇವೆ ಉದ್ಯಮದ ಏಳಿಗೆಗೆ ಪೂರಕವಾಗಿದೆ. ಸಣ್ಣ ಉದ್ಯಮಿಯನ್ನು ದೊಡ್ಡ ಮಟ್ಟಕ್ಕೆ ಬೆಳೆಸುವಲ್ಲಿ ಭಾರತ್ ಬ್ಯಾಂಕ್ ತೋರಿದ ಈ ಕಾಳಜಿ ಸದಾ ಸ್ಮರಣೀಯ. ಈ ಸಂಸ್ಥೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಸಾವಿರಾರು ಉದ್ಯಮಿಗಳಿಗೆ ಆಸರೆಯಾಗಿ ಮತ್ತಷ್ಟು ಪ್ರಗತಿಯ ಪಥದಲ್ಲಿ ಸಾಗಲಿ ಎಂಬುದು ನನ್ನ ಹೃತೂರ್ವಕ ಹಾರೈಕೆಗಳು ಎಂದರು
ಮತ್ತೊಬ್ಬ ಗ್ರಾಹಕರಾದ ಬಂಟ್ಸ್ ಹೋಟೆಲ್ ಪ್ರೈವೇಟ್ ಲಿಮಿಟೆಡ್ನ ಧನಂಜಯ ಶೆಟ್ಟಿಯವರು ಮಾತನಾಡಿ, ನಾನು ಈ ಪ್ರದೇಶದಲ್ಲಿ ಹೋಟೆಲ್ ಉದ್ಯಮ ಆರಂಭಿಸಿದಾಗ ಜಯ ಸುವರ್ಣ ಅವರು ವೈಯಕ್ತಿಕವಾಗಿ ಹಾಗೂ ಬ್ಯಾಂಕಿನ ಮೂಲಕ ಸಹಕಾರ ನೀಡಿದ್ದಾರೆ. ಆ ಬೆಂಬಲದಿಂದ ಇಂದು ಯಶಸ್ಸು ಸಾಧಿಸಲು ಸಾಧ್ಯವಾಯಿತು. ಭಾರತ್ ಬ್ಯಾಂಕ್ ನಿಜವಾದ ಗ್ರಾಹಕರ ಬ್ಯಾಂಕ್ ಆಗಿ ಸೇವೆ ಸಲ್ಲಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಚಂದ್ರಶೇಖರ ಪೂಜಾರಿ, ಮೋಹನದಾಸ್ ಪೂಜಾರಿ, ಸುರೇಶ್ ಸುವರ್ಣ, ನಿರಂಜನ್ ಪೂಜಾರಿ, ಆಡಳಿತ ಮಂಡಳಿಯ ನಿತ್ಯಾನಂದ ಡಿ ಕೋಟ್ಯಾನ್, ಅನಿಲಕುಮಾರ್ ಅಮೀನ್ (EX CGM), ಅಶ್ವಜಿತ್ ಹೆಜಮಾಡಿ (ಚಾರ್ಟರ್ಡ್ ಅಕೌಂಟೆಂಟ್), ಮೇಘರಾಜ್ ಜೈನ್ (ಮಂಗಲ್ ಗ್ರೂಪ್ ಆಫ್ ಕಂಪನೀಸ್), ಅರುಣ್ ಭೋಸ್ಲೆ (ನಿವೃತ್ತ ಇನ್ಸ್ಪೆಕ್ಟರ್, ಮುಂಬೈ ಪೊಲೀಸ್), ನವೀನ್ ಪೂಜಾರಿ (ಸಾಮ್ರಾಟ್ ಹೋಟೆಲ್), ಉದ್ಯಮಿಗಳಾದ ರಮೇಶ್ ಜೋಶಿ, ಮುಖೇಶ್ ಶರ್ಮಾ, ಅಶೋಕ್ ಪಾಂಚಾಲ್, ಮುಖೇಶ್ ದೇಸಾಯಿ, ನವೀನ್ ಅಮೀನ್ (ಕೇಂದ್ರ ಕಚೇರಿ AGM), ಪೂರ್ಣೇಶ್ ಕರ್ಕೇರ (ಕೇಂದ್ರ ಕಚೇರಿ ಮ್ಯಾನೇಜರ್), ಹರಿಣಾಕ್ಷಿ ಕೋಟ್ಯಾನ್ (ನಿವೃತ್ತ ಸೀನಿಯರ್ ಮ್ಯಾನೇಜರ್), ಕಸ್ತೂರಿ ಅಮೀನ್ (ಹಿರಿಯ ಪ್ರಬಂಧಕರು, ಅಂಧೇರಿ ಪಶ್ಚಿಮ ಶಾಖೆ), ಸಂತೋಷ್ ಸಾಲಿಯಾನ್ (ಮುಖ್ಯ ಪ್ರಬಂಧಕರು, ಗೋರೆಗಾಂವ್ ಪೂರ್ವ ಶಾಖೆ), ಪ್ರಿಯಾ ಪೂಜಾರಿ ( ಪ್ರಬಂಧಕರು, ಗೋರೆಗಾಂವ್ ಪಶ್ಚಿಮ ಶಾಖೆ), ಕಲಿನಾ ಶಾಖೆಯ ಪ್ರಬಂಧಕಿ ಸುರೇಖಾ ರಾವ್ ಹಾಗೂ ವಿವಿಧ ಶಾಖೆಗಳ ರಾಜೇಶ್ ಬಂಗೇರ, ರಾಕೇಶ್ ಸಶಿಹಿತ್ಲು, ಮಹೇಶ್ ಕಾರ್ಕಲ್, ಪವನ್ ಜೆ ಪೂಜಾರಿ, ನಿತೇಶ್ ಎಸ್ ಪೂಜಾರಿ, ಕಾರ್ತಿಕ್ ಕೆ ಪೂಜಾರಿ, ಶಶಾಂಕ್ ಪೂಜಾರಿ, ಸುನಿಲ್ ಗುಜರನ್ ಹಾಗೂ ಭಾರತ್ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಶಾಖೆಯ ಮುಖ್ಯ ಪ್ರಬಂಧಕರಾದ ದಿವಾಕರ್ ಎನ್ ಪೂಜಾರಿ ಮಾತನಾಡಿ, ಬ್ಯಾಂಕಿನ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದಿಂದ ಗ್ರಾಹಕರಿಗೆ ಅನುಕೂಲವಾಗುವ ಎಲ್ಲಾ ಸೇವೆಗಳನ್ನು ನೀಡುತ್ತಿದ್ದೇವೆ. ಸಿಬ್ಬಂದಿಯ ಪ್ರೋತ್ಸಾಹ ಹಾಗೂ ಉತ್ತಮ ಸೇವೆಯಿಂದ ಈ ಶಾಖೆ ಉತ್ತಮ ವ್ಯವಹಾರ ನಡೆಸುತ್ತಿದೆ ಎಂದು ಹೇಳಿದರು.
ಶಾಖೆಯ ಉಪ ಪ್ರಬಂಧಕರಾದ ಜ್ಯೋತಿ ಬಂಗೇರ ಅವರು ಸ್ವಾಗತಿಸಿದರು. ಶೇಖರ್ ಶಾಂತಿ ಅವರು ಗಣಹೋಮ ನೆರವೇರಿಸಿದರು. ಪೂಜೆಯ ಯಜಮಾನಿಕೆಯನ್ನು ಬ್ಯಾಂಕಿನ ಸಿಬ್ಬಂದಿಯಾದ ಶೈಲೇಶ್ ಎಸ್ ಪೂಜಾರಿ ಹಾಗೂ ದೀಪಾ ಎಸ್ ಪೂಜಾರಿ ವಹಿಸಿದ್ದರು.
ಗ್ರಾಹಕರ ತೃಪ್ತಿಯಿಂದಲೇ ಬ್ಯಾಂಕ್ ಹೆಮ್ಮೆರವಾಗಿ ಬೆಳೆದಿದೆ: ಸೂರ್ಯಕಾಂತ್ ಜಯ ಸುವರ್ಣ
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಅವರು 30ನೇ ವಾರ್ಷಿಕೋತ್ಸವದ ಪ್ರಯುಕ್ತ ಕೇಕ್ ಕತ್ತರಿಸಿ ಶುಭ ಹಾರೈಸುತ್ತಾ ”ಭಾರತ್ ಬ್ಯಾಂಕ್ ಇಂದು ಅತ್ಯುತ್ತಮ ಗ್ರಾಹಕ ಸ್ನೇಹಿ ಸೇವೆ ಮತ್ತು ಗ್ರಾಹಕರ ತೃಪ್ತಿಯಿಂದಲೇ ತನ್ನ ದೊಡ್ಡ ಶಕ್ತಿಯನ್ನು ಕಂಡುಕೊಂಡಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಗ್ರಾಹಕ ಸ್ನೇಹಿ ಬ್ಯಾಂಕ್’ ಎಂಬ ನಮ್ಮ ಮೂಲ ಧ್ಯೇಯವಾಕ್ಯಕ್ಕೆ ನಾವೆಲ್ಲರೂ ಸದಾ ಬದ್ಧರಾಗಿರಬೇಕು ಮತ್ತು ಈ ಸಕಾರಾತ್ಮಕ ಗುಣವನ್ನು ಎಂದಿಗೂ ಕೈಬಿಡಬಾರದು. ನಾವೆಲ್ಲರೂ ಇದೇ ರೀತಿ ಶ್ರದ್ಧೆಯಿಂದ ಶ್ರಮಿಸುವ ” ಎಂದರು.




