
ಬ್ರಹ್ಮಾವರ: ತಾಲ್ಲೂಕಿನ ಆರೂರು ಕೀರ್ತಿನಗರದ ಸ್ಪಂದನ ಯುವ ವೃಂದ (ರಿ.) ತನ್ನ ಹತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ಸ್ಪಂದನ ದಶ ಸಂಭ್ರಮ-2026’ ಮತ್ತು ‘ಸ್ಪಂದನ ಸಾಧಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಮೇ 3ರಂದು ಆರೂರಿನ ಶಾರದಾ ಪ್ರೌಢಶಾಲೆಯ ಮುಂಡ್ಕಿನಜಡ್ಡು ಮೈದಾನದಲ್ಲಿ ಹಮ್ಮಿಕೊಂಡಿದೆ.

ಭಾನುವಾರ ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ವೈವಿಧ್ಯದೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ರಾತ್ರಿ 8 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ‘ಸ್ಪಂದನ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ಸ್ಪಂದನ ಯುವ ವೃಂದದ ಅಧ್ಯಕ್ಷ ವೀರಪ್ಪ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರೋಟೇರಿಯನ್ ಆರೂರು ತಿಮ್ಮಪ್ಪ ಶೆಟ್ಟಿ ಅವರಿಗೆ ‘ಸ್ಪಂದನ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ. ಶ್ರೀನಿವಾಸ ರಾವ್ ಎ.ಎನ್. (ವೈದ್ಯಕೀಯ), ವಸಂತ ನಾಯ್ಕ (ಗಡಿ ರಕ್ಷಣಾ ಪಡೆ), ಸುಕೇಶ್ ಶೆಟ್ಟಿ (ನ್ಯಾಯವಾದಿ), ಕೆ. ನಾರಾಯಣ ಭಟ್ (ಶಿಕ್ಷಣ), ದೀಕ್ಷಾ ಬಿ. (ಭರತನಾಟ್ಯ), ವಾಸುದೇವ ಆಚಾರ್ಯ (ಕರಕುಶಲ), ರುಕ್ಮಿಣಿ ಹಂದೆ (ಕುಂಬಾರಿಕೆ), ಜಲಜ ಬಾಯಿ (ಕೃಷಿ), ಪ್ರಗತಿ ಕೆ. ನಾಯ್ಕ (ಚೆಸ್), ಪ್ರಣೀತ್ ಕೆ. ನಾಯ್ಕ (ಚೆಸ್) ಮತ್ತು ಶ್ರೇಯಸ್ (ಪೋಲ್ ವಾಲ್ಟ್) ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.


ಸಾಂಸ್ಕೃತಿಕ ರಸದೌತಣ:
ಸಂಜೆ 5ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 6.30ಕ್ಕೆ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಸಾರಥ್ಯದಲ್ಲಿ ‘ಯಕ್ಷಗಾನ ನಾಟ್ಯ ವೈಭವ’ ನಡೆಯಲಿದೆ. ರಾತ್ರಿ 9.30ಕ್ಕೆ ದೇವದಾಸ್ ಕಾಪಿಕಾಡ್ ನಿರ್ದೇಶನದ ತುಳು ಹಾಸ್ಯ ನಾಟಕ ‘ಎನ್ನೇ ಕಥೆ’ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನೀಲಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆರೂರು ನಾರಾಯಣ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ರಾಜೀವ್ ಕುಲಾಲ್ ತಿಳಿಸಿದ್ದಾರೆ.

ಸಹಕಾರ: ಯುವಶಕ್ತಿ ಆರೂರು
ಲೇಖನ: ಆರೂರು ಸೀತಾರಾಮ ಶೆಟ್ಟಿ ಡೊಂಬಿವಲಿ ಮುಂಬೈ.




